ಬೆಳಗಾವಿ: ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭಾ ಅಭ್ಯರ್ಥಿಗಳ ಕುರಿತು ಈಗಾಗಲೇ ಪಟ್ಟಿ ಮಾಡಿ ಕಳಿಸಲಾಗಿದೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾಣ ಮಾಡಲಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈಗಾಗಲೇ ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ನಾವು ಹೈಕಮಾಂಡಗೆ ಕಳುಹಿಸಿದ್ದೇವೆ. ಅಲ್ಲಿ ಯಾರು ಅಭ್ಯರ್ಥಿಗಳನ್ನು ಫೈನಲ್‌ ಮಾಡಲಾಗುವುದು ಅವರನ್ನೇ ಲೋಕಸಭಾ ಕಣಕ್ಕೆ ಇಳಿಸಲಾಗುವುದು ಎಂದು ಹೇಳಿದರು.

ಪ್ರಕಾಶ ಹುಕ್ಕೇರಿ ಅವರ ಡಿ ಕೋಡ್‌ ನಮ್ಮಗೆ ಗೊತ್ತಿದೆ: ಪ್ರಕಾಶ ಹುಕ್ಕೇರಿ ಅವರು ಯಾವಾಗ ನಿಲ್ಲುವದಿಲ್ಲ ಅನ್ನುತ್ತಾರೋ ಆಗ ಅವರು ಕಂಡಿತಾ ಲೋಕಸಭಾ ಚುನವಾಣೆಗೆ ಸ್ಪರ್ಧಿಸುತ್ತಾರೆ. ಅವರು ಯಾವಾಗ ಸ್ಪರ್ಧೆಗೆ ನಿಲ್ಲುತ್ತೇನೆ ಅನ್ನುತ್ತಾರೋ ಆಗ ಅವರು ನಿಲ್ಲುವದಿಲ್ಲ. ಒಟ್ಟಾರೆಯಾಗಿ ಪ್ರಕಾಶ ಹುಕ್ಕೇರಿ ಅವರ ಡಿ ಕೋಡ್‌ ನಮ್ಮ ಗೊತ್ತಿದೆ ಎಂದು ಹೇಳಿದರು.

ಲೋಕಸಭಾ ಚುನಾವಣೆ ಸನಿಹ ಬಂದಾಗ ಇಂತಹ ಸಮಾವೇಶವನ್ನು ಕಾಂಗ್ರೆಸ್‌ ಮಾಡುತ್ತಿದೆ ಇದರ ಉದ್ದೇಶ ಏನು ಎಂಬ ಮಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್‌ ಜಾರಿಗೆ ತಂದ ಉತ್ತಮ ಗ್ಯಾರೆಂಟಿಗಳು ಎಲ್ಲರಿಗೂ ತಿಳಿಯುವ ಉದ್ದೇಶದಿಂದ ಇಂತಹ ಸಮಾವೇಶವನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಕೈ ಶಾಸಕ ಸವದಿ ಬಿಜೆಪಿಗೆ ಹೋಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸವದಿ ಅವರು ಬಿಜೆಪಿ ಹೋಗುವ ಪ್ರಶ್ನೆನೇ ಇಲ್ಲ. ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ ಹೀಗಾಗಿ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ನಿಷ್ಠಾವಂತರಿಗೆ ಒಳ್ಳೆಯ ಅವಕಾಶಗಳಿವೆ. ಆದರೆ ತಾಳ್ಮೆ ಇರಬೇಕು ಅಷ್ಠೆ ಎಂದ ಅವರು, ಸವದಿ ಅವರು ಕೂಡಾ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಆವರಿಗೂ ಕೂಡಾ ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶಗಳು ಕೂಡಿ ಬರಲಿವೆ ಎಂದರು.
ನಾಡಿದ್ದು ಶಾಸಕರು-ಸಚಿವರು ದೆಹಲಿಗೆ ಪ್ರಯಾಣ: ಕೇಂದ್ರ ಸರ್ಕಾರ ಅನುದಾನ ವಿಚಾರವಾಗಿ ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ದೆಹಲಿಯಲ್ಲಿ ಫೆ. 7 ರಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಈ ಪ್ರತಿಭಟನೆಯಲ್ಲಿ ಸಿಎಂ- ಡಿಸಿಎಂ ಸೇರಿದಂತೆ ಎಲ್ಲ ಸಚಿವರು ಹಾಗೂ ಕಾಂಗ್ರೆಸ್‌ ಶಾಸಕರು ಭಾಗವಹಿಸಲಿದ್ದಾರೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.