ಬೆಳಗಾವಿ : ಚಿಕ್ಕೋಡಿ ತಾಲೂಕಿನ ಕೋಥಳಿಯ ದೇಶಭೂಷಣ ಮುನಿಗಳ ಜೈನ ಆಶ್ರಮದಲ್ಲಿ ಕಳೆದ ನಾಲ್ಕು ದಿನಗಳಿಂದ ಯಮ ಸಲ್ಲೇಖನ ವ್ರತ ಕೈಗೊಂಡಿದ್ದ ಸಮಾಧಿಸೇನ ಮುನಿ (79) ಸೋಮವಾರ ರಾತ್ರಿ 9.30ಕ್ಕೆ ಜಿನೈಕ್ಯರಾಗಿದ್ದಾರೆ. ಆಶ್ರಮದ ಆವರಣದಲ್ಲಿಯೇ ಮಂಗಳವಾರ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಮೇ 17ರಿಂದ ಅವರು ನಾಲ್ಕು ಪ್ರಕಾರದ ಆಹಾರ (ಲೇಹ, ಪೇಯ, ಸ್ವಾದ್ಯ ಮತ್ತು ಖಾದ್ಯ) ತ್ಯಾಗ ಮಾಡಿದ್ದರು. ಚಿಕ್ಕೋಡಿ, ನಿಪ್ಪಾಣಿ, ಕಾಗವಾಡ, ಅಥಣಿ ತಾಲೂಕುಗಳು, ಕೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಯಿಂದ ಅಪಾರ ಸಂಖ್ಯೆಯಲ್ಲಿ ಜನರು ಆಶ್ರಮಕ್ಕೆ ಆಗಮಿಸಿ, ಮುನಿಗಳ ದರ್ಶನ ಪಡೆದರು.

ಗದಗ ಜಿಲ್ಲೆಯ ಗಜೇಂದ್ರಘಡ ಮೂಲದವರಾದ ಸಮಾಧಿಸೇನ ಮುನಿ ಅವರು ಗುಲಾಬಭೂಷಣ ಮುನಿ ಅವರ ಶಿಷ್ಯರಾಗಿದ್ದರು. ಸಂಸಾರಿಯಾಗಿದ್ದ ಅವರು, 2004ರಲ್ಲಿ ಮನೆ ತೊರೆದು ತ್ಯಾಗಿಯಾಗಿ ದೀಕ್ಷೆ ಪಡೆದು ಜೈನ ಧರ್ಮದ ಪ್ರಸಾರ ಕಾರ್ಯದಲ್ಲಿ ತೊಡಗಿದ್ದರು. 2014ರಲ್ಲಿ ಮಹಾರಾಷ್ಟ್ರದ ಚಿಪರಿ ಆಶ್ರಮದ ಧರ್ಮಸೇನ ಮುನಿ ಅವರಿಂದ ಕ್ಷುಲ್ಲಕ ದೀಕ್ಷೆ ಪಡೆದರು. 2021ರಲ್ಲಿ ಗುಲಾಬಸೇನ ಮುನಿ ಅವರಿಂದ ಮುನಿ ದೀಕ್ಷೆ ಪಡೆದಿದ್ದರು.

ಕೋಥಳಿಯ ಆಶ್ರಮದಲ್ಲಿ ದೇಶಭೂಷಣ ಮುನಿಗಳು ಸೇರಿದಂತೆ 40ಕ್ಕೂ ಅಧಿಕ ಜೈನ ಮುನಿಗಳು ಈವರೆಗೆ ಯಮ ಸಲ್ಲೇಖನ ವ್ರತ ಕೈಗೊಂಡು ದೇಹತ್ಯಾಗ ಮಾಡಿದ್ದಾರೆ. ಈ ಕಾರಣ ದೇಶದಲ್ಲೇ ಈ ಆಶ್ರಮಕ್ಕೆ ದೊಡ್ಡ ಇದೆ.