ಯಾದಗಿರಿ :
ರಾಮಾಯಣದ ಅನೇಕ ಕುರುಹುಗಳು ನಮ್ಮ ರಾಜ್ಯದಲ್ಲಿ ಲಭ್ಯವಾಗಿವೆ. ಶ್ರೀರಾಮನ ಬಂಟ ಆಂಜನೇಯ ಜನ್ಮಸ್ಥಳ ಅಂಜನಾದ್ರಿ, ವಾಲಿ-ಸುಗ್ರೀವನ್ನು ಭೇಟಿಯಾದ ಸ್ಥಳ ಕಿಷ್ಕಿಂಧೆ, ಶಬರಿ ರಾಮನಿಗಾಗಿ ಕಾಯುತ್ತಿದ್ದ ಸ್ಥಳವೂ ಕರ್ನಾಟಕದಲ್ಲಿದೆ. ಈಗ ನಮ್ಮ ರಾಜ್ಯದಲ್ಲಿ ಶ್ರೀರಾಮ ಪ್ರಭು ತ್ರೇತಾಯುಗದಲ್ಲಿ ಬಳಸಿದ್ದರೆನ್ನಲಾದ ಬೃಹತ್ 7 ಅಡಿ ಉದ್ದದ ಬಾಣವೂ ಕೂಡ ಯಾದಗಿರಿಯಲ್ಲಿ ಲಭ್ಯವಾಗಿದೆ.

ಹೌದು, ತ್ರೇತಾಯುಗದಲ್ಲಿ ಪ್ರಭು ಶ್ರೀರಾಮ ಪ್ರಭು ಬಳಕೆ ಮಾಡಿದ್ದರೆನ್ನಲಾದ ಬಾಣವು ಯಾದಗಿರಿ ಜಿಲ್ಲೆಯ ಗ್ರಾಮವೊಂದರಲ್ಲಿ ಪತ್ತೆಯಾಗಿದೆ. ನಾಳೆ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯಾಗುತ್ತಿದೆ. ಆದರೆ, ಇತ್ತ ಯಾದಗಿರಿ ಜಿಲ್ಲೆಯಲ್ಲಿ ಶ್ರೀರಾಮನ ಬಾಣ ಪ್ರತ್ಯಕ್ಷವಾಗಿದೆ. ರಾಮನ ಬಾಣ ಪ್ರತ್ಯಕ್ಷವಾದ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಿ ಬಾಣಕ್ಕೆ ನಿತ್ಯ ಪೂಜೆ ಸಲ್ಲಿಕೆ ಮಾಡಲಾಗುತ್ತಿದೆ. ಈ ಬಾಣವು 7 ಅಡಿಗಿಂತಲೂ ಎತ್ತರವಾಗಿದ್ದು, ಘನಘಾತ್ರದ್ದಾಗಿದೆ. ಇದು ಉಕ್ಕಿನ ಅದಿರು ಹಾಗೂ ಕಬ್ಬಿಣ ಮಿಶ್ರಿತ ಲೇಪನ ಹೊಂದಿರುವ ರಾಮ ಬಾಣವಾಗಿದೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಿಬರಬಂಡಿ ಗ್ರಾಮದಲ್ಲಿರುವ ದೇವಸ್ಥಾನದಲ್ಲಿ ರಾಮ ಬಾಣ ಪತ್ತೆಯಾಗಿದೆ. ಗ್ರಾಮಸ್ಥರು ಇಲ್ಲಿ ಲಭ್ಯವಾದ ರಾಮ ಬಾಣವನ್ನು ತಲೆತಲಾಂತರದಿಂದ ದೇವಸ್ಥಾನ ನಿರ್ಮಿಸಿ ಪೂಜಿಸುತ್ತಿದ್ದಾರೆ. ರಾಮನು ಬಾಗಲಕೋಟೆ ಜಿಲ್ಲೆಯ ಸೀತಾಮಾತೆ ನೆಲೆಸಿದ್ದ ಶೀತಿಮನಿಯಿಂದ ಲಂಕೆಗೆ ಬಿಟ್ಟಿದ್ದ ಎನ್ನಲಾದ ಬಾಣ ಇದಾಗಿದೆ. ಆದರೆ, ಈ ಬಾಣ ಲಂಕೆಗೆ ತಲುಪದೇ ಶಿಬರಬಂಡಿ ಗ್ರಾಮದಲ್ಲಿ ಬಿದ್ದಿತ್ತು ಎನ್ನಲಾಗಿದೆ. ಅಂದೇ‌ ರಾಮನ ಕುಲ ಸಮಾಪ್ತಿಯಾಗಿದೆ ಎಂದು ಶಿಬಿರಬಂಡಿ ಗ್ರಾಮಸ್ಥರು ಹೇಳುತ್ತಿದ್ದಾರೆ.

ರಾಮನ ಪ್ರತೀಕವಾದ ಬಾಣ ಸಿಕ್ಕಿರೋ ಸ್ಥಳದಲ್ಲಿ ಗ್ರಾಮಸ್ಥರು ದೇವಸ್ಥಾನ ನಿರ್ಮಿಇಸಿದ್ದಾರೆ. ಅಂದಿನಿಂದ ಶಿಬರಬಂಡಿ ಶ್ರೀರಾಮನ ಬಾಣ ದೇವಸ್ಥಾನ ಐತಿಹಾಸಿಕ ಸ್ಥಳ ಎಂದೇ ಪ್ರಸಿದ್ಧಿ ಪಡೆದಿದೆ. ದೇವಸ್ಥಾನದಲ್ಲಿ ರಾಮನ ಬಾಣಕ್ಕೆ ಪೂಜೆ ಸಲ್ಲಿಸಿ ರಾಮನನ್ನ ಆರಾಧಿಸಲಾಗುತ್ತದೆ. ಈ ಬಾಣವನ್ನು ತೇತ್ರಾಯುಗದಲ್ಲಿ ರಾಮ ಬಳಸಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.