ಗೋಕಾಕ :
ಕೇಂದ್ರ ಸರಕಾರವು ಜಾರಿಗೆ ತಂದಿರುವ ಹಲವಾರು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಮತದಾರರ ಮುಂದೆ ಹೇಳಿ, ಅವರಿಂದ ಬಿಜೆಪಿಗೆ ಮತ ಹಾಕಿಸುವ ಕೆಲಸ ಮಾಡುವಂತೆ ಫಲಾನುಭವಿಗಳ ಅಭಿಯಾನದ ಜಿಲ್ಲಾ ಸಂಚಾಲಕ ಅರವಿಂದ ಪಾಟೀಲ ಹೇಳಿದರು.
ಇಲ್ಲಿನ ಎನ್ಎಸ್ಎಫ್ ಕಾರ್ಯಾಲಯದಲ್ಲಿ ಅರಭಾವಿ, ಗೋಕಾಕ್ ಮಂಡಲದವರು ಜಂಟಿಯಾಗಿ ಶುಕ್ರವಾರದಂದು ಹಮ್ಮಿಕೊಂಡಿದ್ದ ಫಲಾನುಭವಿಗಳ ಸಂಪರ್ಕ ಅಭಿಯಾನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಕರ್ತರು ದುಡಿಯಲು ತಿಳಿಸಿದರು.
ದೇಶದ ಜನಮೆಚ್ಚಿದ ಹೆಮ್ಮೆಯ ಪ್ರಧಾನಿ ನಮ್ಮ ನರೇಂದ್ರ ಮೋದಿಯವರು. ಕಳೆದ ಎರಡು ಅವಧಿಯಿಂದ ಈ ದೇಶದ ಚುಕ್ಕಾಣಿ ಹಿಡಿದು ಶಕ್ತಿ ಶಾಲಿ ಭಾರತ ನಿರ್ಮಾಣಕ್ಕೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ದೇಶದ ಎಲ್ಲ ಜನಾಂಗದವರ ಅಭ್ಯುದಯಕ್ಕೆ ನೂರಾರು ಜನಪರ- ರೈತಪರ- ಮಹಿಳಾಪರ ಯೋಜನೆಗಳನ್ನು ಸಾಕಾರಗೊಳಿಸಿದ್ದಾರೆ. ಅಂತಹ ಯೋಜನೆಗಳ ಫಲಾನುಭವಿಗಳ ಸಂಪರ್ಕ ಸಾಧಿಸುವ ಕೆಲಸ ನಡೆಯುತ್ತಿದೆ. ಫಲಾನುಭವಿಗಳ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ನಮ್ಮ ಕೇಂದ್ರ ಸರ್ಕಾರದ ಯೋಜನೆಗಳನ್ನು ವಿವರಿಸಿ ನಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕಿಸುವ ಜವಾಬ್ದಾರಿಯನ್ನು ಕಾರ್ಯಕರ್ತರು ಹೊತ್ತುಕೊಳ್ಳುವಂತೆ ಪಾಟೀಲ ಹೇಳಿದರು.
ಅರಭಾವಿ ಮಂಡಲದ ಸಂಚಾಲಕ ಗೋವಿಂದ ಕೊಪ್ಪದ ಮಾತನಾಡಿ, ಇದೇ ಎಪ್ರಿಲ್ ತಿಂಗಳಲ್ಲಿ ಜರುಗುವ ಸಂಸತ್ ಚುನಾವಣೆಯಲ್ಲಿ *ಮೋದಿ ಮತ್ತೊಮ್ಮೆ* ಅಧಿಕಾರ ಹಿಡಿಯುವುದು ಈಗಾಗಲೇ ಖಾತ್ರಿಯಾಗಿದೆ. ಇಡೀ ವಿಶ್ವದಲ್ಲೇ ನರೇಂದ್ರ ಮೋದಿಯವರು ಜನಪ್ರಿಯ ನಾಯಕರಾಗಿದ್ದಾರೆ. ಕೊವಿಡ್ ಸಂಕಷ್ಟದ ವೇಳೆಯಲ್ಲಿ ಪ್ರತಿಯೊಬ್ಬ ನಾಗರೀಕನಿಗೂ ಉಚಿತ ಲಸಿಕೆಗಳನ್ನು ನೀಡಲಾಗಿದೆ. ಕಳೆದ ಚುನಾವಣೆಯಲ್ಲಿ ನೀಡಿದ ಆಶ್ವಾಸನೆಯಂತೆ ಅಯೋಧ್ಯೇಯಲ್ಲಿ ರಾಮ ಮಂದಿರವನ್ನು ಪ್ರತಿಷ್ಟಾಪಿಸಲಾಗಿದೆ. ಕಾಶ್ಮೀರದಲ್ಲಿ ಆರ್ಟಿಕಲ್ ೩೭೦ ಮತ್ತು ೩೫ಎ ರದ್ಧತಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್, ಆತ್ಮನಿರ್ಭರ, ಉಜ್ವಲಾ ಯೋಜನೆ, ಮೇಕ್ ಇನ್ ಇಂಡಿಯಾ, ಅಟಲ್ ಪಿಂಚಣಿ ಯೋಜನೆ ಸೇರಿದಂತೆ ನೂರಾರು ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರವು ರೂಪಿಸಿದೆ ಎಂದು ವಿವರಿಸಿದರು.
ಶಾಸಕದ್ವಯರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿಯವರ ಸಮರ್ಥ ಮುಖಂಡತ್ವದಲ್ಲಿ ಲೋಕಸಭಾ
ಚುನಾವಣೆಯಲ್ಲಿ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗೆ ಅತೀ ಹೆಚ್ಚಿನ ಮುನ್ನಡೆ ಮತಗಳನ್ನು ಕೊಟ್ಟು ಭಾರೀ ಅಂತರದಿಂದ ಗೆಲ್ಲಿಸಿಕೊಡಲಾಗುವುದು ಎಂದು ಅವರು ಹೇಳಿದರು.
ಅಧ್ಯಕ್ಷತೆಯನ್ನು ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ವಹಿಸಿದ್ದರು.
ವೇದಿಕೆಯಲ್ಲಿ ಜಿಲ್ಲಾ ಸಹ ಸಂಚಾಲಕಿ ಸುವರ್ಣ ಪಾಟೀಲ, ಗೋಕಾಕ್ ಗ್ರಾಮೀಣ ಸಂಚಾಲಕ ಪುಂಡಲೀಕ ವಣ್ಣೂರ, ರಾಜು ಮುಂಡಾನೆ, ಅಶೋಕ ಪಾತ್ರೋಟ, ಉಭಯ ಕ್ಷೇತ್ರಗಳ ಬಿಜೆಪಿ ಪದಾಧಿಕಾರಿಗಳು, ಮಹಾ ಶಕ್ತಿ, ಶಕ್ತಿ ಕೇಂದ್ರಗಳ ಪ್ರಮುಖರು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪರಸಪ್ಪ ಬಬಲಿ ನಿರೂಪಿಸಿದರು.