ಮೂಡಲಗಿ: 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಸಂಕಲ್ಪ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ ಆಶಯ ಈಡೇರಬೇಕಾದರೆ ಸಹಕಾರ ರಂಗ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವುದರ ಜೊತೆಗೆ ಬಡವರ, ದೀನದಲಿತರ ಆರ್ಥಿಕ ಅಭ್ಯುದಯ ಮಾಡುವುದರ ಮೂಲಕ ಆರ್ಥಿಕವಾಗಿ ಸಶಕ್ತ ಭಾರತವನ್ನು ನಿರ್ಮಿಸಲು ಸಹಕಾರ ಸಂಸ್ಥೆಗಳು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಸಹಕಾರಿಯ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಸತೀಶ ಕಡಾಡಿ ಹೇಳಿದರು.

ಶನಿವಾರ ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘ ನಿ.ಕಲ್ಲೋಳಿ ಇದರ 2023-24ನೇ ಸಾಲಿನ 22ನೇ ಸರ್ವ ಸಾಮಾನ್ಯ ಸಭೆ ಕಾರ್ಯಕ್ರಮಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಸಶಕ್ತ ಭಾರತದ ನಿರ್ಮಾಣದ ಸಂಕಲ್ಪದೆಡೆಗೆ ಶ್ರೀ ಮಹಾಲಕ್ಷ್ಮಿ ಸೌಹಾರ್ದ ಸಹಕಾರಿ ಸಂಸ್ಥೆಯು ತನ್ನ ಅಳಿಲು ಸೇವೆಯನ್ನು ಸಲ್ಲಿಸಲು ಕಟಿಬದ್ಧವಾಗಿದೆ ಎಂದರು.

ಸಹಕಾರಿಯು ಗ್ರಾಹಕರ ಸಹಕಾರದಿಂದ ಪ್ರಗತಿ ಹೊಂದಿದ್ದು, ಸಂಘದಲ್ಲಿ 12254 ಸದಸ್ಯರಿದ್ದು, ರೂ 20.12 ಲಕ್ಷ ಶೇರು ಬಂಡವಾಳ ಹಾಗೂ ರೂ 6.96 ಕೋಟಿ ಕಾಯ್ದಿಟ್ಟ ನಿಧಿಯಿದೆ. ಹಣಕಾಸು ವರ್ಷದಲ್ಲಿ ರೂ 71.10 ಕೋಟಿ ಠೇವು ಸಂಗ್ರವಾಗಿದೆ.
ಸಹಕಾರಿಯಿಂದ ಇದುವರೆಗೆ ಮಹಿಳೆಯರಿಗೆ ಕಿರು ಸಾಲ, ಗ್ರಾಹಕರಿಗೆ ಪಿಗ್ಮಿ ಸಾಲ ಸೇರಿದಂತೆ ರೂ 66.71 ಕೋಟಿ ಸಾಲ ವಿತರಿಸಲಾಗಿದೆ. 8.89 ಕೋಟಿ ರೂಗಳನ್ನು ಬ್ಯಾಂಕ ಮತ್ತು ಇನ್ನಿತರ ಸಂಘಗಳಲ್ಲಿ ಗುಂತಾವಣೆ ಮಾಡಲಾಗಿದ್ದು, ರೂ 78.26 ಕೋಟಿ ದುಡಿಯುವ ಬಂಡವಾಳ ಹೊಂದಿದೆ, ರೂ 318 ಕೋಟಿ ವಹಿವಾಟು ಹೊಂದಿದ್ದು, ಸಹಕಾರಿಯ ಸದಸ್ಯರಿಗೆ ಶೇ 20 ರಷ್ಟು ಲಾಭಾಂಶ ವಿತರಿಸಲಾಗಿದೆ ಎಂದರು.

ಸಹಕಾರಿಯ ಗ್ರಾಹಕರಿಗೆ ಮಹಾಲಕ್ಷ್ಮೀ ಕಿರು ಸಾಲ ಯೋಜನೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಲಾಗಿದೆ ಎಂದರಲ್ಲದೇ ಕಲ್ಲೋಳಿಯಲ್ಲಿ ನಿರ್ಮಿಸುತ್ತಿರುವ ಪ್ರಧಾನ ಕಛೇರಿಯ ಕಟ್ಟಡವು ಮುಕ್ತಾಯ ಹಂತಕ್ಕೆ ತಲುಪಿದ್ದು ಶೀಘ್ರದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ ಹಾಗೂ ಯಾದವಾಡ ಗ್ರಾಮದಲ್ಲಿ ಸಹಕಾರಿಯ ನೂತನ 3ನೇ ಶಾಖೆಯು ಶೀಘ್ರದಲ್ಲಿ ಪ್ರಾರಂಭವಾಗಲಿದೆ ಎಂದರು.

ಸಹಕಾರಿಯ ಉಪಾಧ್ಯಕ್ಷ ಶ್ರೀಶೈಲ ತುಪ್ಪದ ಅಧ್ಯಕ್ಷತೆ ವಹಿಸಿದ್ದರು.
ನಿರ್ದೇಶಕರಾದ ಬಾಳಪ್ಪ ಸಂಗಟಿ, ಪರಪ್ಪ ಮಳವಾಡ, ಸಹದೇವ ಹೆಬ್ಬಾಳ, ಶಿವಪ್ಪ ಗೊಸಬಾಳ, ಸಿದ್ದಪ್ಪ ಹೆಬ್ಬಾಳ, ಮಲ್ಲಿಕಾರ್ಜುನ ಹುಲೆನ್ನವರ, ಸೋಮಲಿಂಗ ಹಡಿಗನಾಳ, ಸಲಹಾ ಸಮಿತಿ ಅಧ್ಯಕ್ಷರಾದ ಈರಪ್ಪ ದೇಯನ್ನವರ, ರಾಜು ಕತ್ತಿ, ಮಾಯಪ್ಪ ಬಾನಸಿ, ನಿಂಗಪ್ಪ ನೀಲನ್ನವರ, ಶ್ರೀಕಾಂತ ಕರೆಪ್ಪಗೋಳ, ಗಣೇಶ ಗಾಣಿಗ, ರಾಮಚಂದ್ರ ಕೊಡ್ಲಿ, ಹಿರಿಯ ವ್ಯವಸ್ಥಾಪಕ ಹಣಮಂತ ಕಲಕುಟ್ರಿ ಸೇರಿದಂತೆ ಅನೇಕ ಸಹಕಾರಿಗಳು ಭಾಗವಹಿಸಿದ್ದರು.
ಹಿರಿಯ ವ್ಯವಸ್ಥಾಪಕ ಪರಪ್ಪ ಗಿರೆಣ್ಣವರ ಸ್ವಾಗತಿಸಿ, ನಿರೂಪಿಸಿದರು, ಸುರೇಶ ಮಠದ ವಾರ್ಷಿಕ ವರದಿ ಓದಿದರು. ಶಿವಾನಂದ ಕುಂಬಾರ ವಂದಿಸಿದರು.