ಬೆಳಗಾವಿ : ಅನೈತಿಕ ಸಂಬಂಧ ಮುಂದುವರೆಸಿಕೊಂಡು ಹೋಗುವಂತೆ ಪೀಡಿಸುತ್ತಿದ್ದ ಪ್ರಿಯಕರನ್ನು ಪತಿ ಮತ್ತು ಮನೆಯವರು ಸೇರಿ ಹಾಡಹಗಲೇ ಕೊಲೆ ಮಾಡಿರುವ ಘಟನೆ ರಾಮದುರ್ಗ ತಾಲೂಕಿನ ತೋರಣಗಟ್ಟಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ತೋರಣಗಟ್ಟಿ ಗ್ರಾಮದ ಗೋಪಾಲ ಶಿವಪ್ಪ ಶಿವಾಪುರ (28) ಹತ್ಯೆಯಾದ ಯುವಕ. ಅದೇ ಗ್ರಾಮದ ಮಲ್ಲಿಕಾರ್ಜುನ ಕಟ್ಟಿ (59), ಶಿವಶಂಕರ ಕಟ್ಟಿ (29), ಪ್ರೇಯಸಿ ಸುಮಿತ್ರಾ ಸಂಗೊಳ್ಳಿ (27) ಮತ್ತು ಅಳಿಯ ಪತ್ರೆಪ್ಪ ಚಿಕ್ಕುಂಬಿ (34) ಎಂಬುವರು ಕೊಲೆ ಮಾಡಿದ ಆರೋಪದ ಮೇಲೆ ಬಂಧಿತರಾದವರು. ಮೂರು ಮಕ್ಕಳ ತಾಯಿಯಾದ ನಂತರವೂ ತನ್ನ ಸ್ನೇಹವನ್ನು ಮುಂದುವರಿಸಬೇಕು ಎಂದು ಅವಿವಾಹಿತ ಗೋಪಾಲ ಆಕೆಯ ಪತಿಯ ಮನೆ ಮತ್ತು ತವರು ಮನೆಯಲ್ಲಿಯೂ ಪೀಡಿಸುತ್ತಿದ್ದ ಎನ್ನಲಾಗಿದೆ. ನನಗೆ ಮದುವೆಯಾಗಿ ಮಕ್ಕಳಾಗಿವೆ. ಪತಿಯ ಮನೆಗೂ ವಿಷಯ ಗೊತ್ತಾಗಿದೆ ಎಂದು ಪ್ರೇಯಸಿ ಹೇಳಿದ್ದರೂ ಹಠಕ್ಕೆ ಬಿದ್ದವನಂತೆ ಪದೇ ಪದೇ ಫೋನ್ ಮಾಡಿ ಕಾಡಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತವರು ಮನೆಗೆ ಬಂದಿದ್ದ ಆಕೆಯನ್ನು ಮತ್ತೆ ಪೀಡಿಸಿದ ಗೋಪಾಲನಿಗೆ ಎಚ್ಚರಿಕೆ ನೀಡಲು ಮುಂದಾದ ಆರೋಪಿಗಳು ಥಳಿಸಿದ ನೋವಿನಿಂದ ನೆಲಕ್ಕೆ ಉರುಳಿದ್ದಾನೆ. ಅವನಿಗೆ ಕಟಕೋಳದ ಪ್ರಾಥಮಿಕ ಆರೋಗ್ಯ ಇಲಾಖೆಯಲ್ಲಿ ಚಿಕಿತ್ಸೆ ನೀಡಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಮೃತನಾಗಿರುವುದಾಗಿ ಮೂಲಗಳು ತಿಳಿಸಿವೆ. ಕಟಕೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.