ಪುತ್ತೂರು:ಕಾನೂನು ಹೆಸರಿನಲ್ಲಿ ಸಣ್ಣಪುಟ್ಟ ವಿಚಾರದಲ್ಲಿ ಕಡತ ವಿಲೇವಾರಿಯಲ್ಲಿ ಟೈಟ್ ಮಾಡಬೇಡಿ , ಕಾನೂನು ಪಾಲನೆಯ ಜೊತೆಗೆ ಮಾನವೀಯತೆಯೂ ಮೇಳೈಸುವಂತೆ ಮಾಡಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ಅವರು ಪುಡಾ ಸಭೆಯಲ್ಲಿ ನೂತನ ಸಮಿತಿ ಮತ್ತು ಅಧಿಕಾರಿಗಳಿಗೆ ಸಲಹೆ ನೀಡಿದರು.

ಅವರು ಪುಡಾ ಕಚೇರಿಯಲ್ಲಿ ಮಂಗಳವಾರ ಪುಡಾ ನೂತನ ಸಮಿತಿಯ ಮೊದಲ ಸಭೆ ನಡೆಯಿತು.

ಸಭೆಯಲ್ಲಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಶಾಸಕರು ಗ್ರಾಮಗಳಿಂದ ವಿವಿಧ ಕಡತಗಳನ್ನು ಹಿಡಿದು ಪುಡಾ ಕಚೇರಿಗೆ ಬರುವ ಜನರನ್ನು ಯಾವುದೇ ಕಾರಣಕ್ಕೂ ಸತಾಯಿಸಬಾರದು, ನಾಳೆ ಬನ್ನಿ, ನಾಡಿದ್ದು ಬನ್ನಿ ಎಂಬ ಶಬ್ದ ಬಳಕೆ ಮಾಡುವುದು ಬೇಡ. ಗ್ರಾಮೀಣ ಜನತೆ ಮುಗ್ದರು, ಅವರಲ್ಲಿ ಬಹುತೇಕರಿಗೆ ಕಾನೂನಿನ ಬಗ್ಗೆ ತಿಳುವಳಿಕೆ ಕಡಿಮೆ ಇರಬಹುದು ಅಂಥವರು ಕಚೇರಿಗೆ ಬಂದಾಗ ಅವರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಮಾಡಬೇಕು. ಕೆಲವೊಂದು ಸಣ್ಣ ಪುಟ್ಟ ವಿಚಾರಗಳಿಗೆ ಕಾನೂನು ನೆಪ ಹೇಳಿ ಕಡತವನ್ನು ಪೆಂಡಿಂಗ್ ಇಡುವುದು ಬೇಡ. ಸಭೆ ನಡೆಸಿ ಆ ಬಗ್ಗೆ ಚರ್ಚೆ ನಡೆಸಿ ಅವುಗಳ ಸಾಧಕ ಬಾಧಕಗಳನ್ನು ಪರಿಗಣಿಸಿ ವಿಲೇವಾರಿ ಮಾಡಬಹುದೇ ಆದಲ್ಲಿ ಅದನ್ನು ಮಾಡಿಕೊಡಬೇಕು ಎಂದು ಹೇಳಿದರು. ಸರಕಾರಿ ಕಚೇರಿಗಳು ಇರುವುದು ಜನರ ಸೇವೆ ಮಾಡಲು ಅದು ಇಲ್ಲಿ ಸೇರಿದಂತೆ ಪ್ರತೀ ಇಲಾಖೆಯಲ್ಲಿಯೂ ಆಗಬೇಕು ಎಂಬುದು ನನ್ನ ಉದ್ದೇಶ ಅದಕ್ಕೆ ಚ್ಯುತಿ ಬಾರದಂತೆ ಇಲ್ಲಿನ ಕೆಲಸ ಕಾರ್ಯಗಳು ನಡೆಯಲಿ ಎಂದು ಶಾಸಕರು ಹೇಳಿದರು.

 

ಹೆಚ್ಚುವರಿ ಸಿಬಂದಿಗಳ ನೇಮಕವಾಗಿದೆ: ಅಮಲರಾಮಚಂದ್ರ

ಪುಡಾ ಕಚೇರಿಯಲ್ಲಿ ಸಿಬಂದಿ ಕೊರತೆ ಇತ್ತು. ಕಾರ್ಯದರ್ಶಿಯವರು ವಾರಕ್ಕೆ ಒಂದು ದಿನ ಮಾತ್ರ ಕಚೇರಿಯಲ್ಲಿ ಲಭ್ಯರಿರುವ ಕಾರಣ ಕಡತ ವಿಲೇವಾರಿ ವಿಳಂಬವಾಗಬಹುದು ಎಂಬ ನಿಟ್ಟಿನಲ್ಲಿ ಶಾಸಕರ ಸೂಚನೆಯ ಮೇರೆಗೆ ವಾರಕ್ಕೆಎರಡು ದಿನದಂತೆ ಇಬ್ಬರು ಸಿಬಂದಿಗಳನ್ನು ಸರಕಾರ ನೇಮಕ ಮಾಡಿದೆ. ಮುಂದೆ ಕಡತ ವಿಲೇವಾರಿಯಲ್ಲಿ ಸಮಸ್ಯೆಗಳು ಉಂಟಾಗುವುದಿಲ್ಲ ಎಂದು ಪುಡಾ ಅಧ್ಯಕ್ಷ ಅಮಲ ರಾಮಚಂದ್ರ ಹೇಳಿದರು.

೯/೧೧ ಗ್ರಾಮೀಣ ಭಾಗದ್ದು ಸುಮಾರು ೪೫೦ ಕಡತಗಳು , ನಗರ ಪ್ರದೇಶದ್ದು ಸುಮಾರು ೫೦ ಕಡತಗಳು ಬಾಕಿ ಇದೆ ಅದು ಶೀಘ್ರ ವಿಲೇವಾರಿಯಾಗುತ್ತದೆ. ಕಟ್ ಕನ್ವರ್ಶನ್ ವಿಚಾರದ ಬಗ್ಗೆ ಶಾಸಕರ ಜೊತೆ ನಾವು ಮಾತುಕತೆ ನಡೆಸಿದ್ದೇವೆ, ಈ ವಿಚಾರದಲ್ಲಿ ಸಚಿವರ ಜೊತೆ ಮಾತಕತೆ ನಡೆಸಿ ಸಮಸ್ಯೆ ಇತ್ಯರ್ಥ ಪಡಿಸುವ ತೀರ್ಮಾಣವನ್ನು ಮಾಡಿದ್ದೇವೆ. ಜನತೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಪುಡಾ ಮುಂದೆ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದರು. ಶಾಸಕರ ಸೂಚನೆಯಂತೆ ನಾವು ಪ್ರತೀ ಹೆಜ್ಜೆಯನ್ನು ಇಡಲಿದ್ದು , ಬಡವರ ಪರ ಕೆಲಸ ಮಾಡುವ ತಾತ್ಪರ್ಯತೆಯನ್ನು ನಾವು ಹೊಂದಿದ್ದು ಪುಡಾ ಇನ್ನು ನಮ್ಮ, ನಿಮ್ಮ ಕಚೇರಿಯಾಗಿ ಮಾರ್ಪಡಾಗಲಿದೆ ಎಂದು ಹೇಳಿದರು.

ಸಭೆಯಲ್ಲಿ ಪುಡಾ ಕಾರ್ಯದರ್ಶಿ ಗುರುರಾಜ್, ಸದಸ್ಯರಾದ ಅನ್ವರ್ ಖಾಸಿಂ, ನಿಹಾಲ್ ಪಿ ಶೆಟ್ಟಿ ಉಪಸ್ಥಿತರಿದ್ದರು.