ಬೆಳಗಾವಿ : ಹೋರಾಟ ಎನ್ನುವುದು ಬಾಹಿಕ ಸ್ಪೂರ್ತಿಯಿಂದ ಬಂದಾಗ ಅದು ಆ ಕ್ಷಣದ ಹೋರಾಟವಾಗುತ್ತದೆ. ಅದೇ ಅಂತರಾಳದಿಂದ ಬಂದಾಗ ಸಮಸ್ತ ಪರಿಸರವನ್ನೇ ಬಡಿದೆಬ್ಬಿಸುತ್ತದೆ. ಇದಕ್ಕೆ ರಾಣಿ ಚನ್ನಮ್ಮನ ಹೋರಾಟವೇ ಸಾಕ್ಷಿ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ ಸಿ ಎಂ ತ್ಯಾಗರಾಜ ಅಭಿಪ್ರಾಯಪಟ್ಟರು.

ನಗರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಹಯೋಗದಲ್ಲಿ ರಾಣಿ ಚನ್ನಮ್ಮನ ಐತಿಹಾಸಿಕ ವಿಜಯದ 200 ನೇ ಸಂಭ್ರಮದ ಕುರಿತು ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪುರುಷನ ಬಹುತೇಕ ಹೋರಾಟವು ಅಧಿಕಾರದ ಪ್ರತೀಕವಾದರೆ, ಅದೇ ಪ್ರತಿ ಹೆಣ್ಣಿನ ಹೋರಾಟದ ಹಿಂದೆ ಈ ನೆಲದ ಸಂಸ್ಕೃತಿಯ, ಸ್ವಾಭಿಮಾನ ಅಡಗಿರುತ್ತದೆ. ಈ ನೆಲದ ಸಂಸ್ಕೃತಿಯ ಅಳಿವು ಉಳಿವಿನ ಪ್ರಶ್ನೆ ಬಂದಾಗ ಪ್ರತಿ ಹೆಣ್ಣು ಶತ್ರುಗಳ ವಿರುದ್ಧ ರಣಾಂಗಣದಲ್ಲಿ ಹೋರಾಡಿದನ್ನು ನಾಡಿನ ಚರಿತ್ರೆಯುದ್ದಕ್ಕೂ ದಾಖಲಾಗಿದೆ. ಕನ್ನಡ ನಾಡು ಕ್ಷಾತ್ರತೇಜದ ದೊಡ್ಡ ಪರಂಪರೆಯೇ ಹೊಂದಿದೆ. ಚನ್ನಮ್ಮನ ಕ್ಷಾತ್ರತೇಜದ ಪರಂಪರೆಯಿಂದಾಗಿ ಬ್ರಿಟಿಷರ ವಿರುದ್ಧ ಹೋರಾಡುತ್ತಿದ್ದ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಹೆಚ್ಚು ಸ್ಪೂರ್ತಿ ನೀಡಿತು. ಆರ್ಥಿಕವಾಗಿ ಸೊರಗಿದ ಕುಟುಂಬದ ಮಕ್ಕಳು ಆರ್ಥಿಕವಾಗಿ ಮುಂದುವರಿದಿರುವ ಕುಟುಂಬದ ಮಕ್ಕಳಿಗಿಂತ ಬದುಕಿನಲ್ಲಿ ಹೆಚ್ಚು ಗಟ್ಟಿಯಾಗಿ, ಧೈರ್ಯ ಸ್ಥೈರ್ಯದಿಂದ ಇದ್ದು ಸ್ವಂತ ಬದುಕನ್ನು ಕಟ್ಟಿಕೊಳ್ಳುತ್ತಾರೆ. ವಿದ್ಯಾರ್ಥಿಗಳ ಜೀವನವು ಚನ್ನಮ್ಮನ ಹೋರಾಟದಂತಿದ್ದಾಗ ಮಾತ್ರ ಯಶಸ್ಸು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ರಾಚವಿ ಸಿಂಡಿಕೇಟ್ ಸದಸ್ಯರಾದ ಮಹಾಂತೇಶ ಕಂಬಾರ ಅವರು ಅಂದು ರಾಣಿ ಚನ್ನಮ್ಮ ಈ ನಾಡಿನ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಕ್ರಾಂತಿಯ ಕಹಳೆ ಮೊಳಗಿಸಿದಳು. ಅವಳ ಸಾಹಸ, ಹೋರಾಟಗಳು ಸಮಾಜಕ್ಕೆ ಸ್ಪೂರ್ತಿ ಎಂದರು.

ರಾಚವಿಯ ವಿದ್ಯಾವಿಷಯಕ ಪರಿಷತ್ತಿನ ಸದಸ್ಯ ಡಾ. ನಿರ್ಮಲಾ ಬಟ್ಟಲ ಅವರು ಕಿತ್ತೂರು ಚನ್ನಮ್ಮನ ಕುರಿತು ವಿಶೇಷ ಉಪನ್ಯಾಸ ನೀಡಿ, ಸಂಸ್ಥಾನದ ಏಳಿಗೆ, ಅವನತಿಯ ಚರಿತ್ರೆಯನ್ನು ವಿವರಿಸಿದರು. ರಾಣಿ ಚನ್ನಮ್ಮ ಹೋರಾಟ ಮಾಡಿದ ನೆಲದಲ್ಲಿ ಬದುಕುವುದೇ ನಮ್ಮ ಸೌಭಾಗ್ಯ. ಅವಳ ಹೋರಾಟದ ಕಿಚ್ಚು ಎಲ್ಲಾ ಕಡೆ ಪಸರಿಸಿದ ಪರಿಣಾಮ ಈ ಭಾಗದ ಅನೇಕ ಸಂಸ್ಥಾನಗಳು ಬ್ರಿಟಿಷರ ವಿರುದ್ಧ ಹೋರಾಡಿದವು. ನಮ್ಮಲ್ಲಿ ಇತಿಹಾಸ ಪ್ರಜ್ಞೆಯ ಕೊರತೆಯಿಂದ ರಾಣಿ ಚನ್ನಮ್ಮ ನಿಗೆ ಇತಿಹಾಸದಲ್ಲಿ ಸಿಗಬೇಕಾದ ಸ್ಥಾನಮಾನ ಸಿಗಲಿಲ್ಲ ಎಂದರು.

ಕುಲಸಚಿವ ಸಂತೋಷ ಕಾಮಗೌಡ ಅವರು ನಮ್ಮ ಅಧ್ಯಯನ ಪೀಠದ ವತಿಯಿಂದ ನಾನು ಚನ್ನಮ್ಮ ನಾನೂ ಚನ್ನಮ್ಮ ಎಂಬ ಕಿರು ಹೊತ್ತಿಗೆ ತರುತ್ತಿದ್ದೇವೆ. ವಿದ್ಯಾರ್ಥಿಗಳು ತಮ್ಮ ಮೇಲಾದ ಚನ್ನಮ್ಮನ ಪ್ರಭಾವವನ್ನು ಕುರಿತು ಲೇಖನವನ್ನು ಬರೆದು ಕೊಡಿ. ಅದೆಲ್ಲವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಅಂದು ಚನ್ನಮ್ಮ ಬ್ರಿಟಿಷರ ವಿರುದ್ಧ ಖಡ್ಗದ ಕಿಡಿಯನ್ನು ಹೊತ್ತಿಸಿದರೆ ಇಂದಿನ ಹೆಣ್ಣು ಮಕ್ಕಳು ಲೇಖನಿಯ ಕಿಡಿಯ ಮೂಲಕ ತಮಗಾದ ಅನ್ಯಾಯವನ್ನು ಪ್ರತಿಭಟಿಸಿ ವ್ಯವಸ್ಥೆಯನ್ನು ಸುಧಾರಿಸಲು ಕೈಜೋಡಿಸಬೇಕು. ಅದುವೇ ರಾಣಿ ಚನ್ನಮ್ಮನಿಗೆ ಕೊಡುವ ಅತೀ ದೊಡ್ಡ ಗೌರವ ಎಂದರು.

ಹಣಕಾಸು ಅಧಿಕಾರಿ ಎಂ. ಎ. ಸಪ್ನಾ ಅವರು ನಾಡನ್ನು ರಾಜಕೀಯ, ಸಾಹಿತ್ಯಿಕ, ಸಾಂಸ್ಕೃತಿಕವಾಗಿ ಸುದೃಢಗೊಳಿಸಲು ಮಹಿಳೆಯರ ಕೊಡುಗೆ ಅಪಾರವಾದದ್ದು. ಪುರುಷನಿಗಿಂತ ಹೆಣ್ಣು ಇತಿಹಾಸದುದ್ದಕ್ಕೂ ಹೆಚ್ಚು ಕಷ್ಟವನ್ನು ಅನುಭವಿಸುತ್ತಾ ಬಂದಿದ್ದಾಳೆ ಎಂದು ಹೇಳಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ ಎಂ ಜಿ ಹೆಗಡೆ, ಹಿರಿಯ ಸಾಹಿತಿ ಯ. ರು. ಪಾಟೀಲ, ಅಧ್ಯಯನ ಪೀಠದ ನಿರ್ದೇಶಕಿ ಪ್ರೊ. ನಾಗರತ್ನ ಪರಾಂಡೆ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದ ನಿಮಿತ್ತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಏಕಪಾತ್ರಾಭಿನಯ, ಭಾಷಣ, ಪ್ರಬಂಧ, ದೇಶಭಕ್ತಿಗೀತೆ, ಹಾಗೂ ಡ್ರಾಯಿಂಗ್ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪುಸ್ತಕ ಮತ್ತು ಪ್ರಮಾಣಪತ್ರವನ್ನು ವಿತರಿಸಲಾಯಿತು. ಅಧ್ಯಯನ ಪೀಠದ ಸಂಯೋಜಕ ಡಾ. ಮಹೇಶ ಗಾಜಪ್ಪನರ ವಂದಿಸಿದರು. ಡಾ. ಪ್ರೀತಿ ಪದಪ್ಪಗೋಳ ಪರಿಚಯಿಸಿದರು.
ವಿದ್ಯಾರ್ಥಿನಿ ಶಾಂಭವಿ ಥೋರ್ಲಿ ನಿರೂಪಿಸಿದರು. ಗಾಯತ್ರಿ ಹಲಗಿ ಸ್ವಾಗತಿಸಿದರು. ಪ್ರಿಯಾಂಕಾ ತಿಲಗಾರ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.