ಬೆಂಗಳೂರು : ಹಿರಿಯ ಪತ್ರಕರ್ತ ಶಶಿಧರ ಭಟ್ ಅವರು ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದು, ಅವರ ಆಸ್ಪತ್ರೆ ಪೂರ್ತಿ ಖರ್ಚನ್ನು ಸರ್ಕಾರವೇ ಭರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಶಶಿಧರ ಭಟ್ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಮೈಸೂರಿನ‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಶಿಧರ್‌ ಭಟ್‌ ಅವರ ಆರೋಗ್ಯ ವಿಚಾರಿಸಿದ ನಂತರ ಅವರ ಆಸ್ಪತ್ರೆಯ ಎಲ್ಲ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಅನಾರೋಗ್ಯದ ಹಿನ್ನೆಲೆಯಲ್ಲಿ ಮೈಸೂರಿನ ಗೋಪಾಲಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಪತ್ರಕರ್ತರಾದ ಶಶಿಧರ ಭಟ್ ಅವರಿಗೆ ಕರೆಮಾಡಿ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದೆ. ಶಶಿಧರ ಭಟ್ ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ, ಆಸ್ಪತ್ರೆಯ ವೈದ್ಯರ ಜೊತೆಗೂ ಮಾತನಾಡಿ ಶಶಿಧರ ಭಟ್ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದು, ಮುತುವರ್ಜಿಯಿಂದ ಅವರ ಆರೈಕೆ ಮಾಡುವಂತೆ ತಿಳಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಶಶಿಧರ ಭಟ್ ಅವರು ಆಸ್ಪತ್ರೆಯ ಬೆಡ್‌ ಮೇಲಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಒಂದನ್ನು ಹಾಕಿ, “ನಾನು ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿದ್ದೇನೆ. ಅನಾರೋಗ್ಯ ಸಮಸ್ಯೆ ಈಗ ನನ್ನ ಕಣ್ಣು ತೆರೆಸಿದೆ. ಆಸ್ಪತ್ರೆಯ ಜಗತ್ತು ಎಷ್ಟು ಕ್ರೂರವಾದದ್ದು ಎಂಬುದು ಅರಿವಿಗೆ ಬಂದಿದೆ. ಹಾಗೆಯೇ ನಮ್ಮ ಸುತ್ತ ಇರುವವರು ಯಾರು ನಮ್ಮವರು, ಯಾರು ನಮ್ಮವರಲ್ಲ ಎಂಬ ಜ್ಞಾನೋದಯಕ್ಕೆ ಕಾರಣವಾಗಿದೆ. ಪ್ರೀತಿ, ನಂಬಿಕೆ ಸಂಬಂಧ ಎಲ್ಲ ಸುಳ್ಳು ಎಂಬುದು ಅರ್ಥವಾಗಿದೆ ”ಎಂದು ನೋವಿನಿಂದ ಹೇಳಿದ್ದರು.

ಶಶಿಧರ್ ಭಟ್ ಅವರ ಈ ಪೋಸ್ಟ್ ಗೆ ಅವರ ಆಪ್ತರು, ಹಿತೈಷಿಗಳು ಒಂದಷ್ಟು ಧೈರ್ಯ ತುಂಬಿದ್ದು, ಶೀಘ್ರವೇ ಗುಣಮುಖರಾಗಿ ಬರುವಂತೆ ಹಾರೈಸಿದ್ದರು. ಈ ಪೋಸ್ಟ್ ವೈರಲ್ ಆಗುತ್ತಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ. ಶಶಿಧರ್‌ ಭಟ್‌ ಅವರ ಆರೋಗ್ಯ ವಿಚಾರಿಸಿದ ನಂತರ ಅವರ ಆಸ್ಪತ್ರೆಯ ಎಲ್ಲ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದ್ದಾರೆ.