ಲಖನೌ: ವಾರಾಣಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ವ್ಯಾಸ ತೆಹ್ಖಾನಾದಲ್ಲಿ ಹಿಂದೂಗಳು ಪ್ರಾರ್ಥನೆ ಮುಂದುವರಿಸಲು ಅಲಹಾಬಾದ್ ಹೈಕೋರ್ಟ್ ಅವಕಾಶ ನೀಡಿದ್ದು, ಹಿಂದೂಗಳಿಗೆ ಪ್ರಕರಣದಲ್ಲಿ ಮೇಲುಗೈ ಆಗಿದೆ. ವ್ಯಾಸ ತೆಹ್ಖಾನಾದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ಕುರಿತು ಸೋಮವಾರ ಅಲಹಾಬಾದ್‌ ಹೈಕೋರ್ಟ್‌ ತನ್ನ ತೀರ್ಪು ಪ್ರಕಟಿಸಿದೆ.

31 ವರ್ಷಗಳ ನಂತರ ಇದೇ ತಿಂಗಳ ಆರಂಭದಲ್ಲಿ ಜ್ಞಾನವಾಪಿ ಮಸೀದಿ ಆವರಣದಲ್ಲಿ ಪ್ರಥಮ ಬಾರಿಗೆ ಪೂಜೆ ನೆರವೇರಿಸಲಾಗಿತ್ತು. ಮಸೀದಿಯು ನಾಲ್ಕು ʼತೆಹ್ಖಾನಾಗಳು’ ಅಥವಾ ನೆಲಮಾಳಿಗೆಗಳನ್ನು ಹೊಂದಿದೆ. ವಾರಣಾಸಿ ಜಿಲ್ಲಾ ನ್ಯಾಯಾಧೀಶರು ಜನವರಿ 31ರ ಆದೇಶದಲ್ಲಿ ಜ್ಞಾನವಾಪಿ ಮಸೀದಿಯ ದಕ್ಷಿಣ ಭಾಗದಲ್ಲಿರುವ ನೆಲಮಾಳಿಗೆಯಲ್ಲಿ ಪೂಜೆಗೆ ಅನುಮತಿ ನೀಡಿದ್ದರು. ನಂತರ, ಫಿರ್ಯಾದಿ ಶೈಲೇಂದ್ರ ಕುಮಾರ್ ಪಾಠಕ್ ವ್ಯಾಸ್ ಮತ್ತು ಶ್ರೀಗಳು ಸೂಚಿಸಿದ ಅರ್ಚಕರಿಂದ ಏಳು ದಿನಗಳಲ್ಲಿ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ ಮೂಲಕ ವಿಗ್ರಹಗಳ ಪೂಜೆಗೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ ವಿರುದ್ಧ ಶೈಲೇಂದ್ರ ಕುಮಾರ್ ಪಾಠಕ್ ವ್ಯಾಸ್ ಅವರು ಸಲ್ಲಿಸಿದ ಅರ್ಜಿಯನ್ನು ಅನುಸರಿಸಿ ನ್ಯಾಯಾಲಯದ ಆದೇಶ ನೀಡಿತ್ತು. ಮೊಕದ್ದಮೆಯ ಪ್ರಕಾರ, ಅರ್ಚಕ ಸೋಮನಾಥ ವ್ಯಾಸ್ ಅವರು 1993ರವರೆಗೆ ಅಧಿಕಾರಿಗಳು ನೆಲಮಾಳಿಗೆಯನ್ನು ಮುಚ್ಚುವವರೆಗೂ ಅಲ್ಲಿ ಪ್ರಾರ್ಥನೆಗಳನ್ನು ಮಾಡುತ್ತಿದ್ದರು. ಶೈಲೇಂದ್ರ ಕುಮಾರ್ ಪಾಠಕ್ ಅವರು ಸೋಮನಾಥ ವ್ಯಾಸ್ ಅವರ ಮಗಳ ಮಗ.

ವಾರಣಾಸಿ ನ್ಯಾಯಾಲಯದ ಜನವರಿ 31ರ ಆದೇಶವನ್ನು ತಡೆಹಿಡಿಯಲು ಕೋರಿ ಮುಸ್ಲಿಮರು ಸಲ್ಲಿಸಿದ್ದ ಮನವಿಯನ್ನು ಫೆಬ್ರುವರಿ 2ರಂದು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿತ್ತು. ಹಿಂದೂ ಕಡೆಯವರು ಜ್ಞಾನವಾಪಿ ಮಸೀದಿಯ ದಕ್ಷಿಣದ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿತ್ತು. ಜನವರಿ 31ರ ಆದೇಶವನ್ನು ಪ್ರಶ್ನಿಸಲು ಮಸೀದಿ ಸಮಿತಿಯು ತನ್ನ ಮನವಿಯಲ್ಲಿ ತಿದ್ದುಪಡಿ ಮಾಡಲು ಫೆಬ್ರವರಿ 6ರವರೆಗೆ ಕಾಲಾವಕಾಶವನ್ನು ಹೈಕೋರ್ಟ್ ನೀಡಿತ್ತು. ನಂತರ ಫೆಬ್ರುವರಿ 12ರಂದು ನ್ಯಾಯಾಲಯವು ಅಂಜುಮನ್ ಇಂತಜಾಮಿಯಾ ಮಸೀದಿ ಸಮಿತಿಯು ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆ ನಡೆಸಿತ್ತು.

ಮಸೀದಿ ನಿರ್ಮಾಣಕ್ಕೂ ಮೊದಲುಇಲ್ಲಿ ದೊಡ್ಡ ಹಿಂದೂ ದೇವಾಲಯ ಅಸ್ತಿತ್ವದಲ್ಲಿತ್ತು ಎಂದು ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ಐ) ವರದಿ ಹೇಳಿದ ನಂತರ ಮಸೀದಿಯ ಮುಚ್ಚಿದ ಭಾಗದಲ್ಲಿ ಉತ್ಖನನ ಮತ್ತು ವೈಜ್ಞಾನಿಕ ಸಮೀಕ್ಷೆ ಕೋರಿ ನಾಲ್ವರು ಹಿಂದೂ ಮಹಿಳೆಯರು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಮಸೀದಿ ಬಳಿ ವಿವಾದಿತ ರಚನೆಯಿದೆ. ಅದನ್ನು ಹಿಂದೂಗಳು ಶಿವಲಿಂಗ ಎಂದು ಹೇಳುತ್ತಿದ್ದಾರೆ. ಆದರೆ, ಇದು ಪ್ರಾರ್ಥನಾ ಕೊಳದ ಭಾಗವಾಗಿದೆ ಎಂದು ಮುಸ್ಲಿಂ ಸಮುದಾಯದವರು ಹೇಳುತ್ತಿದ್ದಾರೆ.

ವಾಪಿ ಎಂದರೆ ಸಂಸ್ಕೃತದಲ್ಲಿ ಬಾವಿ. ಜ್ಞಾನವಾಪಿ ಎಂದರೆ ಜ್ಞಾನದ ಬಾವಿ ಎಂಬ ಅಕ್ಷರಾರ್ಥ. ಸಾಮಾನ್ಯವಾಗಿ ಶಿವ ದೇವಾಲಯಗಳಲ್ಲಿ ಒಂದು ಬಾವಿ ಕಡ್ಡಾಯವಾಗಿ ಇರುತ್ತದೆ. ಶಿವಲಿಂಗಕ್ಕೆ ನಿತ್ಯ ಅಭಿಷೇಕ ಮಾಡಲು ಈ ಬಾವಿಯ ನೀರನ್ನು ಬಳಸಲಾಗುತ್ತದೆ. ಸದ್ಯ ಈ ಬಾವಿಯನ್ನು ಮಂದಿರ ಹಾಗೂ ಮಸೀದಿಗಳು ಹಂಚಿಕೊಂಡಿವೆ. ಹಿಂದೆ ಮುಸ್ಲಿಂ ರಾಜರ ದಾಳಿಯಾದಾಗ ಕಾಶಿ ವಿಶ್ವನಾಥ ದೇವಾಲಯದ ಅರ್ಚಕರೊಬ್ಬರು ಶಿವಲಿಂಗ ಅಪವಿತ್ರವಾಗದಂತೆ ಅದನ್ನು ತೆಗೆದುಕೊಂಡು ಬಂದು ಈ ಬಾವಿಗೆ ಎಸೆದು ರಕ್ಷಿಸಿದರು ಎಂದು ಕತೆಯಿದೆ.