ಬೆಂಗಳೂರು :
ಗ್ರಾಮೀಣ ಜನಜೀವನದ ಗುಣಮಟ್ಟವನ್ನು ಹೆಚ್ಚಿಸುವ ಮತ್ತು ತಾಲೂಕು ಮಟ್ಟದಲ್ಲಿ ಆಡಳಿತವನ್ನು ಸುಧಾರಿಸುವ ಗುರಿಯೊಂದಿಗೆ ನೀತಿ ಆಯೋಗವು ಮಹತ್ವಾಕಾಂಕ್ಷಿ ಜಿಲ್ಲೆಗಳ ಕಾರ್ಯಕ್ರಮ ಮಾದರಿಯಲ್ಲಿಯೇ ಅನುಷ್ಠಾನಗೊಳಿಸಿರುವ ಮಹತ್ವಾಕಾಂಕ್ಷಿ ತಾಲೂಕು ಕಾರ್ಯಕ್ರಮ(ಎಬಿಪಿ)ದಲ್ಲಿ ತೋರಿದ ಸುಧಾರಣೆಗೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕು ಇಡೀ ದಕ್ಷಿಣ ಭಾರತದಲ್ಲಿಯೇ ಪ್ರಥಮ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿದೆ.

ಪ್ರಥಮ ಸ್ಥಾನದ ಜೊತೆಗೆ 1.5 ಕೋಟಿ ರೂ. ಪ್ರೋತ್ಸಾಹಧನವನ್ನು ಪಡೆದುಕೊಂಡಿರುವುದು ವಿಶೇಷ.
2ನೇ ಸ್ಥಾನವನ್ನು ತೆಲಂಗಾಣದ ಅದಿಲಾಬಾದ್ ಜಿಲ್ಲೆಯ ನರಣೂರು ಪಡೆದುಕೊಂಡಿದೆ. ಬ್ಲಾಕ್‌ಗಳು ನೀಡಿರುವ ಡೆಲ್ಟಾದ ಶ್ರೇಯಾಂಕ ಆಧರಿಸಿ ಈ ಘೋಷಣೆ ಮಾಡಲಾಗಿದೆ. ನೀತಿ ಆಯೋಗವು ಮಹತ್ವಾಕಾಂಕ್ಷಿಯ ತಾಲೂಕು(ಬ್ಲಾಕ್)ಗಳ ಕಾರ್ಯಕ್ರಮಕ್ಕೆ 2023 ಸೆಪ್ಟೆಂಬರ್ ತಿಂಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದರು.

ದೇಶದ 329 ಜಿಲ್ಲೆಗಳ 500 ಮಹತ್ವಾಕಾಂಕ್ಷೆಯ ತಾಲೂಕುಗಳಲ್ಲಿ ಮಹತ್ವಾಕಾಂಕ್ಷಿ ತಾಲೂಕು(ಬ್ಲಾಕ್) ಕಾರ್ಯಕ್ರಮ(ಎಬಿಪಿ) ಜಾರಿಗೊಳಿಸಲಾಗುತ್ತಿದೆ.
ಅಗತ್ಯ ಮೂಲಭೂತ ಸೇವೆಗಳಲ್ಲಿ ಸುಧಾರಣೆ, ಮಹಿಳೆಯರು ಮತ್ತು ಮಕ್ಕಳ ಸ್ಥಿತಿಗತಿ ಸುಧಾರಣೆಗೆ ಪ್ರಯತ್ನ, ತಾಲೂಕುಗಳಲ್ಲಿ ಸಾಮರ್ಥ್ಯದ ಆಧಾರದ ಮೇಲೆ ಬಡ ಕುಟುಂಬಗಳ ಆದಾಯವನ್ನು ಹೆಚ್ಚಿಸುವುದಕ್ಕೆ ಕ್ರಮವಹಿಸುವುದು ಈ ಮಹತ್ವಾಕಾಂಕ್ಷಿ ತಾಲೂಕುಗಳ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

ಆರೋಗ್ಯ ಮತ್ತು ಪೋಷಣೆ ಹಾಗೂ ಅಪೌಷ್ಠಿಕ ನಿವಾರಣೆ, ಶಿಕ್ಷಣ, ಕೃಷಿ ಮತ್ತು ಸಂಬಂಧಿತ ಸೇವೆಗಳು, ಮೂಲಸೌಕರ್ಯ ಮತ್ತು ಸಾಮಾಜಿಕ ಅಭಿವೃದ್ಧಿಯೆಂಬ 5 ವಲಯಗಳಲ್ಲಿ 40 ಸೂಚಕಗಳಿದ್ದು, ಈ ಸೂಚಕಗಳ ತಾಲೂಕು ಸಂಪೂರ್ಣ ಪ್ರಗತಿಯ ವರದಿಯೊಂದಿಗಿನ ಸಮರ್ಪಕ ವರದಿಯನ್ನು ಎಬಿಪಿ ಅಡಿ ಇರುವ 500 ಮಹತ್ವಾಕಾಂಕ್ಷೆಯ ತಾಲೂಕುಗಳು ನೀತಿ ಆಯೋಗಕ್ಕೆ ಸಲ್ಲಿಸಿದ್ದವು. ಈ ಪೈಕಿ ರಾಯಚೂರು ಜಿಲ್ಲೆಯ ನೂತನ ತಾಲೂಕಾಗಿರುವ ಮಸ್ಕಿ ಬ್ಲಾಕ್ ನೀತಿ ಆಯೋಗ ಸಿದ್ದಪಡಿಸಿದ ಎಸ್‌ಡಬ್ಯೂಟಿಟಿ ಮಾದರಿಯ ಅರ್ಜಿಯಲ್ಲಿ ಈ ತಾಲೂಕಿನಲ್ಲಿ ಆರೋಗ್ಯ ಮತ್ತು ಅಪೌಷ್ಠಿಕ ನಿವಾರಣೆ, ಶಿಕ್ಷಣ, ಕೃಷಿ ಮತ್ತು ಸಂಬಂಧಿತ ಸೇವೆಗಳು, ಮೂಲಸೌಕರ್ಯ ಮತ್ತು ಸಾಮಾಜಿಕ ಅಭಿವೃದ್ಧಿ ಕುರಿತಂತೆ ಇರುವ ಸಾಧಕ-ಬಾಧಕಗಳ ಕುರಿತು ಸಲ್ಲಿಸಿದ ವರದಿಯ ಬಗ್ಗೆ ನೀತಿ ಆಯೋಗವು ಪ್ರಶಂಸೆ ವ್ಯಕ್ತಪಡಿಸಿ ಅಂಗೀಕರಿಸಿದೆ.
ನೀತಿ ಆಯೋಗದ ಮಾರ್ಗಸೂಚಿಗಳ ಅನ್ವಯ ಸಲ್ಲಿಸಿದ ವರದಿಗೆ ಅನುಗುಣವಾಗಿ ಮಸ್ಕಿ ತಾಲೂಕಿನಲ್ಲಿ 5 ವಲಯಗಳಲ್ಲಿನ 40 ಸೂಚಕಗಳಲ್ಲಿನ ಅಭಿವೃದ್ಧಿಗಾಗಿ 1.50 ಕೋಟಿ ರೂ.ಗಳ ಪ್ರೋತ್ಸಾಹಧನವನ್ನು ನೀಡಿದೆ. ಜಿಲ್ಲಾಧಿಕಾರಿಗಳ ಖಾತೆಗೆ ಜಮಾವಾಗುವ ಈ ಪ್ರೋತ್ಸಾಹಧನ ಪಡೆದು ಮಸ್ಕಿ ಬ್ಲಾಕ್ ಅನ್ನು ಅಭಿವೃದ್ಧಿಪಡಿಸಲಾಗುವುದು ಎಂದು ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ತಿಳಿಸಿದ್ದಾರೆ.

ಈ ಹಿಂದೆ ಇಡೀ ಭಾರತದಲ್ಲಿ ಮಹತ್ವಾಕಾಂಕ್ಷಿ ಜಿಲ್ಲೆಗಳ ಶ್ರೇಯಾಂಕಾದಲ್ಲಿ ರಾಯಚೂರು ಜಿಲ್ಲೆ ಪ್ರಥಮ ಸ್ಥಾನ ಬಂದಿತ್ತು;ಅದಕ್ಕಾಗಿ 10 ಕೋಟಿ ರೂ.ಗಳ ಪ್ರೋತ್ಸಾಹಧನ ರಾಯಚೂರು ಜಿಲ್ಲೆಗೆ ಘೋಷಿಸಿದ್ದು,ಈಗಾಗಲೇ ಇದಕ್ಕೆ ಸಂಬಂಧಿಸಿದ ಕ್ರಿಯಾಯೋಜನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.

ಎಬಿಪಿಗೆ ಆಯ್ಕೆಯಾಗಿರುವ ರಾಜ್ಯದ 14 ತಾಲೂಕುಗಳ ಯೋಜನಾಧಿಕಾರಿಗಳು,ಜಿಪಂ ಉಪಕಾರ್ಯದರ್ಶಿಗಳು,ಆಯಾ ತಾಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮೈಸೂರಿನ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ತರಬೇತಿ ಸಂಸ್ಥೆ ಹಾಗೂ ಹೈದರಾಬಾದ್‌ನ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆಯಲ್ಲಿ ತರಬೇತಿ ನೀಡಿ ಕಾರ್ಯಕ್ರಮ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಾಹಿತಿ ಒದಗಿಸಲಾಗಿತ್ತು.
ಕರ್ನಾಟಕದಲ್ಲಿ ಮಹತ್ವಾಕಾಂಕ್ಷಿ ತಾಲೂಕು(ಎಬಿಪಿ)ಗಳಡಿ 14 ತಾಲೂಕುಗಳು: ನೀತಿ ಆಯೋಗ ಜಾರಿಗೊಳಿಸಿರುವ ಮಹತ್ವಾಕಾಂಕ್ಷಿ ತಾಲೂಕುಗಳ ಕಾರ್ಯಕ್ರಮ(ಎಬಿಪಿ)ಅಡಿ ರಾಜ್ಯದ 7 ಬಳ್ಳಾರಿ ಜಿಲ್ಲೆಯ ಕಂಪ್ಲಿ, ಬೀದರ್ ಜಿಲ್ಲೆಯ ಔರಾದ್,ಚಿಟಗುಪ್ಪ,ಹುಮನಾಬಾದ್ ಮತ್ತು ಕಮಲಾನಗರ, ಕಲಬುರಗಿ ಜಿಲ್ಲೆಯ ಅಫಜಲಪುರ,ಕಾಳಗಿ, ಶಹಾಬಾದ್,ರಾಯಚೂರು ಜಿಲ್ಲೆಯ ಮಸ್ಕಿ,ಸಿರವಾರ, ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ,ಮುಂಡಗೋಡ,ವಿಜಯಪುರ ಜಿಲ್ಲೆಯ ತಾಳಿಕೋಟೆ, ಯಾದಗಿರಿ ಜಿಲ್ಲೆಯ ವಡಗೇರಾ ಬರುತ್ತವೆ.
ಕರ್ನಾಟಕ ಸರಕಾರವು ಸಹ ಈ ಮಹತ್ವಾಕಾಂಕ್ಷಿ ತಾಲೂಕುಗಳಲ್ಲಿ ಆರೋಗ್ಯ, ಅಪೌಷ್ಠಿಕ ನಿವಾರಣೆ ಮತ್ತು ಶಿಕ್ಷಣ,ಕೃಷಿ, ಮೂಲಸೌಕರ್ಯಗಳ ಅಭಿವೃದ್ಧಿ ಕ್ಷೇತ್ರಗಳ ಅಭಿವೃದ್ಧಿಗೆ ಕ್ಷೇತ್ರದಾದ್ಯಂತ ಅಗತ್ಯಗಳನ್ನು ಪೂರೈಸಲು ಬಜೆಟ್‌ನಲ್ಲಿ ಘೋಷಣೆ ಮಾಡಿ,ಅಗತ್ಯ ಕ್ರಮಕ್ಕೆ ಮುಂದಾಗಿರುವುದನ್ನು ಸ್ಮರಿಸಬಹುದು.
ವಿವಿಧ ವಲಯಗಳ ವಿವರ: ನೀತಿ ಆಯೋಗವು ಮಹತ್ವಾಕಾಂಕ್ಷಿ ತಾಲೂಕುಗಳ ಕಾರ್ಯಕ್ರಮವನ್ನು ಒಟ್ಟು 6 ವಲಯಗಳನ್ನಾಗಿ ವಿಂಗಡಿಸಿದ್ದು, ಉತ್ತರ ಈಶಾನ್ಯ ಮತ್ತು ಐಸ್‌ಲ್ಯಾಂಡ್ಸ್ ವಲಯದಡಿ ಅಸ್ಸಾಂ ರಾಜ್ಯದ ಅಮ್ರಿ ಪ್ರಥಮ ಸ್ಥಾನ,ಮೀಜೋರಾಂನ ನಗ್ಪೋಪಾ ದ್ವಿತೀಯ, ಉತ್ತರ ಭಾರತ ವಲಯದಲ್ಲಿ ಉತ್ತರಪ್ರದೇಶದ ಬಸ್ತಿ ಜಿಲ್ಲೆಯ ಹರೈಯಾ ಪ್ರಥಮ, ಉತ್ತರಪ್ರದೇಶದ ಗಾಜಿಪುರ ಜಿಲ್ಲೆಯ ವಿರಣೋ ದ್ವಿತೀಯ, ಪಶ್ಷಿಮ ಭಾರತ ವಲಯದಡಿ ಮಹಾರಾಷ್ಟçದ ಸಿರೋಂಚಾ ತಾಲೂಕು ಪ್ರಥಮ, ಅಹೇರಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಕೇಂದ್ರ ಭಾರತ ವಲಯದಡಿ ಮಧ್ಯಪ್ರದೇಶದ ತೀರ್ಲಾ ಮೊದಲ ಮತ್ತು ಪಾಟ್ ಎರಡನೇ ಸ್ಥಾನ ಪಡೆದುಕೊಂಡಿದೆ. ಪೂರ್ವ ವಲಯದಡಿ ಬಿಹಾರ ಜಿಲ್ಲೆಯ ಅಂದಾರ್ ಪ್ರಥಮ, ಜಾರ್ಖಂಡ್‌ನ ರಾಮಗ್ರಹ ಎರಡನೇ ಸ್ಥಾನ ಪಡೆದಿವೆ.