ಬೆಂಗಳೂರು : ಪತ್ರಕರ್ತರು ಮತ್ತು ಪತ್ರಿಕೆಗೆ ಸಂಬಂಧಿಸಿದ ಯಾವುದೇ ವೃತ್ತಿಯ ಸಮಸ್ಯೆಗಳಿದ್ದರೂ ನಾನು ಸ್ಪಂದಿಸಲು ಸದಾ ಸಿದ್ದ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಪುನರುಚ್ಚರಿಸಿದರು.

ಬೆಂಗಳೂರಿನ ಗಾಂಧಿಭವನದಲ್ಲಿ ನಡೆದ ವಿಪ್ರ ಪತ್ರಕರ್ತರ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸಣ್ಣ ಪತ್ರಿಕೆಗಳ ಸಮಸ್ಯೆ ಕುರಿತು ನನಗೆ ಅರಿವಿದೆ. ನಾನೂ ಕೂಡ ಪೇಪರ್ ಹಾಕುವ ಕೆಲಸ ಮಾಡಿಕೊಂಡು ತಳಮಟ್ಟದಿಂದ ಈ ಸ್ಥಾನದವರೆಗೂ ಬಂದಿದ್ದೇನೆ. ಸ್ಥಳೀಯ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವವೂ ನನಗಿದೆ. ಹೀಗಾಗಿ ಪತ್ರಿಕೆಗಳ ಮತ್ತು ಪತ್ರಕರ್ತರ ವೃತ್ತಿಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ನ್ಯಾಯವಾಗಿ ಸ್ಪಂದಿಸಲು ಪ್ರಯತ್ನಿಸುತ್ತಿದ್ದೇವೆ ಎಂದರು.

ಪತ್ರಿಕೆಗಳ ಜಾಹೀರಾತು ದರ ಪರಿಸ್ಕರಣೆ ಕುರಿತು ಈಗಾಗಲೇ ಇಲಾಖೆಯ ಕಾರ್ಯದರ್ಶಿ ಹಾಗೂ ಆಯುಕ್ತರೊಂದಿಗೆ ಚರ್ಚಿಸಲಾಗಿದೆ. ಸಕಾರತ್ಮಕವಾಗಿ ಸ್ಪಂದನೆ ಸಿಕ್ಕಿದೆ ಎಂದರು.

ಡಿಜಿಟಲ್ ಮಾಧ್ಯಮಗಳಿಗೂ ಜಾಹೀರಾತು ನೀತಿಯ ಕರಡು ಸಿದ್ದಗೊಳ್ಳುತ್ತಿದೆ. ಶೀಘ್ರದಲ್ಲಿ ಅದು ಕೂಡ ಜಾರಿಗೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.

ಬ್ರಾಹ್ಮಣ ಸಮಾಜದ ಪತ್ರಿಕೆಗಳಿಗೆ ಜಾಹೀರಾತು ಕೊಡುವಲ್ಲಿ ಉಂಟಾಗಿದ್ದ ತಾಂತ್ರಿಕ ಸಮಸ್ಯೆಗಳನ್ನು ನೀಗಿಸಿದ್ದಕ್ಕಾಗಿ ಇದೇ ಸಂದರ್ಭದಲ್ಲಿ ಸಮುದಾಯದ ಪತ್ರಕರ್ತರು ಕೆ.ವಿ.ಪ್ರಭಾಕರ್ ಅವರನ್ನು ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಮಾಧ್ಯಮ ಸಲಹೆಗಾರರ ವಿಶೇಷಾಧಿಕಾರಿ ಕೆ ಪಿ ಪುಟ್ಟಸ್ವಾಮಯ್ಯ ಅವರನ್ನೂ ವಿಪ್ರ ಸಂಘದಿಂದ ಅಭಿನಂದಿಸಲಾಯಿತು.

ಕೋಲಾರವಾಣಿಯ ಮುರಳಿಪ್ರಸಾದ್,
ಕರಾವಳಿ ಅಲೆ ಶ್ರೀಮತಿ ರೋಹಿಣಿ ಸೀತಾರಾಮ್ , ಕೋಲಾರವಾಣಿಯ ಶ್ರೀಮತಿ ಅನುಸೂಯ ಎನ್ ಮೂರ್ತಿ, ಸಂಜೆ ಸಮಯ ಅನಿಲ್ ಕುಮಾರ್, ಹನುಮೇಶ್ ಯಾವಗಲ್. ಮುಂತಾದವರು ಭಾಗವಹಿಸಿದ್ದರು.