ಬೆಂಗಳೂರು : ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆಗಿ ಹಳ್ಳಿ ಹೈದ, ಗಾಯಕ ಹನುಮಂತ ಲಮಾಣಿ ಹೊರಹೊಮ್ಮಿದ್ದಾರೆ. ತ್ರಿವಿಕ್ರಮ್ ಮತ್ತು ರಜತ್‌ ಅವರಿಗೆ ಟಕ್ಕರ್‌ ಕೊಟ್ಟು ಈ ಸೀಸನ್‌ನ ವಿನ್ನರ್ ಆಗಿದ್ದಾರೆ. ಟ್ರೂಫಿ ಜೊತೆಗೆ 50 ಲಕ್ಷ ರೂ ನಗದು ಬಹುಮಾನ ಕೂಡ ಗೆದ್ದಿದ್ದಾರೆ. ಇನ್ನು ತ್ರಿವಿಕ್ರಮ್‌ ಅವರು ರನ್ನರ್ ಅಪ್‌ ಆಗಿ ಒಟ್ಟು 15 ಲಕ್ಷ ರೂ ನಗದು ಬಹುಮಾನ ಗೆದ್ದರು. ಹನುಮಂತ ಅವರಿಗೆ 5 ಕೋಟಿ 23 ಲಕ್ಷಕ್ಕೂ ಅಧಿಕ ವೋಟ್‌ ಬಂದಿತ್ತು. ರನ್ನರ್‌ ಅಪ್ ತ್ರಿವಿಕ್ರಮ್‌ ಗೆ 2 ಕೋಟಿ ಗೂ ಅಧಿಕ ವೋಟ್ ಬಂದಿತ್ತು. ಇದು ಸೀಸನ್‌ 10ರಲ್ಲಿ ಸ್ಪರ್ಧಿಗಳಿಗೆ ಸಿಕ್ಕ ವೋಟಿಂಗ್‌ಗಿಂತ ಎರಡು ಪಟ್ಟು ಹೆಚ್ಚು. ರಜತ್‌ ಕಿಶನ್‌ ಅವರು ಎರಡನೇ ರನ್ನರ್ ಅಪ್ ಆದರು. ಜೊತೆಗೆ 10 ಲಕ್ಷ ರೂ ನಗದು ಬಹುಮಾನ ಗೆದ್ದರು. ಮನೆಯಲ್ಲಿ ಕೊನೆಯದಾಗಿ ಉಳಿದಿದ್ದ ಮೂವರನ್ನು ಸುದೀಪ್‌ ಅವರೇ ಸ್ವತಃ ಮನೆಯೊಳಗೆ ಹೋಗಿ ಕರೆದುಕೊಂಡು ವೇದಿಕೆಗೆ ಬಂದರು.

ದೊಡ್ಡ ಆಲದಮರದ ಬಳಿಯ ಹೊಸ ಅರಮನೆಯಂಥ ಬಿಗ್ ಬಾಸ್ ಮನೆ ಆವರಣದಲ್ಲಿಈ ಈವೆಂಟ್ ನಡೆದಿದೆ. ವೇದಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ವಿನ್ನರ್‌ ಹನುಮಂತಗೆ ಟ್ರೋಫಿ ಮತ್ತು ಬಹುಮಾನದ ಮೊತ್ತದ ಚೆಕ್ ಹಸ್ತಾಂತರಿಸಿದರು. ಇನ್ನು ಶೋ ಗೆದ್ದ ಹನುಮಂತ ಬಿಗ್‌ಬಾಸ್‌ ಟ್ರೋಪಿ ಜೊತೆಗೆ 50 ಲಕ್ಷ ಮಾತ್ರವಲ್ಲ ಮನೆಯಲ್ಲಿ ಇಷ್ಟು ದಿನ ಉಳಿದುಕೊಂಡ ಹಿನ್ನೆಲೆಯಲ್ಲಿ ಸಂಭಾವನೆಯನ್ನು ಕೂಡ ಪಡೆದಿದ್ದಾರೆ.

ಇತಿಹಾಸ ಬರೆದ ಹನುಮಂತ ಮತ್ತು ರಜತ್‌: ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಬಂದು ಫಿನಾಲೆಯಲ್ಲಿ ಗೆದ್ದ ಹನುಮಂತ ಮತ್ತು ಮೂರನೇ ಸ್ಥಾನ ಪಡೆದ ರಜತ್‌ ಇತಿಹಾಸ ನಿರ್ಮಿಸಿದ್ದಾರೆ. ಈವರೆಗೆ ಕನ್ನಡ ಬಿಗ್‌ಬಾಸ್‌ ಇತಿಹಾಸದಲ್ಲಿ ಯಾವೊಬ್ಬ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿ ಕೂಡ ಫಿನಾಲೆ ವಾರದವರೆಗೆ ಬಂದಿರುವ ಇತಿಹಾಸವೇ ಇಲ್ಲ. ಶೋ ಆರಂಭವಾಗುವಾಗ ಇಬ್ಬರಿಗೂ ಕಿಚ್ಚ ಸುದೀಪ್‌ ಇದನ್ನು ಹೇಳಿ ಅಭಿನಂದನೆ ಕೂಡ ಸಲ್ಲಿಸಿದ್ದರು.

ಉಗ್ರಂ ಮಂಜು, ರಜತ್‌, ತ್ರಿವಿಕ್ರಮ್‌ ಅವರಿಗೆ ಎದುರಾಗಿ ನಿಂತು ಸಾಕಷ್ಟು ಟಾಸ್ಟ್‌ಗಳಲ್ಲಿ ಹನುಮಂತ ಠಕ್ಕರ್ ಕೊಟ್ಟಿದ್ದರು. ಜೊತೆಗೆ ಧನ್‌ರಾಜ್ ಅವರೊಂದಿಗಿನ ಸ್ನೇಹ ಕೂಡ ತುಂಬಾ ಹೈಲೆಟ್ಸ್ ಆಗಿತ್ತು. ಬಿಗ್‌ಬಾಸ್‌ ಪಿನಾಲೆಗೆ ಒಟ್ಟು 6 ಮಂದಿ ಸೆಲೆಕ್ಟ್ ಆಗಿದ್ದರು. ಅದರಂತೆ ಕ್ರಮವಾಗಿ ಭವ್ಯಾ ಗೌಡ, ಉಗ್ರಂ ಮಂಜು, ಮೋಕ್ಷಿತಾ, ರಜತ್‌ ಮತ್ತು ತ್ರಿವಿಕ್ರಮ್‌ ಕಪ್‌ ಗೆಲ್ಲುವ ರೇಸ್‌ ನಿಂದ ಹೊರಬಿದ್ದರು.

ಒಟ್ಟು ಈ ಬಾರಿ 20 ಮಂದಿ ಸ್ಪರ್ಧಿಗಳು ಶೋನಲ್ಲಿದ್ದರು.ಇದೀಗ ಬಿಗ್ ಬಾಸ್ ಕನ್ನಡ 11ರ ಸೀಸನ್ ಗ್ರಾಂಡ್ ಫಿನಾಲೆಯಲ್ಲಿ ವಿನ್ನರ್ ಆಗಿ ಹನುಮಂತ ಅವರು ಕಪ್ ಗೆಲ್ಲುವ ಮೂಲಕ ಬಿಗ್ ಬಾಸ್ ಈ ಸೀಸನ್‌ಗೆ ಇತಿಶ್ರೀ ಹಾಡಲಾಯಿತು. ಈ ಬಾರಿಯ ಬಿಗ್ ಬಾಸ್ ಶೋವನ್ನು ಹಿಂದೆಂದಿಗಿಂತಲೂ ಹೆಚ್ಚು ಜನರು ವೀಕ್ಷಿಸುವ ಮೂಲಕ ಭಾರೀ ಟಿಆರ್‌ಪಿ (TRP) ಗಳಿಸಿತ್ತು ಎನ್ನಲಾಗಿದೆ. ಕಲರ್ಸ್ ಕನ್ನಡ ಹಾಗು ಜಿಯೋ ಸಿನಿಮಾಸ್ ಈ ಬಿಗ್ ಬಾಸ್ ಸೀಸನ್ 11ನ್ನು ಆಯೋಜಿಸಿತ್ತು. ಇನ್ನು ಮುಂದಿನ ಸೀಸನ್ (12th Season)ಬರುವವರೆಗೆ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಪ್ರಿಯರು ಕಾಯಲೇಬೇಕು. ಮಾತ್ರವಲ್ಲ ಇದು ಕಿಚ್ಚ ನಡೆಸಿ ಕೊಡುವ ಕೊನೆಯ ಸೀಸನ್‌ ಆಗಿದ್ದು, ಮುಂದಿ ಸೀಸನ್‌ ಯಾರು ನಡೆಸಿಕೊಡುತ್ತಾರೆ ಎಂಬ ಕುತೂಹಲ ಜೀವಂತವಾಗಿರಲಿದೆ.