
ಹೆಬ್ರಿ : ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿಪೂರ್ವ ಕಾಲೇಜು ಹೆಬ್ರಿ ಇಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು
ಮೋಹನ್ ಕುಮಾರ್ ಕುಂಬಳೇಕರ್ , ಯೋಗ ಗುರುಗಳು , ವಿವೇಕ ಯೋಗ ಕೇಂದ್ರ ಬ್ರಹ್ಮಾವರ ಇವರು ಅತಿಥಿಗಳಾಗಿ ಭಾಗವಹಿಸಿ , ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಯೋಗ ಈಶ್ವರನಿಂದ ಆರಂಭಗೊಂಡಿದ್ದು ಎನ್ನುವ ಪ್ರತೀತಿಯಿದೆ. ಯೋಗ ಭಾರತದ ಬಹಳ ಪ್ರಾಚೀನವಾದ ಕೊಡುಗೆಯಾಗಿದೆ. ನಿತ್ಯ ಯೋಗ ಮಾಡುವುದರಿಂದ ನಾವು ದೈಹಿಕವಾಗಿ ಸದೃಢವಾಗುವುದಲ್ಲದೆ , ಆರೋಗ್ಯ ಸಮಸ್ಯೆಗಳು ನಮ್ಮತ್ತ ಸುಳಿಯುವುದೇ ಇಲ್ಲ. ನಿತ್ಯ ಯೋಗ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ ಎಂದರು.
ನಂತರ ವಿವಿಧ ಯೋಗ ಆಸನಗಳನ್ನು ಪ್ರದರ್ಶಿಸಿ ವಿದ್ಯಾರ್ಥಿಗಳಿಂದ ಮಾಡಿಸಿದರು.
ಶ್ರೀ ಕೃಷ್ಣ ಯೋಗ ಕೇಂದ್ರ ಕಜ್ಕೆ, ನಾಲ್ಕೂರು ಇಲ್ಲಿನ ಯೋಗ ತರಬೇತುದಾರರಾದ ಭಾರತಿ ಅವರು ವಿದ್ಯಾರ್ಥಿಗಳಿಗೆ ಯೋಗ ಪ್ರದರ್ಶನಗಳನ್ನು ಹೇಳಿಕೊಟ್ಟರು. ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಶ್ ನಾಯಕ್, ಅಮೃತ ಭಾರತಿ ಟ್ರಸ್ಟ್ ವಿಶ್ವಸ್ಥ ಬಾಲಕೃಷ್ಣ ಮಲ್ಯ , ಪ್ರಾಂಶುಪಾಲ ಪ್ರಕಾಶ್ ಜೋಗಿ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ಉಪನ್ಯಾಸಕೇತರ ವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಭಾಷಾ ಉಪನ್ಯಾಸಕ ವೀಣೇಶ್ ಅಮೀನ್, ಚಂದ್ರಕಲಾ ನಿರೂಪಿಸಿ, ಸಂಖ್ಯಾಶಾಸ್ತ್ರ ಉಪನ್ಯಾಸಕ ಚಂದ್ರಹಾಸ್ ವಂದಿಸಿದರು.