ಮೂಡಲಗಿ: ಮುಗಳಖೋಡ ಕೆನಾಲ್ ಹತ್ತಿರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಜನ ದುರ್ಮರಣಕ್ಕೆ ಒಳಗಾಗಿದ್ದು ಸಂಬಂಧಿಸಿದ ಕುಟುಂಬದವರಿಗೆ ಸರ್ಕಾರದಿಂದ ಸಹಾಯಧನ ಒದಗಿಸಲು ಒತ್ತಾಯಿಸಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸರ್ಕಾರದಿಂದ ಪರಿಹಾರ ಧನ ಒದಗಿಸಬೇಕಾಗಿ ಒತ್ತಾಯಿಸಿದರು.
ಫೆ-23 ರಂದು ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಮುಗಳಖೋಡ ಕೆನಾಲ್ ಹತ್ತಿರ ಕಾರು ಹಾಗೂ ಎರಡು ದ್ವಿಚಕ್ರ ವಾಹನಗಳ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಮೂಡಲಗಿ ತಾಲೂಕಿನ ಗುರ್ಲಾಪೂರ ಗ್ರಾಮದ ಒಂದೇ ಕುಟುಂಬ ಮೂವರು, ಗೋಕಾಕ ತಾಲೂಕಿನ ದುರದುಂಡಿ ಗ್ರಾಮದ ಓರ್ವ ಬೈಕ್ ಸವಾರ, ರಾಯಬಾಗ ತಾಲೂಕಿನ ನಿಪನ್ಯಾಳ ಗ್ರಾಮದ ಓರ್ವ ಹಾಗೂ ಮುಗಳಖೋಡ ಪಟ್ಟಣದ ಓರ್ವ ಬೈಕ್ ಸವಾರ ಸೇರಿದಂತೆ ಒಟ್ಟು ಈ ಘಟನೆಯಲ್ಲಿ ಆರು ಜನ ಮೃತಪಟ್ಟಿದ್ದು, ಇಂತಹ ಭೀಕರ ಅಪಘಾತಗಳಾದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮೃತರ ಕುಟುಂಬಸ್ಥರಿಗೆ ಈ ಹಿಂದೆ ಪರಿಹಾರಧನ ಘೋಷಿಸಿದ್ದಾರೆ. ಆದರೆ ಜಿಲ್ಲೆಯಲ್ಲಿ ನಡೆದ ಇಷ್ಟು ದೊಡ್ಡ ಅಪಘಾತದಲ್ಲಿ ಇವರೆಗೂ ಸರ್ಕಾರ ಯಾವುದೇ ನೆರವು ಘೋಷಿಸಿರುವುದಿಲ್ಲ ಹಾಗೂ ಯಾವುದೇ ಅಧಿಕಾರಿಗಳು ಕೂಡಾ ಸ್ಥಳಕ್ಕೆ, ಮೃತರ ಕುಟುಂಬಕ್ಕೆ ಭೇಟಿಯಾಗುವ ಕನಿಷ್ಠ ಸೌಜನ್ಯವನ್ನು ತೋರಿಲ್ಲ.
ಹೀಗಾಗಿ ಮೃತರ ಕುಟುಂಟಗಳಿಗೆ ಭೇಟಿ ನೀಡಿದ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ನೀಡುವ ಮೂಲಕ ರಾಜ್ಯ ಸರ್ಕಾರದಿಂದ ಪರಿಹಾರ ಧನ ಒದಗಿಸಬೇಕಾಗಿ ಒತ್ತಾಯಿಸಿದರು ಮತ್ತು ಗುರ್ಲಾಪೂರ ಗ್ರಾಮದ ಮರಾಠೆ ಕುಟುಂಬ ಹಾಗೂ ದುರದುಂಡಿ ಗ್ರಾಮದ ಮಾಳ್ಯಾಗೋಳ ಕುಟುಂಬ ಸದಸ್ಯರಿಗೆ ಭೇಟಿಯಾಗಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಅಶೋಕ ಗಾಣಿಗೇರ, ಶಿವಬಸು ಇಟ್ನಾಳ, ಶ್ರೀಶೈಲ ಮುಗಳಖೋಡ, ಆನಂದ ತಪಾಲ, ಹಾವಡೆಪ್ಪ ದೇವರಮನಿ, ಕಾಶೆಪ್ಪ ಅಂಬಿಗೇರ, ಅಶೋಕ ಕೌಜಲಗಿ, ಶ್ರೀಶೈಲ ಕೌಜಲಗಿ, ದುಂಡಪ್ಪ ನಿಂಗಣ್ಣವರ, ಮಾರುತಿ ಕೊಳವಿ, ರಾಮ ಸಣ್ಣಲಗಮಣ್ಣವರ, ರಾಮಪ್ಪ ಬೆಟಗೇರಿ, ಗಂಗೂಲಿ ಅಂತರಗಟ್ಟಿ, ಧರೆಪ್ಪ ಅಂತರಗಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.