ಬೆಳಗಾವಿ :
ಬರಹ ಒಂದು ತಪಸ್ಸು. ಸಾಕಷ್ಟು ಅಧ್ಯಯನ ಮತ್ತು ಅನುಭವದಿಂದ ಮೌಲ್ಯಯುತ ಕೃತಿ ಹೊರಬರಲು ಸಾಧ್ಯ ಮುಖ್ಯವಾಗಿ ಬರೆದದ್ದನ್ನು ಓದುವವರು ಬೇಕು ಓದಿ ಪ್ರತಿಕ್ರಿಯಿಸಿದಾಗ ಲೇಖಕನ ಶ್ರಮ ಸಾರ್ಥಕವಾಗಿತ್ತದೆ ಎಂದು ಲೇಖಕಿ ಡಾ. ಗುರುದೇವಿ ಹುಲೆಪ್ಪನವರಮಠ ಹೇಳಿದರು. ಗುರುವಾರ ಬೆಳಗಾವಿಯ ರೇಷ್ಮೆ ಇಲಾಖೆಯ ನಿವೃತ್ತ ನೌಕರರ ಸಂಘ ಏರ್ಪಡಿಸಿದ್ದ ಸರಸ್ವತಿ ಭೋಸಲೆಯವರ ಮೂರು ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ನಾವು ಸದಭಿರುಚಿಯ ಹವ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸದಾ ಕ್ರಿಯಾಶೀಲರಾಗಿದ್ದು ಬದುಕನ್ನು ಅನುಭವಿಸಬೇಕು. ಅದರಲ್ಲೂ ನೌಕರರಾದವರು ನಿವೃತ್ತಿಯ ನಂತರ ಕ್ರೀಡೆ ಓದು ಬರಹ ಮನರಂಜನೆಯಂತಹ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಂಡು ಜೀವನೋತ್ಸಾಹದಲ್ಲಿರಬೇಕು. ಸರಸ್ವತಿ ಭೋಸಲೆಯವರು ನಿವೃತ್ತಿಯ ನಂತರ ಬರಹದಲ್ಲಿ ತೊಡಗಿಕೊಂಡು ಉತ್ತಮವಾದ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡು ಮಾದರಿಯಾಗಿದ್ದಾರೆ. ಮುಖ್ಯವಾಗಿ ರೇಷ್ಮೆ ಇಲಾಖೆ ನಿವೃತ್ತ ನೌಕರರ ಸಂಘ ಇಂತಹ ಅರ್ಥಪೂರ್ಣ ಕಾರ್ಯಕ್ರಮ ಏರ್ಪಡಿಸಿ ಮಾದರಿಯಾಗಿದೆ ಎಂದರು.

ಡಾ.ಆನಂದ ಪಾಟೀಲ, ಡಾ. ನೀತಾರಾವ್ ಕೃತಿಗಳ ಪರಿಚಯ ಮಾಡಿಕೊಟ್ಟರು.

ನಿವೃತ್ತ ಅಧಿಕಾರಿ
ಪಿ.ಎ.ಮಗದುಮ್ಮ ಅಧ್ಯಕ್ಷತೆ ವಹಿಸಿ ಇಲಾಖೆಯ ಸೇವೆಯಲ್ಲಿ ನಿರತ ನೌಕರರಾಗಿರಬಹುದು. ನಿವೃತ್ತ ನೌಕರರಾಗಿರಬಹುದು. ಅವರ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಂಘ ವೇದಿಕೆ ಒದಗಿಸಿ ಸಹಾಯ ಮಾಡಲು
ಸದಾ ಸಿದ್ದವಿದೆಯೆಂದು ಹೇಳಿದರು.

ವಿಶ್ರಾಂತ ಹಿರಿಯ ಅಧಿಕಾರಿ ಎನ್.ಬಿ.ಶೇಖ,ಎಂ.ಎಂ. ಖಾಜಿ ಮತ್ತು ಟಿ.ಎಸ್.ಹುದ್ದಾರ ಉಪಸ್ಥಿತರಿದ್ದರು. ಲೇಖಕಿ ಸರಸ್ವತಿ ಭೋಸಲೆ ಮತ್ತು ಬಾಲ ವಿಕಾಸ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಸವರಾಜ ಗಾರ್ಗಿಯವರನ್ನು ಸಂಘದ ಪರವಾಗಿ ಗೌರವಿಸಲಾಯಿತು.

ಮುತ್ತುರಾಜ ಉಪ್ಪಾರ ಸ್ವಾಗತಿಸಿದರು ಕಾರ್ಯದರ್ಶಿ ಕಾಳಪ್ಪ ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ವಿ. ಪಾಟೀಲ ವಂದಿಸಿದರು. ಎಸ್. ಡಿ.ಹುದ್ದಾರ ನಿರೂಪಿಸಿದರು.