“ದಿ ಹಿಂದೂ” ಇಂಗ್ಲೀಷ ದೈನಿಕದ
ಹುಬ್ಬಳ್ಳಿ ವರದಿಗಾರರಾಗಿ ದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಮದನ್
ಮೋಹನ ಅವರು ಇಂದು ಶನಿವಾರ ಹುಬ್ಬಳ್ಳಿಯಲ್ಲಿ ಕೊನೆಯುಸಿರೆಳೆದಿದ್ದು
ನಾಡಿನ ಪತ್ರಿಕೋದ್ಯಮಕ್ಕೆ ಬಹುದೊಡ್ಡ ಹಾನಿಯೇ ಸರಿ.

ಎಂಭತ್ತರ ದಶಕದಲ್ಲಿ
ಮದನ್ ಮೋಹನ ಅವರು ಉತ್ತರ ಕರ್ನಾಟಕದಲ್ಲಿ ತಮ್ಮದೇ ಆದ ಛಾಪು
ಮೂಡಿಸಿದ ಅಪರೂಪದ ಪತ್ರಕರ್ತರು.

ಬಗಲಿಗೆ ಒಂದು ಖಾದಿ ಚೀಲವನ್ನು ಹಾಕಿಕೊಂಡು ಹುಬ್ಬಳ್ಳಿಯಿಂದ
ಬೆಳಗಾವಿಗೆ ಬರುತ್ತಿದ್ದ ಅವರು,ನಾಡೋಜದ
ಸಂಪಾದಕ ರಾಘವೇಂದ್ರ ಜೋಶಿ ಮತ್ತು ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿಯ
ವರದಿಗಾರ ಎನ್.ಜಿ.ಪಾಟೀಲ
ಒಂದು ಕಡೆ ಸೇರಿದರೆಂದರೆ ಅದರ ಗತ್ತೇ ಬೇರೆ. ನಮ್ಮಂಥ ಕಿರಿಯ ಪತ್ರಕರ್ತರಿಗೆ ಅವರ ಗಹನವಾದ ಚರ್ಚೆ
ರೋಮಾಂಚನವನ್ನು ಉಂಟು
ಮಾಡುತ್ತಿತ್ತು. ನೆಲ,ಜಲಕ್ಕೆ ಸಂಬಂಧಿಸಿದಂತೆ
ಅಂಕಿ ಸಂಖ್ಯೆಗಳು ಮದನ್ ಮೋಹನ ಅವರ ನಾಲಿಗೆಯ ತುದಿಯ ಮೇಲೆಯೇ
ಇರುತ್ತಿದ್ದವು. ಕೃಷ್ಣಾ ಕಾವೇರಿ ಜಲವಿವಾದ, ಕರ್ನಾಟಕ ಮಹಾರಾಷ್ಟ್ರ ಗಡಿವಿವಾದದ
ಬಗ್ಗೆ ಮದನ್ ಬರೆದ ಅನೇಕ ಲೇಖನಗಳನ್ನು ನಾಡಿನ ರಾಜಕಾರಣಿಗಳು ತಪ್ಪದೇ
ಓದಿ ಪ್ರತಿಕ್ರಿಯಿಸುತ್ತಿದ್ದರು.ಇಂಥ
ಅಭ್ಯಾಸಿ,ಅಧ್ಯಯನಶೀಲ
ಪತ್ರಕರ್ತನನ್ನು ಕಳೆದುಕೊಂಡಿದ್ದೇವೆ.
ದೇವರು ಅವರ ಆತ್ಮಕ್ಕೆ ಚಿರಶಾಂತಿ
ನೀಡಲೆಂದು ಪ್ರಾರ್ಥಿಸುತ್ತೇನೆ.

✒️ಅಶೋಕ ಚಂದರಗಿ, ಬೆಳಗಾವಿ