ಬೆಂಗಳೂರು: ವಿಧಾನ ಮಂಡಲದ ಅಧಿವೇಶನದಲ್ಲಿ ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡದ ಕಾರಣ ಬಿಜೆಪಿ ಮತ್ತು ಜೆಡಿಎಸ್ ವಿಧಾನಸಭೆಯೊಳಗೆ ಬುಧವಾರ ಅಹೋರಾತ್ರಿ ಜಂಟಿಯಾಗಿ ಧರಣಿಗೆ ಮುಂದಾಗಿದ್ದಾರೆ. ಕಾಂಗ್ರೆಸ್ ಪಕ್ಷದ ವಿರುದ್ಧ ದಿಕ್ಕಾರ ಕೂಗುತ್ತಾ ಶ್ರೀ ರಾಮನ ಭಜನೆ ಹಾಡಿದ್ದಾರೆ.

ಅಹೋರಾತ್ರಿ ಧರಣಿ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ವಿಧಾನ ಸಭೆಯ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಅವರು, ಶಾಸಕರಿಗೆ ರಾತ್ರಿ ಊಟದ ವ್ಯವಸ್ಥೆ ಬಗ್ಗೆ ವಿಚಾರಿಸಿದರು. ಆದರೆ, ಶಾಸಕರು ಸರಕಾರದ ಊಟವನ್ನು ನಿರಾಕರಿಸಿದ್ದು ಹಗರಣದ ಹಣದಿಂದ ನಮಗೆ ಊಟದ ವ್ಯವಸ್ಥೆ ಬೇಡ. ರಾತ್ರಿ ಊಟ, ಹಾಸಿಗೆ ವ್ಯವಸ್ಥೆ ನಾವೇ ಮಾಡಿಕೊಳ್ಳುವುದಾಗಿ ಶಾಸಕರು ಹೇಳಿದರು. ನಂತರ ಜಯನಗರ ಶಾಸಕ ಸಿ. ಕೆ.ರಾಮಮೂರ್ತಿ ಅವರಿಗೆ ಶಾಸಕರಿಗೆ ಊಟ ಮತ್ತು ಹಾಸಿಗೆ ವ್ಯವಸ್ಥೆ ಮಾಡುವ ಹೊಣೆ ನೀಡಲಾಯಿತು.

ಒಟ್ಟಾರೆ ಬಿಜೆಪಿ ಹಾಗೂ ಜೆಡಿಎಸ್ಗಳು ಮೂಡ ಹಗರಣದ ಬಗ್ಗೆ ಇದೀಗ ಮತ್ತೊಂದು ವಿಧದ ಹೋರಾಟಕ್ಕೆ ಮುಂದಾಗಿದ್ದು ಇದು ಎಲ್ಲಿಗೆ ಹೋಗಿ ತಲುಪಲಿದೆ ಎನ್ನುವುದು ಕಾದು ನೋಡಬೇಕಾಗಿದೆ