
ಮೂಡಲಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ವರ್ಷದ ಖಾರಿಫ್ ಋತುವಿಗೆ ಅನ್ವಯವಾಗುವಂತೆ ಕೃಷಿ ಬಳಕೆಯ ರಸಗೊಬ್ಬರ ಸಬ್ಸಿಡಿಗೆ ರೂ 37,216 ಕೋಟಿ ನೀಡಲು ಅನುಮೋದನೆ ನೀಡಲಾಗಿದೆ. ಇದು ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ರಸಗೊಬ್ಬರಗಳ ಲಭ್ಯತೆ ಖಾತ್ರಿಪಡಿಸಲು ಕೇಂದ್ರ ಸರ್ಕಾರ ಯುಗಾದಿ ಹಬ್ಬಕ್ಕೆ ಅನ್ನದಾತನಿಗೆ ಖುಷಿ ಸುದ್ದಿ ನೀಡಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಸರ್ಕಾರದ ಕ್ರಮವನ್ನು ಶ್ಲಾಘಿಸಿದ್ದಾರೆ.
ಶನಿವಾರ ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು, ಮಣ್ಣಿಗೆ ಪೋಷಕಾಂಶವನ್ನು ಒದಗಿಸುವ ಸರ್ಕಾರದ ಪ್ರಯತ್ನಗಳ ಅಂಗವಾಗಿ, ಪಾಸ್ಪೆಟಿಕ್ ಮತ್ತು ಪೊಟ್ಯಾಷಿಕ್ ರಸಗೊಬ್ಬರಗಳಿಗೆ ಈ ವರ್ಷದ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರ ವರೆಗಿನ ಖಾರಿಫ್ ಋತುವಿಗೆ ಪೋಷಕಾಂಶ ಆಧಾರಿತ ಸಬ್ಸಿಡಿ ದರ ಒದಗಿಸಲು ಸರ್ಕಾರ ನಿರ್ಧರಿಸಿದೆ. ಜಾಗತಿಕ ಮಟ್ಟದಲ್ಲಿ ಬೆಲೆಗಳು ಏರುಪೇರು ಉಂಟಾದರೂ ಅವುಗಳ ಬೆಲೆಗಳನ್ನು ಸ್ಥಿರವಾಗಿಸಲು ಹಾಗೂ ರೈತರಿಗೆ ಸಮಂಜಸ ದರದಲ್ಲಿ ಮಣ್ಣಿನ ಪೋಷಕಾಂಶ ಸಿಗುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರದ ಈ ತೀರ್ಮಾನ ಕೈಗೊಂಡಿದೆ. ಇದು ಅನ್ನದಾತನ ಬಾಳಿನಲ್ಲಿ ಸಮಗ್ರ ಬದಲಾವಣೆ ತರುವತ್ತ ಹೆಜ್ಜೆ ಹಾಕಿದೆ ಎಂದರು.
ಈ ಐತಿಹಾಸಿಕ ನಿರ್ಧಾರ ಕೈಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಜಿ ಹಾಗೂ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಜಗತ್ ಪ್ರಕಾಶ್ ನಡ್ಡಾ ಅವರಿಗೆ ಯುಗಾದಿ ಉಡುಗೊರೆ ನೀಡಿದಕ್ಕಾಗಿ ನಾಡಿನ ರೈತರ ಪರವಾಗಿ ಧನ್ಯವಾದಗಳನ್ನು ಹೇಳುವುದಾಗಿ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.