ಬೆಂಗಳೂರು : ಬೇಲೆಕೆರೆ ಅದಿರು ನಾಪತ್ತೆ ಪ್ರಕರಣದಲ್ಲಿ ಕಾಯ್ದಿರಿಸಿದ್ದ ಶಾಸಕ ಸತೀಶ್ ಸೈಲ್ ಸೇರಿದಂತೆ ಇತರರ ಶಿಕ್ಷೆಯ ಪ್ರಮಾಣದ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ಪ್ರಕಟಿಸಿದೆ. ಶಾಸಕರಿಗೆ ಮೊದಲ ಅಂದರೆ ಒಳಸಂಚು ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆ, ಒಂದನೇ ಪ್ರಕರಣದಲ್ಲಿ ಏಳು ವರ್ಷ ಶಿಕ್ಷೆ ಪ್ರಕಟವಾಗಿದೆ. ಜೊತೆಗೆ ಕಳ್ಳತನ ಪ್ರಕರಣದಲ್ಲಿ ಮೂರು ವರ್ಷ ಜೈಲು ಶಿಕ್ಷೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಅಲ್ಲದೆ ಒಟ್ಟು ಒಂಬತ್ತು ಕೋಟಿ 60 ಲಕ್ಷ ದಂಡ ವಿಧಿಸಿದೆ. ಶಾಸಕರಿಗೆ ಎರಡು ವರ್ಷಕ್ಕಿಂತ ಹೆಚ್ಚಿನ ಶಿಕ್ಷೆ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಅವರ ಶಾಸಕ ಸ್ಥಾನ ರದ್ದಾಗುವ ಸಾಧ್ಯತೆ ಇದೆ. ಸತೀಶ್ ಮತ್ತು ಅಂದಿನ ಬಂದರು ಅಧಿಕಾರಿ ಮಹೇಶ್ ಬಿಳಿಯ ಸೇರಿದಂತೆ ಏಳು ಜನರನ್ನು ದೋಷಿಗಳು ಎಂದು ಮಹತ್ವದ ತೀರ್ಪು ಪ್ರಕಟಿಸಲಾಗಿದ.

ಸಿಬಿಐ ಪರ ಹಿರಿಯ ಸರಕಾರಿ ಅಭಿಯೋಜಕಿ ಕೆ.ಎಸ್.ಹೇಮಾ ವಾದ ಮಂಡಿಸಿ ಆರೋಪಿಗಳು 3100 ಮೆಟ್ರಿಕ್ ಟನ್ ಅದಿರು ಕಳ್ಳ ಸಾಗಾಣಿಕೆಯಲ್ಲಿ ಭಾಗಿಯಾಗಿದ್ದಾರೆ. ಇದರಿಂದ ಸರ್ಕಾರಕ್ಕೆ 250 ಕೋಟಿ ರೂಪಾಯಿ ನಷ್ಟವಾಗಿದೆ. ಆರೋಪಿಗಳು ಆರ್ಥಿಕ ಅಪರಾಧ ಎಸಗಿದ್ದು ಗರಿಷ್ಠ ಜೈಲು ಶಿಕ್ಷೆಯ ಜೊತೆಗೆ ದಂಡ ವಿಧಿಸುವಂತೆ ಕೋರ್ಟಿಗೆ ಮನವಿ ಮಾಡಿದ್ದರು. ಶಾಸಕ ಸತೀಶ್ ಸೈಲ್ ಬೇಲೆಕೆರೆ ಬಂದರು ಉಪ ಸಂರಕ್ಷಣಾಧಿಕಾರಿ (ಡೆಪ್ಯೂಟಿ ಫೋರ್ಟ್ ಕನ್ಸರ್ವೇಟರ್) ಮಹೇಶ್ ಬಿಳಿಯ, ಲಾಲ್ ವುಹಲ್ ಕಂಪನಿ ಮಾಲಕ ಪ್ರೇಮ್ ಚಂದ್ ಗರ್ಗ್, ಶ್ರೀ ಲಕ್ಷ್ಮಿ ವೆಂಕಟೇಶ್ವರ ಟ್ರೈಡರ್ಸ್ ಮಾಲಕ ಕಾರದಪುಡಿ ಮಹೇಶ್, ಸ್ವಸ್ತಿಕ್ ಕಂಪನಿ ಮಾಲಕ ಕೆ.ವಿ.ನಾಗರಾಜ್, ಗೋವಿಂದರಾಜು, ಆಶಾಪುರ ಕಂಪನಿ ಮಾಲಕ ಚೇತನ್ ಬಂಧನಕ್ಕೊಗಾಗಿದ್ದು ಪರಪ್ಪನ ಅಗ್ರಹಾರ ಕೇಂದ್ರ ಕಾರಗೃಹದಲ್ಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಆರು ಪ್ರಕರಣ ದಾಖಲಾಗಿದ್ದು ಎಲ್ಲ ಪ್ರಕರಣಗಳ ವಿಚಾರಣೆ ನಡೆಸಿರುವ ನ್ಯಾಯಾಲಯವು ಸತೀಶ ಸೈಲ್ ಸೇರಿದಂತೆ ಎಲ್ಲಾ ಆರೋಪಿಗಳು ದೋಷಿಗಳು ಎಂದು ಹೇಳಿದೆ.