ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶನಿವಾರ ಧಾರಾಕಾರ ಮಳೆಯಾಗಿದೆ. ಬೆಳಿಗ್ಗೆ 8.30ಕ್ಕೆ ಕೊನೆಗೊಂಡ 24 ತಾಸುಗಳಲ್ಲಿ ಬೆಳ್ತಂಗಡಿ ತಾಲ್ಲೂಕಿನ ಶಿರ್ತಾಡಿಯಲ್ಲಿ ಗರಿಷ್ಠ 18 ಸೆ.ಮೀ ಮಳೆ ದಾಖಲಾಗಿದೆ.

ಜಿಲ್ಲೆಯ ಹಲವೆಡೆ ಮರಗಳು ಉರುಳಿವೆ. ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ಧರ್ಮಸ್ಥಳ ಭಾಗದಲ್ಲಿ ತುಂಬಿ ಹರಿಯುತ್ತಿದೆ. ಕಿಂಡಿ ಅಣೆಕಟ್ಟೆಗಳಲ್ಲಿ ನೀರು ತುಂಬಿದ್ದು, ಹಲಗೆಗಳನ್ನು ಎತ್ತಲಾಗಿದೆ. ಮೂಲ್ಕಿ ತಾಲ್ಲೂಕಿನ ಕೆಂಪುಗುಡ್ಡೆಯಲ್ಲಿ ಕೃಷಿಭೂಮಿಗೆ ನೀರು ನುಗ್ಗಿದೆ. ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಉತ್ತಮ ಮಳೆ ಸುರಿದಿದೆ.

ಹವಾಮಾನ ಇಲಾಖೆ, ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ ನೀಡಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಮತ್ತಷ್ಟು ಚುರುಕಾಗಿದೆ. ಶನಿವಾರ ದಿನವಿಡೀ ಮಳೆ ಆಗಿದೆ. ಚಿಕ್ಕಮಗಳೂರು ನಗರ, ಮೂಡಿಗೆರೆ, ಕಳಸ, ಹೊರನಾಡು, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಬಾಳೆಹೊನ್ನೂರು, ಆಲ್ಲೂರು, ಕೊಟ್ಟಿಗೆಹಾರ, ಜಾವಳಿ, ಬಣಕಲ್‌, ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ, ಕೆಮ್ಮಣ್ಣುಗುಂಡಿ ಕಡೆ ಬಿರುಗಾಳಿ ಸಹಿತ ಸುರಿಯಿತು.

ಹಲವೆಡೆ ಮನೆಗಳ ಮೇಲೆ ಮರ ಉರುಳಿದೆ. ಮೂಡಿಗೆರೆ ತಾಲ್ಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತ್ರಿಪುರ ಗ್ರಾಮದ ಸುಶೀಲಾ ಅವರ ಕಾರ್ ಶೆಡ್‌ ಹಾಗೂ ಮನೆಯ ಮೇಲೆ ಮರಬಿದ್ದು ಕಾರು ಜಖಂಗೊಂಡಿದೆ. ಜಿಲ್ಲೆಯಾದ್ಯಂತ 100ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಉರುಳಿವೆ. ಉಡುಪಿ ಜಿಲ್ಲೆಯಲ್ಲೂ ಮಳೆಯಾಗಿದೆ.

ರಾಜ್ಯಕ್ಕೆ ವಾಡಿಕೆಗಿಂತ ಮೊದಲೇ, ಶನಿವಾರ (ಮೇ 24) ಮುಂಗಾರು ಪ್ರವೇಶ ಆಗಿದೆ. ಸಾಮಾನ್ಯವಾಗಿ ಜೂನ್ ಒಂದರಂದು ಮುಂಗಾರು ಆರಂಭವಾಗುತ್ತದೆ. ಈ ಬಾರಿ ಎಂಟು ದಿನ ಮೊದಲೇ ಕೇರಳದ ಮೂಲಕ ಪ್ರವೇಶಿಸಿದೆ.

ಇದು ಇತ್ತೀಚಿನ ವರ್ಷಗಳಲ್ಲಿ ಅಪರೂಪದ ಪ್ರಕ್ರಿಯೆಯಾಗಿದೆ. 2009ರಲ್ಲಿ ಜುಲೈ 23ರಂದು ರಾಜ್ಯಕ್ಕೆ ಮುಂಗಾರು ಪ್ರವೇಶಿಸಿತ್ತು. ಕಳೆದ ವರ್ಷ ಮೇ 30ರಂದು ಮತ್ತು 2023ರಲ್ಲಿ ಜೂ.8ರಂದು ಮುಂಗಾರು ಮಳೆ ಅರಂಭವಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಧಾರವಾಡ, ವಿಜಯನಗರ, ಬಳ್ಳಾರಿ, ವಿಜಯಪುರ, ಬೆಳಗಾವಿ ಜಿಲ್ಲೆಯಲ್ಲಿ ಶನಿವಾರ ಮಳೆಯ ರಭಸ ಕಡಿಮೆಯಾಗಿದೆ. ತುಂತುರು ಮಳೆಯಾಗಿದೆ. ದಿನವಿಡೀ ಮೋಡ ಕವಿದ ವಾತಾವರಣ ಕಂಡುಬಂದಿತು. ಬಿಟ್ಟು ಬಿಟ್ಟು ಮಳೆಯಾಗಿದೆ.