ಬೆಳಗಾವಿ :
‘ಇಂದಿನ ಯುವ ವಿದ್ಯಾರ್ಥಿಗಳಿಗೆ ಭಾರತೀಯ ಸಂವಿಧಾನ ಹಾಗೂ ಕಾನೂನಿನ ಅರಿವು ಮೂಡಿಸುವುದು ಅಗತ್ಯವಾಗಿದೆ. ಪ್ರತಿಯೊಬ್ಬ ಭಾರತೀಯನೂ ಕಾನೂನು ತಿಳಿಯುವುದು ಅಷ್ಟೇ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಮಗ್ರ ಚಿತ್ರ ಹಾಗೂ ಬರೆಹದ ಮೂಲಕ ಭಾರತೀಯ ಕಾನೂನು ಶಾಸ್ತ್ರವನ್ನು ಕಟ್ಟಿಕೊಟ್ಟಿರುವ ಬಿ.ವಿ.ಬೆಲ್ಲದ ಕಾನೂನು ವಿದ್ಯಾರ್ಥಿಗಳ ಈ ಕಾರ್ಯ ಮೌಲಿಕವೆನಿಸಿದೆ’ ಎಂದು ಹಿರಿಯ ನ್ಯಾಯವಾದಿ ಎಸ್.ಬಿ.ಶೇಖ್ ಹೇಳಿದರು.

ಅವರು ಕೆ.ಎಲ್.ಇ. ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯವು ಬುಧವಾರ 21 ರಂದು ಬೆಲ್ಲದ ಕಾನೂನು ಕಾಲೇಜಿನ ಸೆಮಿನಾರ್ ಹಾಲ್‍ನಲ್ಲಿ ಆಯೋಜಿಸಿದ್ದ “ಅಧಿನಿಯಮ ದರ್ಶನ್ – ನ್ಯಾಯ ಅನಾವರಣ: ಕಾನೂನು ಪರಿಶೋಧನೆ” ಕಾನೂನು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

‘ಈ ಪ್ರದರ್ಶನದಲ್ಲಿ ಭಾರತದಲ್ಲಿ ಜಿಲ್ಲಾ ನ್ಯಾಯಾಲಯ, ಹೈಕೋರ್ಟ್, ಸುಪ್ರೀಂ ಕೋರ್ಟ್ ಪರಿಕಲ್ಪನೆಗಳನ್ನು ಚಿತ್ರವಾಗಿ ತಿಳಿಸಿಕೊಡಲಾಗಿದೆ. ಸಂವಿಧಾನ ಹಲವಾರು ಅಧಿನಿಯಮಗಳು, ಮಹತ್ವದ ಐತಿಹಾಸಿಕ ತೀರ್ಪುಗಳು, ನ್ಯಾಯಾಧೀಶರ ಕುರಿತು ಸಮಗ್ರ ದರ್ಶನವನ್ನು ಬಿಂಬಿಸುವ ಕಾನೂನು ಪ್ರದರ್ಶನವು ಆಕರ್ಷಕವಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಆರ್.ಬಿ.ಬೆಲ್ಲದ ಮಾತನಾಡಿ ‘ಭಾರತೀಯ ಕಾನೂನು ಶಾಸ್ತ್ರ ಬೆಳೆದು ಬಂದ ದಾರಿಯನ್ನು ಹಲವಾರು ನೆಲೆಗಳಲ್ಲಿ ಅತ್ಯಂತ ಆಕರ್ಷಕವಾಗಿ ಈ ಪ್ರದರ್ಶನದಲ್ಲಿ ಸಂಯೋಜಿಸಲಾಗಿದೆ. ವಿದ್ಯಾರ್ಥಿಗಳ ರಚನಾತ್ಮಕ ಹಾಗೂ ಕ್ರಿಯಾತ್ಮಕ ದೃಷ್ಟಿಕೋನಕ್ಕೆ ಹಿಡಿದ ಕನ್ನಡಿಯಾಗಿದೆ. ಯುವ ವಿದ್ಯಾರ್ಥಿಗಳು ಕಾನೂನು ಶಾಸ್ತ್ರವನ್ನು ಅರಿಯುವಲ್ಲಿ ಈ ಪ್ರದರ್ಶನ ಸಹಕಾರಿಯಾಗಿದೆ’ ಎಂದು ತಿಳಿಸಿದರು.

ಪ್ರಾಚಾರ್ಯ ಡಾ.ಬಿ.ಜಯಸಿಂಹ ಅವರು ಮಾತನಾಡಿ ‘ಜನತೆಗೆ ಹಾಗೂ ಯುವ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಮೂಡಿಸುವುದು ನಮ್ಮ ಗುರಿಯಾಗಿತ್ತು. ಅಂತೆಯೆ ಭಾರತೀಯ ಸಂವಿಧಾನದ ರಚನೆ, ಅದರ ವಿನ್ಯಾಸವನ್ನು, ದೇಶದ ಮಹತ್ವದ ಪ್ರಕರಣಗಳ ವಿವರಣೆ ಸಹಿತ ಮಾದರಿಗಳನ್ನು ಪ್ರಸ್ತುತ ಪಡಿಸಲಾಗಿದೆ. ಕಳೆದ ಆರು ತಿಂಗಳವರೆಗೆ ವಿದ್ಯಾರ್ಥಿಗಳು ದಣಿವರಿಯದೆ ಪ್ರದರ್ಶನಕ್ಕಾಗಿ ಸಿದ್ಧ ಮಾಡಿಕೊಂಡು ರೂಪಿಸಿದ್ದಾರೆ. ನಗರದ ಯುವ ವಿದ್ಯಾರ್ಥಿಗಳು ಪ್ರದರ್ಶನದ ಲಾಭ ಪಡೆದುಕೊಳ್ಳಬೇಕೆಂದು’ ಹೇಳಿದರು.

ಪ್ರದರ್ಶನದ ಸಂದರ್ಭದಲ್ಲಿ ಭಾರತೀಯ ಸುಪ್ರೀಂ ಕೋರ್ಟ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿರುವ ಹೈಕೋರ್ಟ್ ಗಳ ಮಾದರಿಗಳು, ಭಾರತದ ಐತಿಹಾಸಿಕ ಪ್ರಕರಣಗಳು, ದೇಶದಲ್ಲಿ ಆರ್ಥಿಕ ಮಸೂದೆಯನ್ನು ಅಂಗೀಕರಿಸುವ ಪ್ರಕ್ರಿಯೆಗಳು, ಮಹಿಳೆಯರ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಅಂಶಗಳು, ರಾಷ್ಟ್ರೀಯ ತುರ್ತು ಪರಿಸ್ಥಿತಿ ಮಸೂದೆ 352, ರಾಮಜನ್ಮಭೂಮಿ ಪ್ರಕರಣ, ಕೇಶವಾನಂದ ಭಾರತಿ ಪ್ರಕರಣ, ಭಾರತ ಉಚ್ಛನ್ಯಾಯಾಲಯದ ವ್ಯಾಪ್ತಿ, ಸಂವಿಧಾನದ ಪೂರ್ವ ಪೀಠಿಕೆ ವಿಶ್ಲೇಷಣೆ, ಜಿಲ್ಲಾ ನ್ಯಾಯಾಲಯ-ಉಚ್ಛನ್ಯಾಯಾಲಯ-ಸರ್ವೋಚ್ಛ ನ್ಯಾಯಾಲಯಗಳ ಮಾದರಿಗಳು, ಸ್ವಾತಂತ್ರ್ಯ ಭಾರತದ ಅನೇಕ ಪ್ರಖ್ಯಾತ ನ್ಯಾಯಾಧೀಶರು ಮತ್ತು ಮಹಿಳಾ ನ್ಯಾಯಾಧೀಶರ ಸಮಗ್ರ ವಿವರಗಳು, ಮಾಕ್ ಪಾರ್ಲಿಮೆಂಟ್, ಪ್ರಸ್ತುತ ಕಾನೂನು ಕ್ಷೇತ್ರದಲ್ಲಿನ ಬದಲಾವಣೆಗಳು ಕುರಿತು ಅತ್ಯಂತ ವ್ಯವಸ್ಥಿತವಾಗಿ ಪ್ರದರ್ಶಿಸಲಾಗಿತ್ತು.

ಸಹಾಯಕ ಪ್ರಾಧ್ಯಾಪಕಿ ರಾಜಶ್ರೀ ಪಾಟೀಲ ಪ್ರದರ್ಶನವನ್ನು ಸಂಯೋಜಿಸಿದ್ದರು.

ಪ್ರಾಧ್ಯಾಪಕರಾದ ಡಾ.ಉಮಾ ಹಿರೇಮಠ, ಡಾ.ಜ್ಯೋತಿ ಹಿರೇಮಠ, ಪ್ರೊ.ಸವಿತಾ ಪಟ್ಟಣಶೆಟ್ಟಿ, ಪ್ರೊ.ಎಂ.ಎಸ್.ಅಲ್ಲಪ್ಪನವರ, ಡಾ.ಎಸ್.ಸಿ.ಪಾಲಕೊಂಡ, ಡಾ.ಅಶ್ವಿನಿ ಹಿರೇಮಠ, ಡಾ. ಸುಪ್ರಿಯಾ ಸ್ವಾಮಿ, ಪ್ರೊ.ಸಂಜೀವ ಕೋಶಾವರ ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಕಾನೂನು ವಿದ್ಯಾರ್ಥಿಗಳು ಬಹುಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ಪ್ರದರ್ಶನವು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಜರುಗಿತು.

ಇದೇ ಸಂದರ್ಭದಲ್ಲಿ ಇಂದು 95ನೇ ವಯಸ್ಸಿನಲ್ಲಿ ನಿಧನ ಹೊಂದಿದ ಭಾರತದ ಸುಪ್ರೀಂಕೋರ್ಟ್ ಹಿರಿಯ ನ್ಯಾಯವಾದಿ, ನ್ಯಾಯಶಾಸ್ತ್ರಜ್ಞ ಹಾಗೂ ಪದ್ಮವಿಭೂಷಣ ಪಾಲಿ ನಾರಿಮನ್ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.