ಬೆಳಗಾವಿ : ಸಾಲ ಮರಳಿಸಲು ವಿಳಂಬವಾಗಿದೆ ಎಂಬ ಕಾರಣಕ್ಕೆ ಪತ್ನಿ ಮತ್ತು ಪುತ್ರನನ್ನು ಗೃಹ ಬಂಧನದಲ್ಲಿ ಇರಿಸಿದ್ದಕ್ಕೆ ನೊಂದುಕೊಂಡ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಕ್ಕೇರಿ ತಾಲೂಕು ಇಸ್ಲಾಂಪುರದಲ್ಲಿ ಬೆಳಕಿಗೆ ಬಂದಿದೆ.

ರಾಜು ಖೋತಗಿ ಆತ್ಮಹತ್ಯೆ ಮಾಡಿಕೊಂಡವರು. ಇಸ್ಲಾಂಪುರದ ಸಿದ್ಧವ್ವ ಎಂಬ ಮಹಿಳೆ ರಾಜು ಅವರ ಪತ್ನಿ ದುರ್ಗವ್ವ, ಪುತ್ರ ಬಸವರಾಜ ಅವರನ್ನು ಗೃಹ ಬಂಧನದಲ್ಲಿರಿಸಿದ್ದರು ಎಂಬ ಆರೋಪ ಕೇಳಿ ಬಂದಿದ್ದು ಗೃಹ ಬಂಧನದಲ್ಲಿದ್ದ ವೇಳೆ ನೀರು, ಅನ್ನ ನೀಡದೆ ಎರಡು ದಿನ ಶಿಕ್ಷೆ ನೀಡಿದ್ದಾರೆ ಎನ್ನಲಾಗಿದೆ. ಜೀವನ ನಿರ್ವಹಣೆಗೆ ಸಿದ್ದವ್ವ ಬಳಿ ತಿಂಗಳ ಹಿಂದೆ ರಾಜು ಅವರು ಒಂದೂವರೆ ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಇದಕ್ಕೆ ಪ್ರತಿ ತಿಂಗಳು ಶೇಕಡಾ 10 ರಷ್ಟು ಬಡ್ಡಿ ತುಂಬುತ್ತಿದ್ದರು. ಎರಡು ದಿನಗಳ ಹಿಂದೆ ಸಾಲ ಮರಳಿಸುವಂತೆ ಸಿದ್ದವ್ವ ತಿಳಿಸಿದ್ದಾಳೆ. ಆಗ ರಾಜು ಇನ್ನು ಒಂದೆರಡು ದಿನ ಕಾಲಾವಕಾಶ ಕೇಳಿದರು. ಇದಕ್ಕೆ ಒಪ್ಪದ ಸಿದ್ಧವ್ವ ಸಾಲ ಮರಳಿಸುವವರೆಗೆ ಪುತ್ರನನ್ನು ಮನೆಯಲ್ಲಿ ಬಿಟ್ಟು ಹೋಗುವಂತೆ ಹೇಳಿದ್ದಾಳೆ. ಸಂಜೆಯಾದರೂ ಪುತ್ರನನ್ನು ಬಿಡದೆ ಇದ್ದಾಗ ಸಿದ್ಧವ್ವಳ ಮನೆಗೆ ರಾಜು ಮತ್ತು ಅವರ ಪತ್ನಿ ದುರ್ಗವ್ವ ಹೋಗಿದ್ದಾರೆ. ಆಗ ಪುತ್ರ ಬಸವರಾಜನನ್ನು ಬಿಟ್ಟು ರಾಜು ಮತ್ತು ದುರ್ಗವ್ವರನ್ನು ಮನೆಯಲ್ಲಿ ಕೂರಿಸಲಾಗಿದೆ. ಮರುದಿನ ರಾಜುವನ್ನು ಬಿಟ್ಟು ಬಸವರಾಜು ಮತ್ತು ದುರ್ಗವ್ವರನ್ನು ಗೃಹಬಂಧನದಲ್ಲಿ ಇರಿಸಿದ್ದರು. ಇದರಿಂದ ಬೇಸರ ಪಟ್ಟ ರಾಜು ಮನೆಗೆ ಬಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬರಗಾಲದಿಂದ ಬೆಳೆದಿದ್ದ ಬೆಳೆಗಳು ಕೈಕೊಟ್ಟಿದ್ದರಿಂದ ರಾಜು ಅವರು ಸಿದ್ದವ್ವ ಬಳಿ ಸಾಲ ಪಡೆದಿದ್ದರು. ಆದರೆ ಸಿದ್ದವ್ವ ಈ ಕುಟುಂಬವನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ.

ಈ ಬಗ್ಗೆ ಪೊಲೀಸರು ಬೆಳಿಗ್ಗೆಯಿಂದ ಸಂಜೆವರೆಗೂ ದೂರು ದಾಖಲು ಮಾಡಿಕೊಳ್ಳಲಿಲ್ಲ ಎಂದು ದುರ್ಗವ್ವ ಮತ್ತು ಕುಟುಂಬಸ್ಥರು ವಿರುದ್ಧ ಇದೀಗ ಆರೋಪ ಮಾಡಿದ್ದಾರೆ.