ಕಾರವಾರ : ಉತ್ತರ ಕನ್ನಡ  ಜಿಲ್ಲಾಡಳಿತ ಮತ್ತು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯಿಂದ ಮಾರ್ಚ್ 8 ರಂದು ನಡೆಯುವ ಮಹಾಶಿವರಾತ್ರಿ ಆಚರಣೆಯನ್ನು ಮುರುಡೇಶ್ವರದಲ್ಲಿ ಅತ್ಯಂತ ಶ್ರದ್ಧಾ ಮತ್ತು ಭಕ್ತ್ತಿ ಭಾವದಿಂದ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.
ಮಾರ್ಚ್ 8 ರಂದು ರಾತ್ರಿ 8 ಗಂಟೆಯಿಂದ ಮರುದಿನ ಬೆಳಗ್ಗೆ 5 ಗಂಟೆಯವರೆಗೆ ಮಹಾಶಿವರಾತ್ರಿ ಜಾಗರಣೆ ಪ್ರಯುಕ್ತ ಮುರುಡೇಶ್ವರದ ಕಡಲ ಕಿನಾರೆ ಬಳಿ, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಕಲಾವಿದರಿಂದ ಶಿವನಿಗೆ ಸಂಬಂಧಿಸಿದ ವಿವಿಧ ಭಕ್ತಿಪೂರ್ವಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಈ ಕಾರ್ಯಕ್ರಮಕ್ಕೆ ವಿಶೇಷವಾಗಿ ಭರತನಾಟ್ಯ, ಕಥಕ್ಕಳಿ, ಒಡಿಸ್ಸಿ ನೃತ್ಯಗಾರರು ಆಗಮಿಸಲಿದ್ದು, ಶಿವತಾಂಡವ, ಶಿವ ಪುರಾಣ, ಶಿವಲೀಲೆ ನೃತ್ಯ ಕಾರ್ಯಕ್ರಮಗಳು ಹಾಗೂ ಶಿವನಿಗೆ ಸಂಬಂಧಿಸಿದ ಭಕ್ತಿ ಗೀತೆಗಳು ಹಾಗೂ ವಾದ್ಯ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಮಾರ್ಚ್ 8 ರಂದು ನಡೆಯುವ ಈ ಅಭೂತಪೂರ್ವ ಭಕ್ತಿ ಪೂರ್ವಕವಾದ ಕಾರ್ಯಕ್ರಮಗಳಿಗೆ ಜಿಲ್ಲೆಯ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ, ಮಹಾಶಿವರಾತ್ರಿಯ ಜಾಗರಣೆಯ ಅರ್ಥಪೂರ್ಣವಾದ ಈ ಭಕ್ತಿ ಭಾವದಲ್ಲಿ ಪರಶಿವನ ಧ್ಯಾನದಲ್ಲಿ ತಲ್ಲೀನರಾಗುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

ಕಲಾವಿದರಿಗೆ ಆಹ್ವಾನ
ಮುರುಡೇಶ್ವರದಲ್ಲಿ ನಡೆಯುವ ಶಿವರಾತ್ರಿ ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಇಚ್ಛಿಸುವ ಕಲಾವಿದರು ಮತ್ತು ಕಲಾತಂಡಗಳು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜಯಂತ್ ಅವರನ್ನು ಮೊ.ಸಂ. 85536 29978 ರಲ್ಲಿ ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಮಾನಕರ್ ತಿಳಿಸಿದ್ದಾರೆ.