ಬೆಳಗಾವಿ : ವೀರರಾಣಿ ಕಿತ್ತೂರು ಚನ್ನಮ್ಮ ಅವರ 200ನೇ ವಿಜಯೋತ್ಸವ ಆಚರಣೆ ಪ್ರಯುಕ್ತ ಕಿತ್ತೂರು ಉತ್ಸವ ಸಂಪನ್ನಗೊಂಡಿದೆ. ವೀರರಾಣಿ ಚನ್ನಮ್ಮ ಅವರು ಕೊನೆಯ ದಿನಗಳನ್ನು ಸೆರೆವಾಸದಲ್ಲಿ ಅನುಭವಿಸಿರುವ ಬೈಲಹೊಂಗಲ ಇದೀಗ ಚೊಚ್ಚಲ ಬೈಲಹೊಂಗಲ ಉತ್ಸವಕ್ಕೆ ಸಜ್ಜಾಗುತ್ತಿದೆ.

ಅಕ್ಟೋಬರ್ 28 ರಂದು ಇದೇ ಮೊದಲ ಬಾರಿಗೆ ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರಥಮ ಬೈಲಹೊಂಗಲ ಉತ್ಸವ ಏರ್ಪಡಿಸಲಾಗಿದೆ.
ಬೈಲಹೊಂಗಲ ಕಲ್ಮಠಗಲ್ಲಿಯ ವೀರರಾಣಿ ಕಿತ್ತೂರು ಚನ್ನಮ್ಮ ಐತಿಹಾಸಿಕ ಸಮಾಧಿಯ ಸ್ಥಳದಲ್ಲಿ ಚನ್ನಮ್ಮ ಸ್ಮರಣೋತ್ಸವ ಸಮಿತಿಯು ಉತ್ಸವ ನಡೆಸುವಂತೆ ಸರಕಾರಕ್ಕೆ ಮನವಿ ಮಾಡಿತ್ತು. ಇದಕ್ಕೆ ಸರ್ಕಾರ ಸ್ಪಂದನೆ ನೀಡಿ ಈಗ ಉತ್ಸವದ ಸಿದ್ಧತೆ ನಡೆದಿದೆ. ಬೈಲಹೊಂಗಲ ಉತ್ಸವಕ್ಕೆ ವಿಶಾಲ ವೇದಿಕೆ ಸಜ್ಜುಗೊಳಿಸಲಾಗಿದೆ. 10,000 ಜನರಿಗೆ ಕೂಡಲು ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ರೂಪಕ, ವಿಚಾರಗೋಷ್ಠಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ.