ಲಕ್ನೋ : ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚಾಗುತ್ತಿದೆ. ಕೆಲವು ಮಕ್ಕಳು ಊಟ-ತಿಂಡಿಯನ್ನೂ ಮಾಡದೆ ಮೊಬೈಲ್‌ನಲ್ಲೇ ಮುಳುಗಿರುತ್ತಾರೆ. ಮಕ್ಕಳಿಗೆ ಮೊಬೈಲ್‌ ಗೀಳು ಬಿಡಿಸುವುದು ಪೋಷಕರಿಗೆ ಸವಾಲಿನ ಕೆಲಸವಾಗಿದೆ. ಆದರೆ ಇದೇ ವೇಳೆ ಶಾಲೆಯೊಂದರಲ್ಲಿ ಮಕ್ಕಳನ್ನು ಮೊಬೈಲ್‌ ಫೋನ್‌ನಿಂದ ದೂರವಿರಿಸಲು ಶಿಕ್ಷಕರು ಅನುಸರಿಸಿದ ವಿಧಾನದ ವೀಡಿಯೊವೊಂದು ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಬದೌನ್‌ನಲ್ಲಿರುವ ಶಾಲೆಯೊಂದರ ಜಾಗೃತಿ ಕಾರ್ಯಕ್ರಮದ ವೀಡಿಯೊ ಇದು ಎಂದು ಹೇಳಲಾಗಿದೆ.

ಈ ವೈರಲ್ ವಿಡಿಯೋದಲ್ಲಿ ಶಾಲೆಯ ಆಟದ ಮೈದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪುಟ್ಟ ವಿದ್ಯಾರ್ಥಿಗಳು ಜಮಾಯಿಸಿರುವುದು ಕಂಡುಬರುತ್ತದೆ. ಅಷ್ಟರಲ್ಲಿ, ಶಿಕ್ಷಕಿಯೊಬ್ಬರು ತನ್ನ ಕಣ್ಣುಗಳನ್ನು ಹಿಡಿದುಕೊಂಡು ಮಕ್ಕಳ ನಡುವೆ ಬರುತ್ತಾರೆ. ಮತ್ತೊಬ್ಬ ಶಿಕ್ಷಕಿ, “ಏನಾಯ್ತು ಮೇಡಂ?” ಎಂದು ಕೂಗುತ್ತಾರೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಂದ ಮಹಿಳಾ ಶಿಕ್ಷಕಿ ಖುರ್ಚಿಯ ಮೇಲೆ ಕುಳಿತು ನಾನು ಮೊಬೈಲ್ ಫೋನ್ ಅತಿಯಾಗಿ ಬಳಸುತ್ತಿದ್ದೆ, ಅದಕ್ಕೆ ಹೀಗಾಗಿದೆ ಎಂದು ಹೇಳುತ್ತಾರೆ.

ಮೇಡಂ ಯಾವ ಸ್ಥಿತಿಗೆ ಬಂದಿದ್ದಾರೆ, ಅವರ ಕಣ್ಣಿನಿಂದ ಎಷ್ಟು ರಕ್ತ ಬರುತ್ತಿದೆ ಎಂದು ನೋಡುವಂತೆ ಮತ್ತೊಬ್ಬ ಶಿಕ್ಷಕಿ ಮಕ್ಕಳಿಗೆ ಹೇಳುತ್ತಾರೆ. ಇದರ ನಂತರ ಶಿಕ್ಷಕಿಯೊಬ್ಬರು ಮೊಬೈಲ್‌ ಫೋನ್‌ ಹಿಡಿದು ಮಕ್ಕಳ ಬಳಿಗೆ ಹೋಗಿ ಫೋನ್ ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಆದರೆ ಮಕ್ಕಳು ಭಯದಿಂದ ಫೋನ್ ತೆಗೆದುಕೊಳ್ಳಲು ನಿರಾಕರಿಸುತ್ತಾರೆ. ಶಿಕ್ಷಕರು ಎಲ್ಲಾ ಮಕ್ಕಳಿಗೆ ಮೊಬೈಲ್ ಫೋನ್ ಬೇಕೇ ಎಂದು ಕೇಳುತ್ತಾರೆ. ಆದರೆ ಫೋನ್ ತೆಗೆದುಕೊಳ್ಳಲು ಸಿದ್ಧವಾಗಿರುವ ಒಂದೇ ಒಂದು ಮಗು ವೀಡಿಯೊದಲ್ಲಿ ಇರಲಿಲ್ಲ.
ವೀಡಿಯೊದ ಕೊನೆಯಲ್ಲಿ, ಶಿಕ್ಷಕರೊಬ್ಬರು ಮಕ್ಕಳ ಬಳಿಗೆ ಹೋದಾಗ, ಅವರು ಅಳುತ್ತಿದ್ದರು. ನೀನು ಯಾಕೆ ಅಳುತ್ತಿದ್ದೀಯ? ಒಬ್ಬನನ್ನು ಕೇಳಿದ್ದಾರೆ. ಅಲ್ಲದೆ, ಮತ್ತೆ ಮೊಬೈಲ್ ಬಳಸ್ತೀಯಾ ಎಂದು ಪ್ರಶ್ನಿಸುತ್ತಾರೆ. ಆ ಮಗು ಮಾತನಾಡದೆ ಇಲ್ಲ ಎಂದು ತಲೆ ಅಲ್ಲಾಡಿಸಿದೆ. ಇನ್ನು ಮುಂದೆ ಫೋನ್ ಬಳಸುವುದಿಲ್ಲ ಎಂದು ಹಲವು ಮಕ್ಕಳು ಹೇಳಿದ್ದಾರೆ.

ಮಕ್ಕಳನ್ನು ಮೊಬೈಲ್‌ನಿಂದ ದೂರವಿಡಲು ಈ ವೀಡಿಯೊ ಮಾಡಲಾಗಿದೆ. ಶಾಲಾ ಶಿಕ್ಷಕರು ಮಕ್ಕಳಿಗೆ ಹೊಸ ರೀತಿಯಲ್ಲಿ ಪಾಠ ಕಲಿಸಲು ನಿರ್ಧರಿಸಿದ್ದರು. ಈ ವೀಡಿಯೊ ಉತ್ತರ ಪ್ರದೇಶದ ಬದೌನ್‌ನಲ್ಲಿರುವ ಎಚ್‌ಪಿ ಇಂಟರ್‌ನ್ಯಾಶನಲ್ ಸ್ಕೂಲ್‌ನದ್ದು ಎನ್ನಲಾಗಿದೆ.
ಬಾಲ್ಯದಿಂದಲೇ ಸುಳ್ಳಿನ ಕೃಷಿಯನ್ನು ಪ್ರಾರಂಭಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಬರೆದಿದ್ದಾರೆ. ನಾಳೆ ಈ ಮಕ್ಕಳಿಗೆ ಹಾಗಲ್ಲ ಎಂದು ತಿಳಿದರೆ ಶಿಕ್ಷಕರು ನೀಡುವ ಇತರ ಸೂಚನೆಗಳ ಮೇಲೂ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ಮಕ್ಕಳನ್ನು ಮೊಬೈಲ್ ಗೀಳಿನಿಂದ ಮುಕ್ತಗೊಳಿಸಲು ಈ ವಿಧಾನವು ಹೊಸ ಮತ್ತು ಪರಿಣಾಮಕಾರಿ ಉಪಕ್ರಮವಾಗಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ.

ಮಕ್ಕಳನ್ನು ಮೊಬೈಲ್ ಗೀಳಿನಿಂದ ಮುಕ್ತಗೊಳಿಸಲು ಇಂತಹ ಜಾಗೃತಿ ಅಭಿಯಾನಗಳು ಬಹಳ ಮುಖ್ಯ ಎಂದು ಒಬ್ಬರು ಬರೆದಿದ್ದಾರೆ. ಕಣ್ಣಿನ ಆರೋಗ್ಯ ಸುರಕ್ಷತೆಯ ಕುರಿತಾದ ಒಂದು ಕಥೆ, ವಿಶೇಷವಾಗಿ ಇದು ಶಿಕ್ಷಕರನ್ನು ಒಳಗೊಂಡಿರುವಾಗ, ನಿಜವಾಗಿಯೂ ಮಕ್ಕಳಿಗೆ ಅರಿವು ಮೂಡಿಸಬಹುದು ಎಂದು ಹೇಳಿದ್ದಾರೆ.