ಬೆಳ್ವೆ: ಪುರಾಣ ಪ್ರಸಿದ್ದ ಪಂಚ ಶಂಕರನಾರಾಯಣ ಕ್ಷೇತ್ರಗಳಲ್ಲಿ ಒಂದಾದ ಬೆಳ್ವೆ ಶಂಕರನಾರಾಯಣ ಕ್ಷೇತ್ರವು ಇತ್ತೀಚಿನ ವರ್ಷಗಳಲ್ಲಿ ಹಲವು ಅಭಿವೃದ್ಧಿ ಕಾರ್ಯಗಳೊಂದಿಗೆ ಭಕ್ತರ ಇಷ್ಟಾರ್ಥ ಸಿದ್ದಿಸುವ ಪವಿತ್ರ ಶ್ರದ್ಧಾ ಭಕ್ತಿಯ ಕೇಂದ್ರವಾಗಿ ಗುರುತಿಸಲ್ಪಟ್ಟಿದೆ. ಇದೀಗ ನೂತನ ಸ್ವಾಗತ ಗೋಪುರ ನಿರ್ಮಾಣಗೊಂಡು ಕ್ಷೇತ್ರದ ಮೆರಗು ಇನ್ನಷ್ಟು ಹೆಚ್ಚಲಿದೆ.

ಶ್ರೀ ಶಂಕರನಾರಾಯಣ ದೇವರಿಗೆ ಶ್ರೀ ಶಂಕರನಾರಾಯಣ ಹೋಳಿ ಕೂಡುಕಟ್ಟು ಸಮಿತಿ
ಸೆಟ್ಟೋಳಿ,ಅಬ್ಲಿಕಟ್ಟೆ, ಶ್ರೀ ಮಲ್ಲಿಕಾರ್ಜುನ ಯುವ ಸಂಘಟನೆ ಸೆಟ್ಟೋಳಿ ಅಬ್ಲಿಕಟ್ಟೆ ಇವರ ಕೊಡುಗೆಯಾಗಿ ಅಲ್ಬಾಡಿ ಶ್ಯಾಮಿಯಾನ್ ಶಂಕ್ರಣ್ಣ ಇವರ ಸ್ಮರಣಾರ್ಥ ದೇವರಿಗೆ ರೂ.30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಸ್ವಾಗತ ಗೋಪುರ ಸಮರ್ಪಣೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಎ.15 ನೇ ಸೋಮವಾರ ನಡೆಯಲಿದೆ.
ಎ.15 ರ ಬೆಳಗ್ಗೆ ಅಧಿವಾಸ ಹೋಮ,ಗಂ. 9.30 ರಿಂದ ಬ್ರಹ್ಮ ಕಲಶಾಭಿಷೇಕ, ಗಂ. 10 ಕ್ಕೆ ಬಸ್ರೂರು ಶ್ರೀಮಹಾಲಿಂಗೇಶ್ವರ ದೇವಳದ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆಯವರಿಂದ ಕ್ಷೇತ್ರದ ತಂತ್ರಿಗಳು,ಪವಿತ್ರಪಾಣಿ,ಅರ್ಚಕ ವರ್ಗ,ಆಡಳಿತ ಮಂಡಳಿ ಮತ್ತು ಗಣ್ಯರು,ಸ್ಥಳ
ದಾನಿಗಳು,ಊರ ಪರವೂರ ಭಕ್ತಾದಿಗಳ ಉಪಸ್ಥಿತಿಯಲ್ಲಿ ಸ್ವಾಗತ ಗೋಪುರ ಸಮರ್ಪಣೆ, ಗಂ 11 ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ,ಸನ್ಮಾನ ಕಾರ್ಯಕ್ರಮ, ಮಧ್ಯಾಹ್ನ ಅನ್ನಸಂತರ್ಪಣೆ,ರಾತ್ರಿ ಕಿರು ರಂಗಪೂಜೆ ನಡೆಯಲಿದೆ.