ಮಂಗಳೂರು : ಕಂಬಳ ಕ್ರೀಡೆ ದೇಶಕ್ಕೆ ಹಿರಿಮೆಯಾಗಿದೆ. ವಿಶ್ವಮಟ್ಟದಲ್ಲಿ ಈ ಕ್ರೀಡೆ ಗುರುತಿಸಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಮಂಗಳೂರಿನ ವಾಮಂಜೂರಿನಲ್ಲಿ ನಡೆದ ತುಳುನಾಡಿನ ಕಂಬಳ ತಿರುವೈಲೋತ್ಸವ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾತುಗಳು:

ನಮ್ಮ ಸಂಸ್ಕೃತಿ ನಮ್ಮ ದೇಶದ ಆಸ್ತಿ. ಈ ಆಸ್ತಿಯನ್ನು ಕಾಪಾಡಿಕೊಂಡು ಬಂದಿರುವ ನಿಮಗೆ ಈಶ್ವರ ಇನ್ನಷ್ಟು ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಇದು ತುಳುನಾಡಿನ ಪವಿತ್ರವಾದ ಭೂಮಿ. ಸರ್ವಜನಾಂಗದ ಶಾಂತಿಯ ತೋಟವಾಗಿ ಈ ಭೂಮಿಗೆ ವಿಶೇಷ ಶಕ್ತಿ ಇದೆ. ಇದು ವಿದ್ಯಾ ಕ್ಷೇತ್ರ, ಆರ್ಥಿಕ ಕ್ಷೇತ್ರ, ಧಾರ್ಮಿಕ ಕ್ಷೇತ್ರ, ಎಲ್ಲಾ ರಂಗದಲ್ಲೂ ಉದ್ಯೋಗ ಸೃಷ್ಟಿಸುವ ಪವಿತ್ರ ಭೂಮಿ.

ಈ ಭೂಮಿಯಲ್ಲಿ ನಮ್ಮ ನಾಡಿನ ಕ್ರೀಡೆಗಳನ್ನು ಉಳಿಸಿಕೊಂಡು ಬೆಳೆಸಿಕೊಂಡು ಬರಲಾಗಿದೆ. ಈ ಭಾಷೆ, ಸಂಸ್ಕೃತಿ ರಾಜ್ಯಕ್ಕೆ ಮೆರುಗು ನೀಡಿದೆ. ನಾನು ಇಂದು ಕಂಬಳ ವೀಕ್ಷಣೆ ಮಾಡಿ, ಇದರ ಅಭಿಮಾನಗಳಿಗೆ, ಆಯೋಜಕರು, ಪ್ರೋತ್ಸಾಹ ನೀಡುವವರಿಗೆ ಶುಭ ಹಾರೈಸಿ ನಿಮ್ಮ ಜತೆ ಸರ್ಕಾರ ಇದೆ ಎಂದು ಹೇಳಲು ಇಲ್ಲಿಗೆ ಬಂದಿದ್ದೇನೆ.

ಈ ವರ್ಷ ನಾನು ಉಪಮುಖ್ಯಮಂತ್ರಿಯಾಗಿ ಬೆಂಗಳೂರಿನ ಜವಾಬ್ದಾರಿ ವಹಿಸಿಕೊಂಡ ನಂತರ ಇದನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಈ ಪ್ರೋತ್ಸಾಹವನ್ನು ನಾವು ಸದಾ ಮುಂದುವರಿಸುತ್ತೇವೆ. ಈ ಕಂಬಳ ಕ್ರೀಡೆ ದೇಶಕ್ಕೆ ಹಿರಿಮೆಯಾಗಿದೆ. ವಿಶ್ವಮಟ್ಟದಲ್ಲಿ ಈ ಕ್ರೀಡೆ ಗುರುತಿಸಿಕೊಳ್ಳಬೇಕು ಎಂದು ನಾವು ಬಯಸುತ್ತಿದ್ದು, ಇದಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ನೀಡಲು ನಾನು ಬದ್ಧ.

ನಿಮ್ಮ ಸರ್ಕಾರ ನಿಮ್ಮ ಜತೆ ಇರಲಿದೆ. ಇದನ್ನು ಉಳಿಸಿ ಬೆಳೆಸಿ. ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಎಲ್ಲಾ ಕ್ರೀಡಾಪಟುಗಳಿಗೆ ಶುಭಕೋರುತ್ತೇನೆ.