ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಜ್ಯದಲ್ಲಿ ಈಗಾಗಲೇ ಕೆಲ ವಿವಾದಾತ್ಮಕ ಹಾಗೂ ತಮ್ಮ ಮಾತುಗಾರಿಕೆಯಿಂದ ಗಮನ ಸೆಳೆದವರು ಈ ಬಾರಿಯ ಬಿಗ್ ಬಾಸ್ ಗೆ ಬರಲಿರುವುದು ವಿಶೇಷ. ಲಕ್ಷಾಂತರ ಅಭಿಮಾನಿ ವರ್ಗ ಬಿಗ್ ಬಾಸ್ ವೀಕ್ಷಣೆಗೆ ಸಜ್ಜಾಗಿದೆ.

ಈ ಸಲವೂ ನಟ ಕಿಚ್ಚ ಸುದೀಪ್ ಅವರೇ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈಗಾಗಲೇ ಯಶಸ್ವಿ 10 ಆವೃತ್ತಿಯನ್ನು ಮುಗಿಸಿರುವ ಬಿಗ್‌ಬಾಸ್‌ ಶೋ 11ನೇ ಆವೃತ್ತಿಗೆ ಭರ್ಜರಿ ತಯಾರಿ ಮಾಡಿಕೊಂಡಿದೆ. ಈ ಬಾರಿ ಸ್ವರ್ಗ-ನರಕ ಎಂಬ ಥೀಮ್‌ನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಹೊಸ ಅಧ್ಯಾಯದ ಮೇಲೆ ಜನರು ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

ಈ ಸಲ ಬಿಗ್ ಬಾಸ್ ವಿಶೇಷವಾಗಿರಲಿದೆ. 11ನೇ ಸೀಸನ್ ಎಂಬ ಕಾರಣಕ್ಕೆ ಅದ್ದೂರಿ ತನ ಹೆಚ್ಚಿಸಲು ನಿರ್ಧರಿಸಲಾಗಿದೆ. ಕಳೆದ ವರ್ಷ ಬಿಗ್ ಬಾಸ್ ಸಾಕಷ್ಟು ಚರ್ಚೆ ಹುಟ್ಟು ಹಾಕಿದ್ದು ಸ್ಪರ್ಧಿಗಳ ಮಧ್ಯೆ ಸಾಕಷ್ಟು ಕಠಿಣ ಸ್ಪರ್ಧೆ ಇತ್ತು. ಹಾಸ್ಯಕ್ಕೆ ಜಾಗ ಇಲ್ಲದೆ ಎಲ್ಲರೂ ಕಿತ್ತಾಡಿಕೊಂಡಿದ್ದರು. ಆದರೆ ಈ ಸಲ ಹಾಗೆ ಆಗದಿರಲಿ ಎನ್ನುವುದು ಅಭಿಮಾನಿಗಳ ಒತ್ತಾಸೆಯಾಗಿದೆ. ಈ ಸಲವೂ ಕಿಚ್ಚ ಸುದೀಪ್ ಅವರ ಸಾರಥ್ಯ ಇರಲಿದೆ ಎನ್ನುವುದು ಗಮನ ಸೆಳೆಯದಿರುವ ಸಂಗತಿ.

ಹೊಸ ಪ್ರೋಮೋದಲ್ಲಿ ಕೆಲ ನಟ-ನಟಿಯರ ಫೋಟೋಗಳನ್ನ ಬಳಕೆ ಮಾಡಲಾಗಿತ್ತು. ಬ್ಲರ್ ಆಗಿರುವ, ಕ್ಲಾರಿಟಿ ಇಲ್ಲದ, ಅರ್ಧ ಮುಖಗಳಿರುವ ಫೋಟೋಗಳನ್ನ ಮಾತ್ರ ಪ್ರೋಮೋದಲ್ಲಿ ತೋರಿಸಿ ವೀಕ್ಷಕರ ತಲೆಗೆ ಹುಳ ಬಿಡಲಾಗಿತ್ತು! ಪ್ರೋಮೋ ಕಂಡು ‘ಬಿಗ್ ಬಾಸ್’ ಮನೆಗೆ ಹೋಗ್ತಿರುವ ಸ್ಪರ್ಧಿಗಳು ಯಾರ್ಯಾರು ಎಂಬ ಚರ್ಚೆ, ಊಹಾಪೋಹ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ನಡೆಯುತ್ತಿತ್ತು.

ಹೊಸ ಪ್ರೋಮೋದಲ್ಲಿ “ಈ ಬಾರಿ ‘ಬಿಗ್ ಬಾಸ್’ ಮನೆಯಲ್ಲಿ ಒಂದಲ್ಲ… ಎರಡು ಮನೆ (ಸ್ವರ್ಗ, ನರಕ) ಇರಲಿದೆ. ‘ಬಿಗ್ ಬಾಸ್‌’ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಅಸಲಿ ಆಟ ವೀಕ್ಷಕರಿಂದ ಶುರುವಾಗುತ್ತಿದೆ. ಮನೆಯೊಳಗೆ ಹೋಗುವ ಸ್ಪರ್ಧಿಗಳ ಹೆಸರನ್ನ ನಾವು ಹೇಳ್ತಿವಿ. ಸ್ವರ್ಗಕ್ಕೆ ಹೋಗಬೇಕಾ, ನರಕಕ್ಕೆ ಹೋಗಬೇಕಾ ಎಂಬ ನಿರ್ಧಾರ ನಿಮ್ಮ ಕೈಯಲ್ಲಿದೆ” ಎಂಬ ಡೈಲಾಗ್ ಕಿಚ್ಚ ಸುದೀಪ್ ಬಾಯಿಂದ ಬಂದಿತ್ತು.

ರಾಜಾ ರಾಣಿ ರೀಲೋಡೆಡ್ ಫಿನಾಲೆಯಲ್ಲಿ ಬಿಗ್‌ಬಾಸ್ ಸೀಸನ್ 11ರ ಕೆಲವು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡಲಾಗಿದ್ದು, ಕಾರ್ಯಕ್ರಮದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಾಗಿದೆ. ಈ ಬಾರಿ ಸ್ವರ್ಗ-ನರಕ ಥೀಮ್ ನಲ್ಲಿ ಕಾರ್ಯಕ್ರಮ ಮೂಡಿ ಬರಲಿದ್ದು, ಯಾರೆಲ್ಲಾ ಮನೆಗೆ ಎಂಟ್ರಿ ಪಡೆದಿದ್ದಾರೆ.

ಬಿಗ್‌ಬಾಸ್ ಸೀಸನ್-11ರ ಮೊದಲ ಸ್ಪರ್ಧಿಯಾಗಿ ನಟಿ ಗೌತಮಿ ಜಾಧವ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸತ್ಯ ಧಾರಾವಾಹಿ ಸೇರಿದಂತೆ ಕಿರುತೆರೆಯಲ್ಲಿ ಸಾಕಷ್ಟು ಖ್ಯಾತಿ ಗಳಿಸಿರುವ ನಟಿ ಬಿಗ್‌ಬಾಸ್‌ ಮನೆಗೆ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಸತ್ಯ ಧಾರಾವಾಹಿಯಲ್ಲಿ ರಗಡ್ ಆಗಿ ಮಿಂಚಿದ್ದ ನಟಿ ನಿಜಜೀವನದಲ್ಲಿ ಹೇಗಿರಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಜನರಿಗೆ ಬಿಗ್‌ಬಾಸ್‌ ಸಹಕಾರಿಯಾಗಲಿದೆ.

ಬಿಗ್‌ಬಾಸ್ ಸೀಸನ್-11ರ ಎರಡನೇ ಸ್ಪರ್ಧಿಯಾಗಿ ವಕೀಲ ಜಗದೀಶ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಹೇಳಿಕೆ ಹಾಗೂ ಸೋಶಿಯಲ್ ಮೀಡಿಯಾ ಲೈವ್ ವಿಡಿಯೋಗಳ ಮೂಲಕ ಸಾಕಷ್ಟು ಸದ್ದು ಮಾಡಿರುವ ಜಗದೀಶ್ ಕೆಲ ದಿನಗಳ ಹಿಂದೆ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ ರನ್ನು ಹೊರತರೋದಾಗಿ ಹೇಳಿ ಪ್ರತಿಭಟನೆ ನಡೆಸುವ ಮೂಲಕ ಸುದ್ದಿಯಾಗಿದ್ದರು.

ಬಿಗ್‌ಬಾಸ್ ಸೀಸನ್-11ರ ಮೂರನೇ ಸ್ಪರ್ಧಿಯಾಗಿ ಚೈತ್ರಾ ಕುಂದಾಪುರ ಎಂಟ್ರಿ ಕೊಟ್ಟಿದ್ದಾರೆ. ಹಿಂದೂಪರ ಭಾಷಣಗಳ ಮೂಲಕ ಗುರುತಿಸಿಕೊಂಡಿರುವ ಚೈತ್ರಾ ಕುಂದಾಪುರ 2023 ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಉದ್ಯಮಿಯೊಬ್ಬರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ವಂಚನೆ ಎಸಗಿ ಜೈಲು ಪಾಲಾಗಿದ್ದರು. ಇದೀಗ ಬಿಗ್‌ಬಾಸ್ ಸೀಸನ್-11ರಲ್ಲಿ ಸ್ಪರ್ಧಿಯಾಗಿ ಭಾಗಿಯಾಗುತ್ತಿದ್ದಾರೆ.

ಬಿಗ್‌ಬಾಸ್ ಸೀಸನ್-11ರ ನಾಲ್ಕನೇ ಸ್ಪರ್ಧಿಯಾಗಿ ಗೋಲ್ಡ್ ಸುರೇಶ್ ಎಂಬುವವರು ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮೈ ಮೇಲೆ ಸದಾ 2 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಚಿನ್ನಾಭರಣ ಧರಿಸಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿರುವ ಉತ್ತರ ಕರ್ನಾಟಕ ಮೂಲದ ಸುರೇಶ್ ಅವರನ್ನು ಜನ ಗೋಲ್ಡ್ ಸುರೇಶ್ ಎಂದು ಕರೆಯುತ್ತಾರೆ. ಇದಲ್ಲದೆ ಇವರು ಆರ್‌ಎಸ್‌ಎಸ್ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದಾರೆ.