ಮಡಗಾಂವ್ : ಗೋವಾದ ಹೋಟೆಲ್ ಉದ್ಯಮಿ ಇರ್ವತ್ತೂರು ಗಣೇಶ ಶೆಟ್ಟಿಯವರ ನೇತೃತ್ವದಲ್ಲಿ ಸ್ಥಾಪನೆಯಾಗಿರುವ ತುಳುಕೂಟ ಗೋವಾ ಇದರ ಉದ್ಘಾಟನಾ ಸಮಾರಂಭ ಅ.20ರಂದು ಮಧ್ಯಾಹ್ನ 2.30ರಿಂದ ಗೋವಾದ ಪೂರ್ವರಿಮ್‌ ನಾರ್ತ್‌ನಲ್ಲಿರುವ ಪುಂಡಲೀಕ ದೇವಸ್ಥಾನದ ಸಭಾಗೃಹದಲ್ಲಿ ಜರುಗಲಿದೆ. ಸಭಾ ಕಾರ್ಯಕ್ರಮವನ್ನು ಕಾರ್ಕಳದ ಶಾಸಕ, ಮಾಜಿ ಸಚಿವ ವಿ.ಸುನೀಲ್ ಕುಮಾರ್, ತುಳುಕೂಟ ಗೋವಾ ಸಂಸ್ಥೆಯನ್ನು ಪುತ್ತೂರು ಶಾಸಕ ಅಶೋಕ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಅಖಿಲ ಭಾರತ ತುಳುಕೂಟದ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಅವರ ಅಧ್ಯಕ್ಷತೆಯಲ್ಲಿ ಜರುಗುವ ಸಮಾರಂಭದಲ್ಲಿ ಯುವ ವಾಗ್ಮಿ, ಸಂಶೋಧಕ ಅರುಣ್‌ ಉಳ್ಳಾಲ್ ಅಭಿನಂದನಾ ಭಾಷಣ ಮಾಡುತ್ತಾರೆ. ಗೋವಾದ ಪ್ರವಾಸೋದ್ಯಮ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಹಾಗೂ ಪೂರ್ವರಿಮ್ ಗೋವಾದ ಶಾಸಕ ರೋಹನ್ ಅಶೋಕ್ ಕೌಂಟೆ ಮುಖ್ಯ ಅತಿಥಿಯಾಗಿ, ಜಿಲ್ಲಾ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಗುಣಪಾಲ ಕಡಂಬ, ನಾಟಕಕಾರ ವಿಜಯಕುಮಾ‌ರ್ ಕೊಡಿಯಾಲಬೈಲ್‌, ಪ್ರಾಧ್ಯಾಪಕ ಸುಧಾಕರ ಶೆಟ್ಟಿ ನೆಲ್ಲಿಕಟ್ಟೆ, ತುಳು ನಾಟಕ ನಿರ್ದೇಶಕ ಪ್ರಸನ್ನ ಶೆಟ್ಟಿ ಬೈಲೂರು, ತುಳುಕೂಟ ಬೆದ್ರದ ಅಧ್ಯಕ್ಷ ಧನಕೀರ್ತಿ ಬಲಿಪ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಭವ್ಯ ಮೆರವಣಿಗೆ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಶಿವದೂತೆ ಗುಳಿಗೆ ನಾಟಕ ಪ್ರದರ್ಶನ, ತುಳುನಾಡಿನ ಆರಾಧನೆ, ಆಚರಣೆಗೆ ಸಂಬಂಧಪಟ್ಟ ವಸ್ತು ಪ್ರದರ್ಶನ, ನಗ-ನಾಣ್ಯದ ವಸ್ತು ಪ್ರದರ್ಶನ ಮುಂತಾದ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.