ನವದೆಹಲಿ : ಗಲ್ವಾನ್ ದಾಳಿ ಬಳಿಕ ಭಾರತ ಹಾಗೂ ಚೀನಾ ಗಡಿ ಸಮಸ್ಯೆ ತೀವ್ರಹಂತಕ್ಕೆ ತಿರುಗಿತ್ತು. 2020ರಲ್ಲಿ ನಡೆದ ಘನಘೋರ ದಾಳಿಯಲ್ಲಿ ಭಾರತದ ಸಾವು ನೋವಿನ ಪ್ರಮಾಣ, ಭೀಕರತೆಗೆ ದೇಶವೇ ಬೆಚ್ಚಿ ಬಿದ್ದಿತ್ತು. ಗಲ್ವಾನ್ ಕಣಿವೆಯ ದಾಳಿ ಬಳಿಕ ಭಾರತ ಹಾಗೂ ಚೀನಾ ನಡುವಿನ ಸಂಬಂಧ ಹಳಸಿತು. ಉದ್ವಿಘ್ನ ಪರಿಸ್ಥಿತಿ ಮುಂದುವರಿದಿತ್ತು. ಸತತ 4 ವರ್ಷಗಳಿಂದ ಚೀನಾ ಜೊತೆಗಿನ ಮಾತುಕತೆ ಕೊನೆಗೂ ಯಶಸ್ವಿಯಾಗಿದೆ. ಇದೀಗ ಸತತ ಮಾತುಕತೆ ಬಳಿಕ ಭಾರತ ಹಾಗೂ ಚೀನಾ ಲಡಾಖ್ ಗಡಿಯಲ್ಲಿ ಗಸ್ತು ತಿರುಗಾಟ ಪುನರ್ ಆರಂಭಿಸಿದೆ. ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಚೀನಾ ಜೊತೆಗಿನ ಮಾತುಕತೆ ಯಶಸ್ವಿಯಾಗಿದೆ. ಗಡಿಯಲ್ಲಿನ ಪರಿಸ್ಥಿತಿ ತಿಳಿಗೊಂಡಿದೆ. ಇದೀಗ ಉಭಯ ದೇಶಗಳು ಗಸ್ತು ತಿರುಗಲು ಸಮ್ಮತಿಸಿದೆ ಎಂದು ಮಿಸ್ರಿ ಹೇಳಿದ್ದಾರೆ. ಸೂಕ್ಷ್ಮ ಪ್ರದೇಶದಲ್ಲಿ ನಿಯೋಜಿಸಿದ್ದ ಸೇನಾ ಪಡೆಯನ್ನು ವಾಪಸ್ ಕರೆಸಿಕೊಳ್ಳಲು ಚೀನಾ ಸಮ್ಮತಿಸಿದೆ. ಜೊತೆಗೆ ಜಂಟಿಯಾಗಿ ಗಡಿಯಲ್ಲಿ ಗಸ್ತು ಪುನರ್ ಆರಂಭಿಸಲಾಗುತ್ತದೆ ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಬ್ರಿಕ್ಸ್ ಶೃಂಗಸಭೆಗಾಗಿ ರಷ್ಯಾ ಪ್ರವಾಸಕ್ಕೂ ಮುನ್ನವೇ ಈ ರಾಜತಾಂತ್ರಿಕ ಗೆಲುವು ಭಾರತದ ಆತ್ಮವಿಶ್ವಾಸ ಹೆಚ್ಚಿಸಿದೆ. ಲಡಾಕ್‌ನ ದೀಪ್‌ಸಾಂಗ್ ಹಾಗೂ ದೆಮ್‌ಚೊಕ್ ವಲಯದಲ್ಲಿ ಗಸ್ತು ತಿರುಗಾಟ ಆರಂಭಗೊಳ್ಳಲಿದೆ. ಕಳೆದ ಕೆಲ ವಾರಗಳಿಂದ ನಡಸಿದ ಸತತ ಮಾತುಕತೆ ಫಲಪ್ರದವಾಗಿದೆ. 2020ರ ದಾಳಿ ಬಳಿಕ ಲಡಾಖ್ ಗಡಿಯಲ್ಲಿ ನಿರ್ಮಾಣವಾದ ಉದ್ವಿಘ್ನ ಪರಿಸ್ಥಿತಿಯಿಂದ ಸಮಸ್ಯೆ ಉಲ್ಭಣಗೊಂಡಿತ್ತು. ಪ್ರಧಾನಿ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ವಿದೇಶಾಂಗ ಕಾರ್ಯದರ್ಶಿ ಸುದ್ದಿಗೋಷ್ಠಿ ಮೂಲಕ ಮಾಹಿತಿ ನೀಡಿದ್ದಾರೆ. ರಷ್ಯಾದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಕ್ಸಿ ಜಿನ್‌ಪಿಂಗ್ ಔಪಚಾರಿಕ ಮಾತುಕತೆ ನಡೆಸಲಿದ್ದಾರೆ. ಈ ಮಾತುಕತೆಗೂ ಮೊದಲೇ ಗಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿದೆ. ಹೀಗಾಗಿ ಈ ಮಾತುಕತೆಯಲ್ಲಿ ಭಾರತಕ್ಕೆ ಮತ್ತಷ್ಟು ರಾಜತಾಂತ್ರಿಕ ಗೆಲುವವಾಗುವ ಸಾಧ್ಯತೆ ಇದೆ.