ಬೆಳಗಾವಿ: ಬೆಳಗಾವಿ ತಾಲೂಕು ಕೊಂಡಸಕೊಪ್ಪ ಗ್ರಾಮದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಪ್ತರಾಗಿರುವ ಬಸ್ತವಾಡ ಗ್ರಾಮ ಪಂಚಾಯತಿ ಉಪಾಧ್ಯಕ್ಷ ವಿಠಲ ಸಾಂಬ್ರೇಕರ ಅವರ ಮೇಲೆ ನಾಲ್ವರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಗುರುವಾರ ನಡೆದಿದೆ. ಗಾಯಗೊಂಡಿರುವ ವಿಠಲ ಸಾಂಬ್ರೇಕರ ಅವರನ್ನು ಆಂಬುಲೆನ್ಸ್ ಮೂಲಕ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಠಲ ಸಾಂಬ್ರೇಕರ ಅವರು ಕೊಂಡಸಕೊಪ್ಪ ಗ್ರಾಮದಲ್ಲಿ ಸಾರ್ವಜನಿಕರ ಮನವಿ ಮೇರೆಗೆ ತಮ್ಮ ಜಾಗ ಬಿಟ್ಟುಕೊಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಸರಕಾರಿ ಜಾಗವನ್ನು ಗ್ರಾಮಸ್ಥರ ಸಹಕಾರದಲ್ಲಿ ಪಡೆದುಕೊಂಡಿದ್ದರು. ಆದರೆ, ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಗುರುವಾರ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಬೈಕಿನಲ್ಲಿ ಬಂದ ನಾಗಪ್ಪ ವಾಳಕೆ, ಭೀಮ ದೇಮಣ್ಣವರ, ಪುಂಡಲೀಕ ಕುಡಚೇಕರ ಹಲ್ಲೆ ನಡೆಸಿದ್ದಾರೆ. ಇವರು ಬೈಕಿನಲ್ಲಿ ಬರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹಿರೇಬಾಗೇವಾಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.