ಬೆಳಗಾವಿ: ಬೆಳಗಾವಿಯ ಸಾರ್ವಜನಿಕ ಗಣಪತಿ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ಕಪಿಲೇಶ್ವರ ಮೇಲ್ಸೇತುವೆಯಿಂದ ಕಪಿಲೇಶ್ವರ ದೇವಸ್ಥಾನದ ಕಡೆಗೆ ಸಾರ್ವಜನಿಕ ಗಣಪತಿ ಮೂರ್ತಿಯನ್ನು ಒಯ್ಯುತ್ತಿದ್ದಾಗ ಟ್ರ್ಯಾಕ್ಟರ್ ಟ್ರಾಲಿ ಹರಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಯಳ್ಳೂರು ಸುಳಗಾ ಪಾಟೀಲ ಗಲ್ಲಿಯ ನಿವಾಸಿ ಸದಾನಂದ ಚವಾಣ್ ಪಾಟೀಲ (48)ಮೃತಪಟ್ಟವರು. ವಡಗಾವಿ ತೆಗ್ಗಿನಗಲ್ಲಿಯ ವಿಜಯ ರಾಜಗೋಳ(56) ಎಂಬುವವರು ಗಾಯಗೊಂಡಿದ್ದಾರೆ. ಸದಾನಂದ ಅವರನ್ನು ಬೀಮ್ಸ್ ಗೆ ದಾಖಲಿಸಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೆರವಣಿಗೆ ಬುಧವಾರ ಎರಡನೇ ದಿನ ಸಾಗುತ್ತಿತ್ತು. ಕಪಿಲೇಶ್ವರ ಮೇಲ್ಸೇತುವೆಯಿಂದ ಕಪಿಲೇಶ್ವರ ದೇವಸ್ಥಾನದ ಬಳಿ ಸಾರ್ವಜನಿಕ ಗಣಪತಿ ಮೂರ್ತಿಗಳನ್ನು ಲಾರಿ ಮತ್ತು ಟ್ರ್ಯಾಕ್ಟರ್ ಗಳಲ್ಲಿ ಸಾಗಿಸಲಾಗುತ್ತಿತ್ತು. ಮೆರವಣಿಗೆ ಸಾಗುತ್ತಿದ್ದಂತೆ 10:00 ಗಂಟೆ ಸುಮಾರಿಗೆ ಮೇಲ್ಸೇತುವೆಯಿಂದ ಕೆಳಗಿಳಿಯುತ್ತಿದ್ದಾಗ ಮೂರ್ತಿಯನ್ನು ಹೊತ್ತಿದ್ದ ಟ್ರ್ಯಾಕ್ಟರ್ ನಿಯಂತ್ರಣ ಕಳೆದುಕೊಂಡು ಅನಿರೀಕ್ಷಿತ ದುರ್ಘಟನೆ ಸಂಭವಿಸಿದೆ. ಅಪಾಯದ ಅರಿವಿಲ್ಲದ ಸದಾನಂದ ಅವರ ಮೇಲೆಯೇ ಟ್ರಾಲಿ ಹರಿದು ಅವರು ಮೃತಪಟ್ಟಿದ್ದಾರೆ.