
ಕುಂದಾಪುರ : ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಭಕ್ತರಾಗಿರುವ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಕುವೆಂಪು ನಗರದ ರಾಘವಾಂಬಿಕ ಆಯುರ್ವೇದ ಚಿಕಿತ್ಸಾಲಯದ ಡಾ.ಲಕ್ಷ್ಮೀನಾರಾಯಣ ಆರ್ ಅವರು ಬುಧವಾರ ಶ್ರೀ ಮೂಕಾಂಬಿಕಾ ದೇವಿಗೆ 1052 ಗ್ರಾಂ ತೂಕದ ರತ್ನಖಚಿತ ಚಿನ್ನದ ಮುಖವಾಡ ಅರ್ಪಿಸಿದರು.
ಶ್ರೀದೇವಿಗೆ ರತ್ನಖಚಿತ ಚಿನ್ನದ ಮುಖವಾಡ ಅರ್ಪಿಸಲು ಸಂಕಲ್ಪ ಮಾಡಿದ್ದ ಅವರು, ದೇಗುಲದ ವ್ಯವಸ್ಥಾಪನಾ ಸಮಿತಿಯಿಂದ ಅನುಮತಿ ಪಡೆದುಕೊಂಡು ಮುಖವಾಡ ಸಿದ್ದಪಡಿಸಿದ್ದು, 693.750 ತೂಕದ 22 ಕ್ಯಾರೆಟ್ ಚಿನ್ನ ಬಳಸಲಾಗಿದ್ದು, ವಜ್ರ, ಪಚ್ಚೆ, ನೀಲ, ಮಾಣಿಕ್ಯ ಹಾಗೂ ದಕ್ಷಿಣ ಭಾರತದ ಸಮುದ್ರ ಹವಳಗಳನ್ನು ಅಳವಡಿಸಲಾಗಿದೆ. ಬೆಂಗಳೂರಿನ ಕರ್ನಾಟಕ ರಾಜ್ಯ ಜ್ಯುವೆಲ್ಲರ್ಸ್ ಅಸೋಸಿಯೇಷನ್ ಹಾಗೂ ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ಜೆಮೋಲಜಿ ಮತ್ತು ಲ್ಯಾಬೋರೇಟರಿ ಸರ್ವಿಸಸ್ನವರು ಇದನ್ನು ಪರೀಕ್ಷಿಸಿ ಪ್ರಮಾಣ ಪತ್ರ ನೀಡಿದ್ದಾರೆ.
ಬುಧವಾರ ಕುಟುಂಬ ಸಹಿತರಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮುಖವಾಡದ ಸಮರ್ಪಣೆ ಮಾಡಿದರು. ದೇಗುಲದ ವತಿಯಿಂದ ಡಾ.ಲಕ್ಷ್ಮೀನಾರಾಯಣ ಆರ್ ದಂಪತಿಯನ್ನು ಗೌರವಿಸಲಾಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ತಗ್ಗರ್ಸೆ, ಸದಸ್ಯರಾದ ರಘುರಾಮ ದೇವಾಡಿಗ ಆಲೂರು, ಮಹಾಲಿಂಗ ನಾಯ್ಕ, ಕೆ.ಸುಧಾ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ಇದ್ದರು.