Join The Telegram | Join The WhatsApp |
ಇದು ಕರ್ನಾಟಕದ ಮೊದಲ ಮಹಿಳಾ ಐ.ಪಿ.ಎಸ್ ಅಧಿಕಾರಿ, ತಮ್ಮ ಸೇವಾ ಅವಧಿಯ ಎರಡರಷ್ಟು ಬಾರಿ ವರ್ಗಾವಣೆಗೊಂಡ ದಿಟ್ಟ ಅಧಿಕಾರಿಯ ಯಶಸ್ವಿ ಪಯಣದ ಹೆಜ್ಜೆಗುರುತು…
ಹೌದು ಇಂದು ನಾವು ಹೇಳಹೊರಟಿರುವುದು ನೇರ ಮತ್ತು ನಿಷ್ಠುರ ಸ್ವಭಾವದಿಂದ ಹೆಸರು ಮಾಡಿರುವ ಐಪಿಎಸ್ ಅಧಿಕಾರಿ ತಮ್ಮ ಇಪ್ಪತ್ತು ವರ್ಷಗಳ ಸೇವಾವಧಿಯಲ್ಲಿ 40ಕ್ಕೂ ಹೆಚ್ಚು ಬಾರಿ ವರ್ಗಾವಣೆಯಗೊಂಡ ಖಡಕ್ ಆಫೀಸರ್ ಡಿ.ರೂಪ ರವರ ಬಗ್ಗೆ…
ರೂಪಾ ದಿವಾಕರ್ ಮೌದ್ಗೀಲ್ ,ಕರ್ನಾಟಕದ ದಾವಣಗೆರೆಯಿಂದ ಬಂದ ಒಬ್ಬ ಭಾರತೀಯ ಪೊಲೀಸ್ ಸೇವಾ (ಐ.ಪಿ.ಎಸ್) ಅಧಿಕಾರಿಯಾಗಿದ್ದಾರೆ. ಇವರು ಭಾರತೀಯ ಪೊಲೀಸ್ ಸೇವಾ ಐ.ಪಿ.ಎಸ್ ಅಧಿಕಾರಿಯಾದ ಕರ್ನಾಟಕದ ಪ್ರಥಮ ಮಹಿಳೆಯಾಗಿದ್ದಾರೆ.
ರಾಜಕೀಯ ವ್ಯಕ್ತಿಗಳ ಮತ್ತು ಹಿರಿಯ ಐಪಿಎಸ್ ಅಧಿಕಾರಿಗಳ ಪ್ರಕರಣಗಳನ್ನು ಕೈಗೆತ್ತಿಕೊಳ್ಳುವುದರಲ್ಲಿ ನಿಸ್ಸೀಮರು ಇವರು,ಇದರ ಪರಿಣಾಮವಾಗಿ ಇವರ ವೃತ್ತಿಯಲ್ಲಿ 40 ಕ್ಕೂ ಅಧಿಕ ಬಾರಿ ವರ್ಗಾವಣೆಗೊಂಡಿದ್ದಾರೆ.
ಇವರು ಕರ್ನಾಟಕ ಮತ್ತು ಬೆಂಗಳೂರಿನ ಎರಡನೇ ಅತ್ಯುನ್ನತ ಸ್ಥಾನವಾದ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ (ಐಜಿಪಿ) ಅಧಿಕಾರಿಯಾಗಿದ್ದರು,
ಹುಟ್ಟು ಮತ್ತು ಹಿನ್ನೆಲೆ :
ಡಿ. ರೂಪಾ ಹುಟ್ಟಿದ್ದು ಕರ್ನಾಟಕದ ದಾವಣಗೆರೆಯಲ್ಲಿ, ಅವರ ತಂದೆ ಜೆ. ಎಚ್. ದಿವಾಕರ್, ಒಬ್ಬ ನಿವೃತ್ತ ಇಂಜಿನಿಯರ್. ತಾಯಿ ಹೇಮಾವತಿ ಅಂಚೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ತಂಗಿ ರೋಹಿಣಿ ಆದಾಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶಿಕ್ಷಣ:
ಅವರು ತಮ್ಮ ಬಿ.ಎ. ಪದವಿಯನ್ನು ಕರ್ನಾಟಕದ ಕುವೆಂಪು ವಿಶ್ವವಿದ್ಯಾಲಯದಿಂದ ಸ್ವರ್ಣ ಪದಕದೊಂದಿಗೆ ಮುಗಿಸಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಮನಃಶಾಸ್ರ್ತ ವಿಭಾಗದಲ್ಲಿ ಎಂ.ಎ. ಪದವಿಯನ್ನು ಪಡೆದಿದ್ದರು.
ಸಂಸಾರ ನೌಕೆ :
2013 ರಲ್ಲಿ ಅವರು ಮುನೀಶ್ ಮೌದ್ಗೀಲ್ ಅವರನ್ನು ಮದುವೆಯಾದರು. ಮುನೀಶ್ ಐಐಟಿ ಮುಂಬೈನಲ್ಲಿ ಓದಿದ್ದವರು. ಅವರು ಐ.ಎ.ಎಸ್.ನಲ್ಲಿ 7 ನೇ ಶ್ರೇಣಿ ಪಡೆದಿದ್ದರು. ಪ್ರಸ್ತುತ, ಐ.ಎ.ಎಸ್. ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಬ್ಬರಿಗೆ ಅನಘಾ ಮತ್ತು ರೊಶಿಲ್ ಎಂಬ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
ಕಲೆ ಮತ್ತು ಸಂಗೀತದಲ್ಲಿ ಆಸಕ್ತಿ:
ಡಿ. ರೂಪಾ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ ನೃತ್ಯಗಾರ್ತಿಯಾಗಿಯೂ ತರಬೇತಿ ಪಡೆದಿದ್ದಾರೆ.
ವರ್ಷಗಳ ಹಿಂದೆ ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಹಿಳೆಯರಲ್ಲಿ ಸ್ಪೂರ್ತಿ ತುಂಬುವಂತಹ ಮ್ಯೂಸಿಕ್ ವೀಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ.
ಪ್ರಶಸ್ತಿ ಮತ್ತು ಗೌರವ :
ಡಿ. ರೂಪಾ ಅವರು 2016 ಮತ್ತು 2017 ರಲ್ಲಿ ಎರಡು ಬಾರಿ ರಾಷ್ಟ್ರಪತಿ ಪೊಲೀಸ್ ಪದಕ ವನ್ನು ಪಡೆದಿರುತ್ತಾರೆ.
2018 ರಲ್ಲಿ ಜಿ-ಫೈಲ್ಸ್ ಗವರ್ನೆನ್ಸ್ ಪ್ರಶಸ್ತಿ ಲಭಿಸಿತ್ತು.
ವೃತ್ತಿಬದುಕು:
ಡಿ. ರೂಪಾ ಅವರು 2000 ದಲ್ಲಿ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ಭಾರತದಲ್ಲಿ 43 ನೇ ಶ್ರೇಣಿಯೊಂದಿಗೆ ಉತ್ತೀರ್ಣರಾದರು. ಹೈದರಾಬಾದಿನ, ಸರದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆದರು. ಅವರು ತರಬೇತಿ ಗುಂಪಿನಲ್ಲಿಯೇ 5 ನೇ ಶ್ರೇಣಿಯೊಂದಿಗೆ ಉತ್ತೀರ್ಣರಾಗಿ ಕರ್ನಾಟಕ ಕೆಡೇರ್ ಆದರು. ತರಬೇತಿಯ ನಂತರ ಉತ್ತರ ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ಪೊಲೀಸ್ ಸುಪರಿಂಟೆಂಡೆಂಟ್ (ಎಸ್.ಪಿ) ಆಗಿ ನೇಮಕಗೊಂಡರು. ಬೆಂಗಳೂರಿಗೆ ವರ್ಗಾವಣೆಯಾಗುವ ಮೊದಲು ಅವರು ಬೀದರ್ ನ ಗದಗ ಜಿಲ್ಲೆಯಲ್ಲಿ ಎಸ್.ಪಿ.ಯಾಗಿ, ಕೊನೆಗೆ ಯಾದಗಿರಿಯಲ್ಲಿ ಸೇವೆ ಸಲ್ಲಿಸಿದ್ದರು.
2007 ರಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಮತ್ತು ಪ್ರಸ್ತುತ ಕೇಂದ್ರ ಸಚಿವೆಯಾಗಿರುವ ಉಮಾಭಾರತಿಯವರನ್ನು, ಹುಬ್ಬಳ್ಳಿಯ ಕೋರ್ಟ್ ಕೇಸಿನ ವಿಚಾರವಾಗಿ ಬಂಧಿಸುವ ಅಧಿಕಾರವನ್ನು ನೀಡಲಾಗಿತ್ತು. 2008 ರಲ್ಲಿ ಮಾಜಿ ಸಚಿವರಾದ ಯಾವಗಲ್ ರನ್ನು ಬಂಧಿಸಿದ್ದರು. ಇದೇ ಕೇಸ್ ವಿಚಾರವಾಗಿ ಅವರ ಜೊತೆ ಸಹದ್ಯೋಗಿಯಾಗಿದ್ದ ಡಿ.ಎಸ್.ಪಿ ಮಸೂತಿಯವರನ್ನು ಯಾವಗಲ್ ಅವರಿಗೆ ರಕ್ಷಣೆ ನೀಡುತ್ತಿದ್ದಾರೆಂಬ ಕಾರಣಕ್ಕೆ ಅಮಾನತುಗೊಳಿಸಲಾಗಿತ್ತು.
2013 ರಲ್ಲಿ ಸೈಬರ್-ಕ್ರೈಮ್ ಪೊಲೀಸ್ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರಿಂದಾಗಿ ಈ ಕ್ಷೇತ್ರದಲ್ಲಿ ಕೆಲಸ ಮಾಡಿದ ಭಾರತದ ಪ್ರಥಮ ಮಹಿಳಾ ಪೊಲೀಸ್ ಅಧಿಕಾರಿ ಎನಿಸಿಕೊಂಡರು.
ಬೆಂಗಳೂರಿನಲ್ಲಿ, ಸಿಟಿ ಆರ್ಮ್ಡ್ ರಿಸರ್ವ್ ವಿಭಾಗದ ಡಿ.ಎಸ್.ಪಿ. ಆಗಿದ್ದಾಗ, 21 ರಾಜಕೀಯ ವ್ಯಕ್ತಿಗಳ 216 ಮಂದಿ ಅನಧಿಕೃತ ಬಂದೂಕುಧಾರಿ (ಗನ್ ಮೆನ್) ಗಳನ್ನು ಹಿಂಪಡೆದುಕೊಂಡರು. ಅಷ್ಟು ಮಾತ್ರವಲ್ಲದೇ, ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳ ಬಳಿಯಿದ್ದ ಅನಧಿಕೃತ 8 ಹೊಸ ಎಸ್.ಯು.ವಿ. ಗಳನ್ನು ವಿಭಾಗಕ್ಕೆ ಹಿಂತೆಗೆದುಕೊಂಡರು.
2017 ರ ಜುಲೈ, ಕಾರಾಗೃಹ ಇಲಾಖೆಯ ಮಹಾನಿರ್ದೇಶಕರಾಗಿ ನೇಮಕಗೊಂಡರು. ಐಐಎಡಿಎಂಕೆ ದ ಕಾರ್ಯದರ್ಶಿ, ವಿ.ಕೆ. ಶಶಿಕಲಾ ಅವರು ಪರಪ್ಪನ ಅಗ್ರಹಾರದಲ್ಲಿ ವಿಶೇಷ ಸವಲತ್ತುಗಳನ್ನು ಹೊಂದುತ್ತಿದ್ದಾರೆ ಎಂಬ ಮಾಹಿತಿಯನ್ನು ಡಿ. ರೂಪಾ ಅವರು ಬಯಲಿಗೆಳೆದರು.
ಮಾತ್ರವಲ್ಲದೆ, ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಕಾರಾಗೃಹಗಳ ಮಹಾನೀರೀಕ್ಷಕ ಸತ್ಯನಾರಾಯಣರಾವ್ ಅವರಿಗೆ ಒಪ್ಪಿಸಿದ ವರದಿಯಲ್ಲಿ, ಶಶಿಕಲಾ ಅವರಿಗೆ ಜೈಲಿನ ಒಳಗೆ ವಿಶೇಷ ವ್ಯವಸ್ಥೆಗಳನ್ನು ನೀಡಿದ್ದು ಮಾತ್ರವಲ್ಲದೆ, ಅಡುಗೆ ಮನೆಯ ವ್ಯವಸ್ಥೆ ಮತ್ತು ಆರಾಮ ಸಂದರ್ಶನ ಸಮಯವನ್ನು 2 ಕೋಟಿ ಲಂಚ ತೆಗೆದುಕೊಂಡು ಜೈಲು ಅಧಿಕಾರಿಗಳು ಅವ್ಯವಹಾರ ಮಾಡಿದ್ದನ್ನು ಬಯಲಿಗೆಳೆದಿದ್ದರು.
ಅಧಿಕಾರ ಸ್ವೀಕರಿಸಿದ ಒಂದು ತಿಂಗಳ ಒಳಗೆ ರೂಪಾ ಅವರನ್ನು ರಸ್ತೆ ಸುರಕ್ಷತೆ ಆಯುಕ್ತರ ಹುದ್ದೆಗೆ ಎತ್ತಂಗಡಿ ಮಾಡಲಾಗಿತ್ತು,
ನಂತರ ಅಗ್ನಿಶಾಮಕ ಇಲಾಖೆಯಲ್ಲಿ ಕೆಲ ಕಾಲ ಇದ್ದು, ರೈಲ್ವೆ ಪೊಲೀಸ್ ಐಜಿಪಿ ಆಗಿದ್ದರು.
ಡಿ. ರೂಪರವರು 2020 ಆಗಸ್ಟ್ ನಲ್ಲಿ ಗೃಹ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸುತ್ತಾರೆ, ಈ ಹುದ್ದೆಗೆ ನೇಮಕವಾದ ಮೊದಲ ಮಹಿಳಾ ಅಧಿಕಾರಿ ಆಗಿದ್ದರು. ಆದರೆ, ಸೇಫ್ ಸಿಟಿ ಯೋಜನೆ ಟೆಂಡರ್ ವಿಚಾರದಲ್ಲಿ ಹೆಚ್ಚುವರಿ ಆಯುಕ್ತ ಹೇಮಂತ್ ನಿಂಬಾಳ್ಕರ್ ಮೇಲೆ ಆರೋಪ ಮಾಡುತ್ತಾರೆ, ಇದಾದ ಕೇವಲ ಐದೇ ತಿಂಗಳಲ್ಲಿ ಡಿ .ರೂಪರವರು ವರ್ಗಾವಣೆಗೊಂಡಿದ್ದರು.
ನಂತರ ವರ್ಗಾವಣೆ ಆಗಿದ್ದು ಇವರು ಕರಕುಶಲ ನಿಗಮಕ್ಕೆ ವ್ಯವಸ್ಥಾಪಕ ನಿರ್ದೇಶಕರಾಗಿ,ವಿಶೇಷವೆಂದರೆ ಇಲ್ಲಿಯೂ ಕೂಡ ಅಕ್ರಮದ ವಾಸನೆ ರೂಪರವರಿಗೆ ಬಡಿಯುತ್ತದೆ.
ಕರಕುಶಲ ನಿಗಮದ ಅಧ್ಯಕ್ಷರಾದ ಬೇಳೂರು ರಾಘವೇಂದ್ರ ಶೆಟ್ಟಿಯವರು ತಮಗಿರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ನಿಗಮದಲ್ಲಿ ಅಕ್ರಮವೆಸಗಿದ್ದಾರೆ ಎಂದು ನೇರ ಆರೋಪವನ್ನು ಮಾಡಿದ್ದರು.ಇವರು ಎಲ್ಲೇ ಹೋದರು ಅಕ್ರಮ ನಡೆದುದ್ದನ್ನು ನೇರವಾಗಿ ಖಂಡಿಸುತ್ತಾರೆ, ಇದೆ ಇವರ ಜಾಯಮಾನ.
”ವರ್ಗಾವಣೆಯು ಸರಕಾರದ ಸೇವೆಯ ಭಾಗವೆಂದು ನಂಬಿದ್ದೇನೆ. ನನ್ನ ಸೇವಾವಯ ವರ್ಷಗಳ ದುಪ್ಪಟ್ಟು ಬಾರಿ ವರ್ಗಾವಣೆಗೊಂಡಿದ್ದೇನೆ. ಇಲಾಖೆಗಳಲ್ಲಿನ ನಿಯಮ ಉಲ್ಲಂಘನೆಗಳ ಕುರಿತು ಕೆಂಪು ಬಾವುಟ ಹಾರಿಸುವುದರಿಂದ ಅಧಿಕಾರಿಗಳ ನಡುವೆ ಬಿರುಕು ಮತ್ತು ವೈಯಕ್ತಿಕವಾಗಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಅದು ನನಗೂ ಗೊತ್ತಿದೆ. ಈ ವಿಚಾರದಲ್ಲಿ ರಾಜಿಯಾಗದೆ ನನ್ನ ಕೆಲಸವನ್ನು ಮುಂದುವರೆಸುತ್ತೇನೆ. ಹುದ್ದೆ ಯಾವುದಾದರೂ ತಲೆಕೆಡಿಸಿಕೊಳ್ಳುವುದಿಲ್ಲ” ಎಂದು ಡಿ ರೂಪಾ ರವರು ನೇರವಾಗಿ ಪ್ರತಿಕ್ರಿಯಿಸುತ್ತಾರೆ.
ಸಾಮಾನ್ಯವಾಗಿ ಐಪಿಎಸ್ ಅಧಿಕಾರಿಗಳು ಒಂದೊಂದು ಹುದ್ದೆಯಲ್ಲಿ ಕನಿಷ್ಠ ಒಂದು ವರ್ಷ ಕಾರ್ಯನಿರ್ವಹಿಸುವುದು ವಾಡಿಕೆ.
ನೇರ ನುಡಿ, ನಿಷ್ಠುರದ ಸ್ವಭಾವದ ಕಾರಣ ಯಾವುದೇ ಸರಕಾರ ಬಂದರೂ ಡಿ.ರೂಪಾ ಅವರಿಗೆ ಎಕ್ಸಿಕ್ಯೂಟಿವ್ ಪೋಸ್ಟ್ಗಳನ್ನು ನೀಡುವುದಿಲ್ಲ. ಒಂದು ವೇಳೆ ಮಹತ್ವದ ಹುದ್ದೆಗಳು ಸಿಕ್ಕರೂ ಕೆಲವೇ ದಿನಗಳಲ್ಲಿ ಡಿ.ರೂಪಾ ವರ್ಗಾವಣೆಯಾಗುತ್ತಾರೆ ಎನ್ನುವುದಂತು ನಿಜ.
ಭ್ರಷ್ಟಾಚಾರ ತಾಂಡವ ಆಡುತ್ತಿರುವ ಸಂದರ್ಭದಲ್ಲಿ ಇಂತಹ ನಿಷ್ಠಾವಂತ ಖಡಕ್ ಅಧಿಕಾರಿಗಳು ನಮ್ಮ ನಡುವೆ ಇದ್ದಾರೆ ಎನ್ನುವುದು ಹೆಮ್ಮೆಯ ಸಂಗತಿ,ಇವರ ಆದರ್ಶಗಳು ಎಲ್ಲಾ ಅಧಿಕಾರಿಗಳಿಗೆ ಉದಾಹರಣೆಯಾಗಲಿ, ಸ್ವಸ್ಥ ಸಮಾಜ ನಿರ್ಮಾಣವಾಗಲಿ ಎಂಬುದೇ ನಮ್ಮ ಕಳಕಳಿ.
ಪ್ರಸಾದ್ ಶೆಟ್ಟಿ ಸೀತಾನದಿ
8892282429
Join The Telegram | Join The WhatsApp |