
ಬೆಳಗಾವಿ: ಬೆಳಗಾವಿ ಕೋಟೆ ಆವರಣದ ರಾಮಕೃಷ್ಣ ಮಿಷನ್ ನ ವಾರ್ಷಿಕೋತ್ಸವ ಪ್ರಯುಕ್ತ ಫೆಬ್ರವರಿ 8 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1.45 ರವರೆಗೆ ಭಜನೆ ಮತ್ತು ಪ್ರವಚನ ನಡೆಯಲಿದೆ.
ಶಿಕ್ಷಕನ ವ್ಯಕ್ತಿತ್ವ ನಿರ್ಮಾಣ ಕುರಿತು ನಡೆಯುವ ಕಾರ್ಯಕ್ರಮದಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕನ ಪಾತ್ರ ವಿಷಯವಾಗಿ ಗುಜರಾತ್ ರಾಜ್ ಕೋಟ್ ರಾಮಕೃಷ್ಣ ಮಿಷನ್ ಆಶ್ರಮದ ಸ್ವಾಮಿ ಗುಣೇಶಾನಂದಜೀ ಮಹಾರಾಜ, ಮದಿಹಳ್ಳಿ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಮಂಗಳನಾಥ ನಂದಜೀ ಮಹಾರಾಜ ಅವರು ಶಿಕ್ಷಣ- ಶಿಕ್ಷಕ ಮತ್ತು ಬೆಳಗಾವಿ ರಾಮಕೃಷ್ಣ ಮಿಷನ್ ನ ಮೋಕ್ಷಾತ್ಮನಂದ ಅವರು ಧ್ಯಾನದ ಪ್ರಾಮುಖ್ಯ ಮತ್ತು ಅಭ್ಯಾಸ ವಿಧಾನ ಕುರಿತು ಮಾತನಾಡುವರು. ಪ್ರಶ್ನೋತ್ತರ ಹಾಗೂ ಸಂವಾದ ನಡೆಯಲಿದೆ. ಸಂಜೆ 6 ಗಂಟೆಗೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಭಜನಾ ಸಂಧ್ಯಾದಲ್ಲಿ ಬೆಂಗಳೂರಿನ ಖ್ಯಾತ ಹಿಂದೂಸ್ತಾನಿ ಗಾಯಕ ಸುರಮಣಿ ದತ್ತಾತ್ರೇಯ ವೇಲಣಕರ ಅವರಿಂದ ಗಾಯನ ನಡೆಯಲಿದೆ. ಯೋಗೇಶ್ ಭಟ್ ಮತ್ತು ಅಶ್ವತ್ ಶೆಣೈ ಅವರು ತಬಲಾ, ಸಾರಂಗ ಕುಲಕರ್ಣಿ ಅವರು ಹಾರ್ಮೋನಿಯಂ ಸಹಕಾರ ನೀಡುವವರು.
ಫೆಬ್ರವರಿ 9 ರಂದು ಆಧ್ಯಾತ್ಮಿಕ ಸಮ್ಮೇಳನ ನಡೆಯಲಿದೆ. ಬೆಳಗ್ಗೆ 10ರಿಂದ ಮಧ್ಯಾಹ್ನ 1.30 ರವರೆಗೆ ಭಜನೆ ಮತ್ತು ಪ್ರವಚನ ಏರ್ಪಡಿಸಲಾಗಿದೆ.
ಜೀವನ ಎಂದರೇನು ವಿಷಯವಾಗಿ ತಮಿಳುನಾಡು ಊಟಿಯ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ರಾಘವೇಶಾನಂದಜೀ ಮಹಾರಾಜ ಅವರು ಮಾತನಾಡುವರು. ಗುಜರಾತ್ ರಾಜ್ ಕೋಟ್ ರಾಮಕೃಷ್ಣ ಮಠದ ಸ್ವಾಮಿ ಗುಣೇಶಾನಂದಜೀ ಅವರು ಭಾಗವತದಲ್ಲಿರುವ ಮಾನವ ಧರ್ಮ, ಮದಿಹಳ್ಳಿ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಮಂಗಳನಾಥ ನಂದಜೀ ಮಹಾರಾಜ ಅವರು ಉಪಯುಕ್ತ ಸಲಹೆಗಳು ವಿಷಯವಾಗಿ ಮಾತನಾಡುವರು. ನಂತರ ಸಂವಾದ, ಪ್ರಶ್ನೋತ್ತರ ಏರ್ಪಡಿಸಲಾಗಿದೆ. ಸಂಜೆ 6 ಕ್ಕೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇವರಿಂದ ಪಂಚವಟಿ ಎಂಬ ಯಕ್ಷಗಾನ ಪ್ರದರ್ಶನವಾಗಲಿದೆ. ಕೆರೆಮನೆ ಶಿವಾನಂದ ಹೆಗಡೆ ಅವರ ನಿರ್ದೇಶನ ಇರಲಿದೆ ಎಂದು ರಾಮಕೃಷ್ಣ ಮಿಷನ್ ಆಶ್ರಮದ ಪ್ರಕಟಣೆ ತಿಳಿಸಿದೆ.