ಮೂಡಲಗಿ: ಸಮುದಾಯ ಭವನಗಳು ಜನ ಸಮುದಾಯದ ಪ್ರಗತಿಗಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳ ಕೇಂದ್ರಗಳಾಗಿ ರೂಪುಗೊಳ್ಳಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಹೇಳಿದರು.

ತಾಲೂಕಿನ ಭೈರನಟ್ಟಿ ಗ್ರಾಮದಲ್ಲಿ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿ ಯೋಜನೆಯಡಿ ರೂ. 10 ಲಕ್ಷ ವೆಚ್ಚದಲ್ಲಿ ಬಲಭೀಮ ತೋಟದ ಮಾರುತಿ ದೇವರ ದೇವಸ್ಥಾನದ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುವ ಪ್ರವೃತ್ತಿ ಕಡಿಮೆಯಾಗಿದೆ. ವೈಯಕ್ತಿಕ ಲಾಭ ಎಂಬ ಮನೋಭಾವ ಎಲ್ಲರಲ್ಲೂ ಮೂಡುತ್ತಿದೆ. ಈ ಮನೋಭಾವ ಬದಿಗಿರಿಸಿ ಸಮಾಜ ಕಟ್ಟುವ ಕೆಲಸಕ್ಕೆ ಕೈಜೋಡಿಸಬೇಕು ಎಂದರಲ್ಲದೇ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮದುವೆ ಸಮಾರಂಭಗಳಿಗೆ ಅದರಲ್ಲೂ ಬಡ ಕುಟುಂಬದ ಜನರಿಗೆ ಅನುಕೂಲವಾಗುವಂತೆ ಈ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತದೆ ಗ್ರಾಮದ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಬಿಸನಕೊಪ್ಪ ಗ್ರಾಮದ ಢವಳೇಶ್ವರ-ಬಿಸನಕೊಪ್ಪ ರಸ್ತೆಯ ಹನುಮಾನ ದೇವಸ್ಥಾನದ ಹತ್ತಿರ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಬಸ್ ಪ್ರಯಾಣಿಕರ ನೂತನ ತಂಗುದಾಣ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.
ಪ್ರಮುಖರಾದ ರಾಯಪ್ಪ ಬಾನಸಿ, ಈರಪ್ಪ ಡವಳೇಶ್ವರ, ರಾಮಪ್ಪ ಡೊಳ್ಳಿ, ಪದ್ಮಾನಂದ ಉಂದ್ರಿ, ರಾಮಣ್ಣ ಗಿರಡ್ಡಿ, ಗಿರೆಪ್ಪ ಗಿರಡ್ಡಿ, ತವನಪ್ಪ ಉಂದ್ರಿ, ಶ್ರೀಕಾಂತ ಉಂದ್ರಿ, ಲಕ್ಷ್ಮಣ ಡೊಳ್ಳಿ, ಪ್ರಕಾಶ ದರೂರ, ಬಸಪ್ಪ ಉಳ್ಳಾಗಡ್ಡಿ, ಹಣಮಂತ ರಡೆರಟ್ಟಿ, ಹಣಮಂತ ಬಳಿಗಾರ, ಅಶೋಕ ಬಟಕುರ್ಕಿ, ಸುರೇಶ ನಾಂವಿ, ನೀಲಪ್ಪ ರಡೇರಟ್ಟಿ ಈರಪ್ಪ ಡವಳೇಶ್ವರ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.