
ಪುತ್ತೂರು: ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ಅವರು ಶಾಸಕರಾದ ಬಳಿಕದಿಂದ ವಿವಿಧ ರೀತಿಯಲ್ಲಿ ಹೋರಾಟ ನಡೆಸುತ್ತಿದ್ದು ಈ ಹೋರಾಟಕ್ಕೆ ಇದೀಗ ಶಕ್ತಿ ತುಂಬಿದಂತಾಗಿದ್ದು ಈ ಬಗ್ಗೆ ಅಧ್ಯಯನ ನಡೆಸಲು ಆಂಧ್ರ ಪ್ರದೇಶಕ್ಕೆ ಅಧಿಕಾರಿಗಳ ತಂಡವನ್ನು ಸರಕಾರ ಕಳಹಿಸಿದೆ, ಇದರಿಂದಾಗಿ ಶಾಸಕರ ಹೋರಾಟಕ್ಕೆ ಇನ್ನಷ್ಟು ಶಕ್ತಿ ತುಂಬಿದಂತಾಗಿದೆ.
ಆಂಧ್ರ ಪದೇಶದಲ್ಲಿ ಸ್ಥಳೀಯ ಭಾಷೆಯನ್ನು ಅಲ್ಲಿನ ಎರಡನೇ ಅಧಿಕೃತ ಭಾಷೆಯನ್ನಾಗಿ ರಾಜ್ಯ ಸರಕಾರ ಘೋಷಣೆ ಮಾಡಿದೆ. ಅಲ್ಲಿ ಸ್ಥಳೀಯ ಭಾಷೆಯನ್ನು ಯಾವ ಮಾನದಂಡದ ಆಧಾರದಲ್ಲಿ ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಲು ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಹಾಗೂ ಸಿಬಂದಿಗಳು ಕಳುಹಿಸಿದೆ., ಕೆಲ ತಿಂಗಳ ಹಿಂದೆ ಪುತ್ತೂರು ಶಾಸಕ ಅಶೋಕ್ ರೈ ಅವರು ತನ್ನ ಸ್ವಂತ ಖರ್ಚಿನಿಂದ ಆಂಧ್ರಪ್ರದೇಶಕ್ಕೆ ತಂಡವನ್ನು ಕಳುಹಿಸಿ ಅಧ್ಯಯನ ನಡೆಸಿ ಆ ಅಧ್ಯಯನ ವರದಿಯನ್ನು ಸರಕಾರದ ಮುಂದೆ ಮಂಡನೆ ಮಾಡಿದ್ದರು. ಈ ವಿಚಾರವನ್ನು ಶಾಶಕರು ವಿಧಾನಸಭಾ ಅಧಿವೇಶನದಲ್ಲೂ ಪ್ರಸ್ತಾಪ ಮಾಡಿದ್ದರು.
ತಂಡದಿಂದ ಪೂರ್ಣ ಅಧ್ಯಯನ:
ಆಂಧ್ರ ಪ್ರದೇಶಕ್ಕೆ ತೆರಳಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಂಡ ಈ ಬಗ್ಗೆ ಪೂರ್ಣಪ್ರಮಾಣದಲ್ಲಿ ಅಧ್ಯಯನ ನಡೆಸಲಿದೆ. ಅಲ್ಲಿನ ಸ್ಥಳೀಯ ಭಾಷೆಯನ್ನು ಅಲ್ಲಿನ ಎರಡನೇ ಅಧಿಕೃತ ಭಾಷೆಯನ್ನಾಗಿ ಹೇಗೆ ಘೋಷಣೆ ಮಾಡಿದೆ ಮತ್ತು ಇದನ್ನು ಯಾವ ಮಾನದಂಡದಲ್ಲಿ ಮಾಡಿದೆ ಎಂಬುದನ್ನು ಅಧ್ಯಯನ ನಡೆಸಲಿದೆ. ತಂಡವು ಅಧ್ಯಯನ ನಡೆಸಿ ವರದಿಯನ್ನು ಸರಕಾರದ ಮುಂದೆ ಇಡಲಿದ್ದು ಇದು ಕರಾವಳಿಯ ಜನರ ನಾಡಿಮಿಡಿತವಾದ ತುಳುವನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯನ್ನಾಗಿಸುವಲ್ಲಿ ದಾರಿಯನ್ನು ಸುಗಮಗೊಳಿಸಲಿದೆ.
ಅಧಿವೇಶನದಲ್ಲಿ ತುಳುವಿನಲ್ಲೇ ಮಾತನಾಡಿದ್ದ ಶಾಸಕರು:
ಶಾಸಕರಾಗಿ ಆಯ್ಕೆಯಾದ ಬಳಿಕ ನಡೆದ ಮೊದಲನೇ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಅಶೋಕ್ ರೈ ಅವರು ತುಳುವಿನಲ್ಲೇ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಸಾಮಾಜಿಕ ತಾಣದಲ್ಲಿ ಇದನ್ನು ಲಕ್ಷಾಂತರ ಮಂದಿ ಲೈಕ್ ಮಾಡಿದ್ದರು. ವಿಧಾನಸಭಾ ಇತಿಹಾಸದಲ್ಲೇ ಮೊದಲ ಬಾರಿ ಎಂಬಂತೆ ಈ ಮಾತು ಹೆಚ್ಚು ವೈರಲ್ ಆಗಿತ್ತು ಮತ್ತು ಅತೀ ಹೆಚ್ಚು ಜನರು ವೀಕ್ಷಣೆ ಮಾಡಿದ ಭಾಷಣವೂ ಆಗಿತ್ತು. ಆ ಬಳಿಕ ನಡೆದ ಅಧಿವೇಶನದಲ್ಲಿ ಶಾಸಕರು ತುಳುವಿನಲ್ಲೇ ಮಾತನಾಡುವ ಮೂಲಕ ಸರಕಾರವನ್ನು ತುಳುವಿಗೆ ಹತ್ತಿರವಾಗುವಂತೆ ಮಾಡಿದ್ದರು. ವಿಧಾನಸಭಾ ಅಧ್ಯಕ್ಷ ಯು ಟಿ ಖಾದರ್ ಅವರ ಜೊತೆಯೂ ಅಧಿವೇಶನದಲ್ಲಿ ತುಳುವಿನಲ್ಲೇ ಮಾತನಾಡಿದ್ದರು. ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡಬೇಕು ಎಂದು ಮೊನ್ನೆ ನಡೆದ ಅಧಿವೇಶನದಲ್ಲೂ ಶಾಸಕರು ಸರಕಾರದ ಗಮನ ಸೆಳೆದಿದ್ದರು.
ಇದು ನಿರಂತರ ಹೋರಾಠದ ಫಲವಾಗಿದೆ. ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಖೆಯ ಅಧಿಕಾರಿ ಮತ್ತು ಸಿಬಂದಿಗಳನ್ನು ಆಂದ್ರಕ್ಕೆ ಕಳುಹಿಸಿ ಅಲ್ಲಿನ ಸ್ಥಳೀಯ ಭಾಷೆಯನ್ನು ಯಾವ ಮಾನದಂಡದಲ್ಲಿ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಿದೆ ಎಂಬುದರ ಬಗ್ಗೆ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಮಂಡಿಸಲಿದೆ. ಆ ಬಳಿಕ ಕರ್ನಾಟಕದಲ್ಲಿ ತುಳುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವಲ್ಲಿ ಇದು ಸಹಕಾರಿಯಾಗಲಿದೆ. ತುಳುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡಬೇಕು ಎಂದು ನಾನು ಮಾಡುತ್ತಿರುವ ಹೋರಾಟಕ್ಕೆ ರಾಜ್ಯ ಸರಕಾರದಿಂದ ಉತ್ತಮ ಬೆಂಬಲ ದೊರಕಿದಂತಾಗಿದೆ ಇದಕ್ಕಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ-ಅಶೋಕ್ ರೈ ಶಾಸಕರು ಪುತ್ತೂರು