ಮೈಸೂರು: ಎರಡು ಬಾರಿ ದಸರಾ ಮಹೋತ್ಸವದಲ್ಲಿ
ಪಾಲ್ಗೊಂಡಿದ್ದ 38 ವರ್ಷದ ‘ಅಶ್ವತ್ಥಾಮ’ ಆನೆಯು ಸೋಲಾರ್ ಬೇಲಿಯ ವಿದ್ಯುತ್ ಪ್ರವಹಿಸಿ ಮಂಗಳವಾರ ಮೃತಪಟ್ಟಿದೆ.

ಹುಣಸೂರು- ಪಿರಿಯಾಪಟ್ಟಣ ತಾಲ್ಲೂಕಿನ ಗಡಿ ಭಾಗದ ನಾಗರಹೊಳೆ ಹುಲಿಸಂರಕ್ಷಿತ ಪ್ರದೇಶ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದ ಆನೆಯು ಆಹಾರ ಅರಸಿ ಕಾಡಿಗೆ ತೆರಳಿತ್ತು.

ಸೋಲಾ‌ರ್ ಬೇಲಿ ಮೇಲೆ ವಿದ್ಯುತ್ ತಂತಿಯು ಬಿದ್ದಿದ್ದರಿಂದ ವಿದ್ಯುತ್ ಆಘಾತದಿಂದ ಅಶ್ವತ್ಥಾಮ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.

2022ರ ದಸರೆಯಲ್ಲಿ ಪಾಲ್ಗೊಂಡು ಗಮನ ಸೆಳೆದಿತ್ತು. ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿರಲಿಲ್ಲ.

2017ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ಅಶ್ವತ್ಥಾಮನನ್ನು ಸೆರೆ ಹಿಡಿಯಲಾಗಿತ್ತು. ಶಾಂತ ಹಾಗೂ ಗಾಂಭೀರ್ಯ ಸ್ವಭಾವಕ್ಕೆ ಹೆಸರಾಗಿದ್ದ ಅದನ್ನು ನಾಲ್ಕು ವರ್ಷದಲ್ಲಿಯೇ 2021ರ ದಸರೆಗೆ ಕರೆತರಲಾಗಿತ್ತು. ಅದಕ್ಕೆ ನಡಿಗೆ ತಾಲೀಮು ಸೇರಿದಂತೆ ವಿವಿಧ ತಾಲೀಮನ್ನು ನೀಡಲಾಗಿತ್ತು.