ಮನೆಯಲ್ಲಿ ಮಲಗಿದ್ದ ಯುವತಿಗೆ ಯುವಕನೊಬ್ಬ ಚಾಕು ಇರಿದು ಕೊಲೆ ಮಾಡಿ ಪರಾರಿಯಾದ ಪ್ರಕರಣ ಹುಬ್ಬಳ್ಳಿ ವೀರಾಪುರ ಓಣಿಯಲ್ಲಿ ಬುಧವಾರ ನಡೆದಿದೆ.ಅಂಜಲಿ ಅಂಬಿಗೇರ(19) ಮೃತಪಟ್ಟ ಯುವತಿ. ವೀರಾಪುರ ಓಣಿಯ ಮೂರನೇ ಕ್ರಾಸ್ ನಿವಾಸಿ, ಆಟೊ ಚಾಲಕ ಗಿರೀಶ ಸಾವಂತ ಕೊಲೆ ಮಾಡಿದ ಆರೋಪಿ. ಪರಸ್ಪರ ಪ್ರೀತಿಸುತ್ತಿದ್ದ ಅಂಜಲಿ ಮತ್ತು ಗಿರೀಶ ನಡುವೆ ವೈಮನಸ್ಸು ಮೂಡಿತ್ತು ಎನ್ನಲಾಗಿದೆ. ಇದರಿಂದ ಕೋಪಗೊಂಡ ಗಿರೀಶ್, ಬುಧವಾರ ಬೆಳಗಿನ ಜಾವ 5ಗಂಟೆಗೆ ಅಂಜಲಿ ಮನೆಗೆ ಹೋಗಿ ಬಾಗಿಲು ಬಡಿದಿದ್ದಾನೆ. ಯಾರೂ ಬಾಗಿಲು ತೆರೆಯದಿದ್ದಾಗ, ಮತ್ತೊಮ್ಮೆ ಜೋರಾಗಿ ಬಾಗಿಲು ಬಡಿದಿದ್ದಾನೆ. ಅಂಜಲಿ ಸಹೋದರಿ ಬಾಗಿಲು ತೆರದಿದ್ದರು. ಏಕಾಏಕಿ ಒಳಗೆ ನುಗ್ಗಿದ ಗಿರೀಶ, ನಿದ್ದೆಯಲ್ಲಿದ್ದ ಅಂಜಲಿಯ ಕುತ್ತಿಗೆ ಹಾಗೂ ಹೊಟ್ಟೆ ಭಾಗಕ್ಕೆ ಚಾಕು ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಹತ್ಯೆ ಮಾದರಿಯಲ್ಲೇ ಕೊಲೆ ಮಾಡುವುದಾಗಿ ಈತ ಬೆದರಿಕೆ ಹಾಕಿದ್ದ.

 

ಹುಬ್ಬಳ್ಳಿ :
ಹುಬ್ಬಳ್ಳಿಯಲ್ಲಿ ನೇಹಾ ಮಾದರಿಯ ಮತ್ತೊಂದು ಕೊಲೆಯಾಗಿದೆ. ಆದರೆ, ಇದಕ್ಕೆ ಪೊಲೀಸರ ದಿವ್ಯ ನಿರ್ಲಕ್ಷ್ಯವೂ ಕಾರಣವಾಗಿದೆ. ಮೃತ ಯುವತಿಯ ಅಜ್ಜಿ ನೀಡಿದ್ದ ದೂರನ್ನು ಮೂಢನಂಬಿಕೆ ಎಂದಿದ್ದ ಪೊಲೀಸರು ಅವರನ್ನು ವಾಪಸ್ ಕಳುಹಿಸಿದ್ದರು. ಪರಿಣಾಮವಾಗಿ ಬುಧವಾರ ಬೆಳಗ್ಗೆ ನಸುಕಿನಲ್ಲೇ ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಕೊಲೆ ನಡೆದಿದೆ.

ನಸುಕಿನ ಜಾವ ನಸುನಿದ್ದೆಯಲ್ಲಿದ್ದ ಯುವತಿಯನ್ನು ವ್ಯಕ್ತಿಯೊಬ್ಬ ಚೂರಿಯಿಂದ ಇರಿದು ಹತ್ಯೆ ಮಾಡಿದ ಭೀಕರ ಘಟನೆಗೆ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ವೀರಾಪುರ ಓಣಿ ಸಾಕ್ಷಿಯಾಗಿದೆ. ಮೃತ ಯುವತಿಯನ್ನು ಅಂಜಲಿ ಅಂಬಿಗೇರ ಎಂದು ಗುರುತಿಸಲಾಗಿದೆ. ವಿಶ್ವ ಅಲಿಯಾಸ್ ಗಿರೀಶ್ ಎಂಬಾತ ಈ ಯುವತಿಯನ್ನು ಹತ್ಯೆ ಮಾಡಿದ್ದು, ನಂತರ ತಲೆಮರೆಸಿಕೊಂಡಿದ್ದಾನೆ.

ನೇಹಾ ಮಾದರಿಯಲ್ಲಿ ಹತ್ಯೆ ಮಾಡುತ್ತೇನೆ ಎಂದು ಅಂಜಲಿ ಅಂಬಿಗೇರಗೆ ವಿಶ್ವ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಅದರಂತೆಯೇ ಬುಧವಾರ ಬೆಳಗ್ಗೆ 5.30ಕ್ಕೆ ಮನೆಗೆ ನುಗ್ಗಿ ಚಾಕುವಿನಿಂದ ಇರಿದಿದ್ದಾನೆ. ಮನೆಯವರು ತಡೆಯಲು ಮುಂದಾದರೂ ಬಿಡದೆ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಈ ಹಿಂದೆ ಮೈಸೂರಿಗೆ ಬಾ ಎಂದು ಅಂಜಲಿಗೆ ವಿಶ್ವ ಧಮ್ಕಿ ಹಾಕಿದ್ದ. ಅಕಸ್ಮಾತ್ ನೀನು ನನ್ನ ಜೊತೆ ಬರದೆ ಹೋದರೆ ನಿರಂಜನ ಹಿರೇಮಠ ಮಗಳಿಗೆ ಆದ ಹಾಗೆಯೇ ನಿನಗೂ ಮಾಡುತ್ತೇನೆ ಎಂದು ಧಮ್ಕಿ ಹಾಕಿದ್ದ. ಈತನ ವಿರುದ್ಧ ಹಲವು ಕಳ್ಳತನ ಪ್ರಕರಣಗಳಲ್ಲಿ ಶಾಮೀಲಾದ ಆರೋಪವೂ ಇದೆ. ಜತೆಗೆ, ಬೈಕ್ ಕಳ್ಳತನದಲ್ಲಿಯೂ ಆರೋಪಿಯಾಗಿದ್ದಾನೆ.

ಮೂಢ ನಂಬಿಕೆ ಎಂದು ಕಳುಹಿಸಿದ್ದ ಪೊಲೀಸರು
ಆರೋಪಿ ವಿಶ್ವ ಅಂಜಲಿಗೆ ಧಮ್ಕಿ ಹಾಕಿರುವ ವಿಚಾರವಾಗಿ ಆಕೆಯ ಅಜ್ಜಿ ಗಂಗಮ್ಮ ಪೊಲೀಸರ ಗಮನಕ್ಕೆ ತಂದಿದ್ದರು. ಆದರೆ, ಅಜ್ಜಿಯ ಮಾತಿಗೆ ಹೆಚ್ಚು ಪ್ರಾಶಸ್ತ್ಯ ನೀಡದ ಪೊಲೀಸರು, ಇದೆಲ್ಲ ಮೂಢನಂಬಿಕೆ ಎಂದು ಹೇಳಿ ಕಳುಹಿಸಿದ್ದರು. ಪರಿಣಾಮವಾಗಿ ಇದೀಗ ಮತ್ತೊಂದು ಕೊಲೆಯಾಗಿದೆ.

ಕ್ರೌರ್ಯದ ಪರಮಾವಧಿ
ಮನೆಗೆ ನುಗ್ಗಿದ ವಿಶ್ವ ಅಂಜಲಿಯನ್ನು ಆಕೆಯ ಅಜ್ಜಿ ಹಾಗೂ ಇಬ್ಬರು ಸಹೋದರಿಯರ ಮುಂದೆಯೇ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಮನೆ ತುಂಬೆಲ್ಲಾ ಎಳೆದಾಡಿ ಚಾಕುವಿನಿಂದ ಇರಿದಿದ್ದಾನೆ. ಮೊದಲಿಗೆ ಮನೆಯ ಪಡಸಾಲಿಯಲ್ಲಿ ಅಂಜಲಿಗೆ ಚಾಕು ಹಾಕಿದ ವಿಶ್ವ, ಬಳಿಕ ಕುತ್ತಿಗೆ ಹಿಡಿದು ಗೋಡೆಯತ್ತ ಎಳೆದಕೊಂಡು ಹೋಗಿ ಹೊಟ್ಟೆ ಭಾಗಕ್ಕೆ ಚಾಕು ಹಾಕಿದ್ದಾನೆ. ಅಲ್ಲಿಂದ ಅಡುಗೆಯ ಮನೆಗೆ ಎಳೆದೊಯ್ದು ಮನ ಬಂದಂತೆ ಚಾಕು ಚುಚ್ಚಿದ್ದಾನೆ. ಅಂಜಲಿ ಕೊನೆಯುಸಿರೆಳೆದ ಬಳಿಕವೇ ಅಲ್ಲಿಂದ ಕಾಲ್ಕಿತ್ತಿದ್ದಾನೆ.