ಬೆಂಗಳೂರು: ‘ನಾನೇ ಮುಖ್ಯಮಂತ್ರಿ ಆಗಿರುತ್ತೇನೆ. ಈ ಅವಧಿಯನ್ನೂ ನಾನೇ ಪೂರ್ಣಗೊಳಿಸುತ್ತೇನೆ. ಮುಂದಿನ ಸರ್ಕಾರವೂ ನಮ್ಮದೇ’ ಎಂದು ಸಿದ್ದರಾಮಯ್ಯ ಹೇಳಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ರಚಿಸಿರುವ ಸಮಿತಿಗಳ ಅಧ್ಯಕ್ಷ ಹುದ್ದೆ ರದ್ದು ಮಾಡಬೇಕೆಂಬ ಪ್ರತಿಪಕ್ಷ ಸದಸ್ಯರ ಆಗ್ರಹಕ್ಕೆ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರು ಬುಧವಾರ ಉತ್ತರ ನೀಡುತ್ತಿದ್ದರು. ಈ ವೇಳೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು, ‘ನೀವು ಇಂತಹ ತಪ್ಪುಗಳನ್ನು (ಗ್ಯಾರಂಟಿ ಸಮಿತಿ ರಚನೆ) ಮಾಡಿದರೆ ಮುಂದೆ ಅಧಿಕಾರಕ್ಕೆ ಬರುವ ಸರ್ಕಾರಗಳು ಅದನ್ನೇ ಮುಂದುವರಿಸುತ್ತವೆ’ ಎಂದರು.

ಆಗ ಸಿದ್ದರಾಮಯ್ಯ ಅವರು, ‘ನಾನು ಈ ಅವಧಿ ಪೂರ್ಣಗೊಳಿಸುತ್ತೇನೆ. ಮುಂದಿನ ಬಾರಿಯೂ ಬಿಜೆಪಿಯವರು ಗೆಲ್ಲುವುದಿಲ್ಲ. ನೂರಕ್ಕೆ ನೂರು ನಾವೇ ಮತ್ತೆ ಗೆದ್ದು ಬರುತ್ತೇವೆ’ ಎಂದರು.

‘ಅಕ್ಟೋಬರ್‌ಗೆ ನಿಮ್ಮ ಅವಧಿ ಮುಗಿಯುತ್ತೆ ಎನ್ನುತ್ತಾರೆ. ನೀವು ಐದು ವರ್ಷ ಪೂರೈಸಿ ಅಂತಲೇ ನಾವು ಬಯಸುತ್ತೇವೆ. ಐದು ವರ್ಷ ಸರ್ಕಾರ ಇದ್ದರೆ ಅದೇ ಪುಣ್ಯ’ ಎಂದು ಅಶೋಕ ಕಾಲೆಳದಾಗ, ‘ಮುಂದಿನ ಐದು ವರ್ಷ ಅಲ್ಲ; 25 ವರ್ಷ ನಾವೇ ಬರ್ತೇವೆ’ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.

‘ನೀವೇ ಮುಖ್ಯಮಂತ್ರಿ ಆಗಿರುತ್ತೀರಾ’ ಎಂದು ಬಿಜೆಪಿಯ ವಿ.ಸುನಿಲ್‌ಕುಮಾ‌ರ್ ಪ್ರಶ್ನಿಸಿದಾಗ, ‘ಹೌದು, ನಾನೇ ಮುಖ್ಯಮಂತ್ರಿ ಆಗಿರುತ್ತೇನೆ’ ಎಂದು ಸಿದ್ದರಾಮಯ್ಯ ಹೇಳಿದರು.

ಅದಕ್ಕೆ ಪ್ರತಿಕ್ರಿಯಿಸಿದ ಅಶೋಕ, ‘ನೀವು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ, ಏ… ಅಶೋಕ ಬರೆದುಕೊಳ್ಳಪ್ಪ, ನಾನೇ ಪರ್ಮನೆಂಟ್ ಅಂತ ಹೇಳಿದ್ದೀರಿ. ಚುನಾವಣೆ ಆದ ಬಳಿಕ ಕಾಣದಂತೆ ಮಾಯವಾದನೋ ನಮ್ಮ ಶಿವ… ಅಂತ ಕಾಣೆ ಆದಿರಿ. ಈಗ ಮತ್ತೆ ನಾನೇ ಬರ್ತೀನಿ ಅಂತಿದ್ದೀರಿ. ಹಾಗೆ ಹೇಳಿದ ಯಾರೂ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಲಿಲ್ಲ’ ಎಂದು ಕುಟುಕಿದರು.