ಬೆಂಗಳೂರು: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಭಾನುವಾರ ಗೋವಾದಲ್ಲಿ ನಡೆದ ಐರನ್‌ಮ್ಯಾನ್ 70.3 ಎಂಡ್ಯೂರೆನ್ಸ್ ರೇಸ್‌ ಅನ್ನು ಪೂರ್ಣಗೊಳಿಸಿದ ಮೊದಲ ಜನಪ್ರತಿನಿಧಿಯಾಗಿ ಹೊರಹೊಮ್ಮಿದ್ದಾರೆ.
ಸ್ಫರ್ಧೆಯು 1.9 ಕಿಮೀ ಈಜು, 90 ಕಿ.ಮೀ ಸೈಕ್ಲಿಂಗ್ ಮತ್ತು 21.1 ಕಿ.ಮೀ ಓಟ ಹೀಗೆ 3 ವಿಭಾಗಗಳಲ್ಲಿ ನಡೆಯಿತು. ಇಡೀ ಈವೆಂಟ್‌ನಲ್ಲಿ ಭಾಗವಹಿಸುವವರು 113 ಕಿಲೋಮೀಟರ್ (ಅಥವಾ 70.3 ಮೈಲುಗಳು) ವರೆಗೆ ಪ್ರಯಾಣಿಸಿದರು. 8 ಗಂಟೆ, 27 ನಿಮಿಷ ಮತ್ತು 32 ಸೆಕೆಂಡುಗಳಲ್ಲಿ ಈ ಎಲ್ಲ ಚಟುವಟಿಕೆಗಳನ್ನು ಪೂರ್ಣಗೊಳಿಸುವ ಮೂಲಕ ಅವರು ಗೆಲವು ಸಾಧಿಸಿದರು.

ಈ ಮೂಲಕ ಐರನ್ ಮ್ಯಾನ್ 70.3 ರೇಸ್‌ ಯಶಸ್ವಿಯಾಗಿ ಪೂರೈಸಿದ ಮೊದಲ ಜನಪ್ರತಿನಿಧಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ‘ಗೋವಾ ಐರನ್‌ ಮ್ಯಾನ್‌ ಕ್ರೀಡೆಗೆ ಹೆಸರುವಾಸಿ. 50ಕ್ಕೂ ಹೆಚ್ಚು ದೇಶಗಳ ಕ್ರೀಡಾಪಟುಗಳು ಈ ರೇಸ್‌ನಲ್ಲಿ ಪಾಲ್ಗೊಂಡಿರುವುದು ವಿಶೇಷ. 4 ತಿಂಗಳಿಂದ ಕಠಿಣ ತರಬೇತಿ ಪಡೆದಿದ್ದೆ. ಸ್ವಾಮಿ ವಿವೇಕಾನಂದ ಅವರ ಸ್ಫೂರ್ತಿದಾಯಕ ಸಂದೇಶ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ‘ಫಿಟ್‌ ಇಂಡಿಯಾ’ ಉಪಕ್ರಮವು ಇಂತಹ ಸವಾಲನ್ನು ಕೈಗೊಳ್ಳಲು ಪ್ರೇರಕ. ಫಿಟ್‌ ಇಂಡಿಯಾ ಅಭಿಯಾನ ನನ್ನ ಇಂದಿನ ಅಭಿಯಾನಕ್ಕೆ ಸ್ಪೂರ್ತಿ’ ಎಂದು ಅವರು ಹೇಳಿದ್ದಾರೆ.

2022 ರಲ್ಲಿ, ತೇಜಸ್ವಿ ಸೂರ್ಯ ರಿಲೇ ತಂಡದ ಭಾಗವಾಗಿ ಐರನ್‌ಮ್ಯಾನ್ 70.3 ಗೋವಾದಲ್ಲಿ ಭಾಗವಹಿಸಿ, 90 ಕಿಮೀ ಸೈಕ್ಲಿಂಗ್ ವಿಭಾಗವನ್ನು ಪೂರ್ಣಗೊಳಿಸಿದ್ದರು.
ಈ ವರ್ಷದ ರೇಸ್‌ನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸರ್ವಿಸ್‌ಗಳಿಂದ 120 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು, ಕ್ರೀಡಾಪಟುಗಳ ಆಧಾರದ ಮೇಲೆ ಮಹಿಳೆಯರು ಶೇಕಡಾ 12-15 ರಷ್ಟಿದ್ದಾರೆ. ಗಮನಾರ್ಹವಾಗಿ, ಈ ವರ್ಷದ ಭಾಗವಹಿಸುವವರಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು ಜನರು ಮೊದಲ ಬಾರಿಗೆ ಸ್ಪರ್ಧಿಗಳಾಗಿದ್ದಾರೆ, ಇದು ಭಾರತದಲ್ಲಿ ಟ್ರಯಥ್ಲಾನ್ ಸಮುದಾಯವನ್ನು ವಿಸ್ತರಿಸುವಲ್ಲಿ ಈವೆಂಟ್‌ನ ಮಹತ್ವದ ಪಾತ್ರವನ್ನು ಒತ್ತಿಹೇಳುತ್ತದೆ.
ಪ್ರಧಾನಿ ಮೆಚ್ಚುಗೆ:
ಸಂಸದ ತೇಜಸ್ವಿ ಸೂರ್ಯ ಅವರ ಸಾಧನೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಪ್ರಶಂಸನೀಯ ಸಾಧನೆ!. ಫಿಟ್‌ನೆಸ್ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಇದು ಅನೇಕ ಯುವಕರಿಗೆ ಸ್ಪೂರ್ತಿ ನೀಡಲಿದೆ ಎಂಬ ಖಾತರಿ ನನಗಿದೆ’ ಎಂದಿದ್ದಾರೆ.