ಬೆಳಗಾವಿ :
ಕಿತ್ತೂರು ರಾಣಿ ಚನ್ನಮ್ಮ 1824ರಲ್ಲಿ ಬ್ರೀಟಿಷರ್ ವಿರುದ್ದ ಮೊದಲ ಯುದ್ದ ಗೆದ್ದು 2024ಕ್ಕೆ 200ನೇ ವರ್ಷದ ವಿಜಯೋತ್ಸವವನ್ನು ರಾಷ್ಟ್ರೀಯ ಉತ್ಸವವಾಗಿ ಆಚರಿಸಬೇಕು ಮತ್ತು 200ನೇ ವಿಜಯೋತ್ಸವದ ಸವಿನೆನಪಿಗಾಗಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಬೇಕು. ಜೊತೆಗೆ ಚನ್ನಮ್ಮಾಜಿ ಸ್ಮರಣಾರ್ಥ ನಾಣ್ಯ ಮತ್ತು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡುವಂತೆ ಸಂಸತ್ತಿನ ಚಳಿಗಾಲದ ಅಧಿವೇಶನದ ಶೂನ್ಯ ವೇಳೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ದೇಶದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಲಕ್ಷಾಂತರ ಜನ ಭಾಗವಹಿಸಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಅಂತಹ ಹೋರಾಟಗಾರರಲ್ಲಿ ಕರ್ನಾಟಕದ ಮಹಿಳೆಯೋರ್ವಳು 1824ರಲ್ಲೇ ಸೂರ್ಯ ಮುಳುಗದ ಬ್ರಿಟಿಷ್ ಸಾಮ್ರಾಜ್ಯದ ಎದುರು ಯುದ್ದ ನಡೆಸಿ ಬ್ರೀಟಿಷ ಅಧಿಕಾರಿ ಥ್ಯಾಕರೆಯ ಹತ್ಯೆಗೈಯುವ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿ ಚುಕ್ಕಿಯಾಗಿ ಗುರುತಿಸಲ್ಪಟ್ಟಿದ್ದಾರೆ. ಅವರೆ ನಮ್ಮ ಕನ್ನಡ ನಾಡಿನ ವೀರ ವನಿತೆ ಕಿತ್ತೂರು ರಾಣಿ ಚನ್ನಮ್ಮ. ಅವರೇ ಸ್ವಾತಂತ್ರ್ಯ ಹೋರಾಟದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ ಎಂದರು.

ಚನ್ನಮ್ಮಾಜೀ ಕರ್ನಾಟಕದ ಬೆಳಗಾವಿ ಜಿಲ್ಲೆಯ ಕಾಕತಿಯಲ್ಲಿ ಜನ್ಮತಾಳಿದರು. ಚೆನ್ನಮ್ಮ, ಕಿತ್ತೂರಿನ ರಾಜ ಮಲ್ಲಸರ್ಜ ದೇಸಾಯಿಯನ್ನು ಮದುವೆಯಾಗಿದರು. ಪತಿಯ ಮರಣಾನಂತರ ಸಂಸ್ಥಾನದ ಪಟ್ಟಕ್ಕೆ ದತ್ತಕ ಪುತ್ರನನ್ನು ತೆಗೆದುಕೊಳ್ಳಲು ವಿರೋಧಿಸಿದ ಬ್ರೀಟಿಷರ್ ವಿರುದ್ಧ ಯುದ್ದ ಸಾರಿದ ವೀರವನಿತೆ ಅವಳು. ಈ ಯುದ್ದದ ಸಮಯದಲ್ಲಿ ರಾಣಿ ಚನ್ನಮ್ಮನ ಸೈನಿಕರು ಬ್ರಿಟಿಷ್ ಅಧಿಕಾರಿಗಳು ಮತ್ತು ಅವರ ಕುಟುಂಬದವರನ್ನು ಒತ್ತೆಯಾಳಾಗಿ ಹಿಡಿದಿಟ್ಟುಕೊಂಡಿದ್ದು ಇತಿಹಾಸವೇ ಸರಿ. ತದನಂತರ ಬ್ರಿಟಿಷ್ರೊಂದಿಗಿನ ಮಾತುಕತೆಯ ಫಲವಾಗಿ ಆ ಅಧಿಕಾರಿಗಳನ್ನು ಹಾಗೂ ಅವರ ಕುಟುಂಬಗಳನ್ನು ಅತ್ಯಂತ ಗೌರವಯುತವಾಗಿ ಬಿಡುಗಡೆ ಮಾಡುವ ಮೂಲಕ ಕಿತ್ತೂರು ಸಂಸ್ಥಾನದ ಘನತೆಯನ್ನು ಎತ್ತಿಹಿಡಿದ್ದಿದ್ದಾರೆ ಎಂದು ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಯುದ್ಧದಲ್ಲಿ ಸೋಲಾದ ಹಿನ್ನಲೆಯಲ್ಲಿ ಆ ಸೋಲಿನ ಸೇಡು ತೀರಿಸಿಕೊಳ್ಳಲು ಬ್ರಿಟಿಷರು ಕಿತ್ತೂರಿನ ಮೇಲೆ ಪದೇ ಪದೇ ದಾಳಿ ಮಾಡುತ್ತಲೇ ಇದ್ದರು. ಒಂದು ಬಾರಿ 12 ದಿನಗಳ ಕಾಲ ಚನ್ನಮ್ಮ ಮತ್ತು ಕಿತ್ತೂರಿನ ಸೈನ್ಯ ತಮ್ಮ ಕೋಟೆಯನ್ನು ರಕ್ಷಿಸಲು ಬ್ರಿಟಿಷರೊಂದಿಗೆ ನಿರಂತರವಾಗಿ ಹೋರಾಡಿದರು. ಈ ಹೋರಾಟದಲ್ಲಿ ಬ್ರಿಟಿಷ್ ಸೈನ್ಯವು ರಾಣಿ ಚನ್ನಮ್ಮನನ್ನು ಕುತಂತ್ರದಿಂದ ಬಂಧಿಸುವಲ್ಲಿ ಯಶಸ್ವಿಯಾಯಿತು. ರಾಣಿ ಚನ್ನಮ್ಮಾಜಿ ಬ್ರಿಟಿಷರ್ ವಿರುದ್ದದ ಮೊದಲನೆಯ ಯುದ್ದದಲ್ಲಿ ಗೆದ್ದು ಮತ್ತೊಂದು ಬಾರಿ ಯುದ್ದದಲ್ಲಿ ಗೆಲ್ಲಲು ಸಾಧ್ಯವಾಗದಿದ್ದರು ಕೂಡಾ ಬ್ರಿಟಿಷರ ವಿರುದ್ದ ಹೋರಾಡಲು ಹೆದರುತ್ತಿದ್ದ ಆ ಕಾಲದಲ್ಲಿ ಒಬ್ಬ ಮಹಿಳೆಯೋರ್ವಳು ದಿಟ್ಟತನದಿಂದ ಹೋರಾಟ ಮಾಡಿರುವುದು ನಮ್ಮ ನಾಡಿನ ಸ್ವಾಂತತ್ರ್ಯ ಹೋರಾಟಗಾರರಿಗೆ ಪ್ರೇರಣೆಯಾಯಿತು ಎಂದು ಮಾತನಾಡಿದ್ದಾರೆ.

ಸ್ವಾತಂತ್ರ್ಯಾ ನಂತರ ಅಂದಿನ ಮುಖ್ಯಮಂತ್ರಿ ಬಂಗಾರಪ್ಪನವರ ಸರ್ಕಾರದ ಅವಧಿಯಲ್ಲಿ ಈ ಇತಿಹಾಸವನ್ನು ಯಾರು ಮರೆಯಬಾರದು ಎಂಬ ಕಾರಣದಿಂದ ಕಿತ್ತೂರು ಉತ್ಸವವನ್ನು ಪ್ರಾರಂಭಿಸಿದರು. ಮೊದಲು ಕಿತ್ತೂರಿಗೆ ಸೀಮಿತವಾಗಿದ್ದ ಉತ್ಸವ ನಂತರ ತಾಲೂಕಾ ಮಟ್ಟಕ್ಕೆ ವಿಸ್ತರಣೆಯಾಗಿ, ಆ ಮೇಲೆ ಜಿಲ್ಲಾಮಟ್ಟದ ಉತ್ಸವವಾಗಿ ಬೆಳೆದುನಿಂತಿತು. ಈಗ ಅದು ರಾಜ್ಯ ಮಟ್ಟದ ಉತ್ಸವವಾಗಿ ಕನಾಟಕದಲ್ಲಿ ಮನೆ ಮಾತಾಗಿದೆ. ಚನ್ನಮ್ಮನ ಗತವೈಭವದ ಇತಿಹಾಸಕ್ಕೆ ಬೆಳಕು ಚೆಲ್ಲುವಂತಹ ಮತ್ತು ಕೋಟೆಯನ್ನು ಪುನರ್ ಅಭಿವೃದ್ದಿ ಮಾಡುವಂತ ಕೆಲಸಗಳು ನಡೆಯುತ್ತಿವೆ. 2007ರಲ್ಲಿ ಅಂದಿನ ರಾಷ್ಟ್ರಪತಿ ಶ್ರೀಮತಿ ಪ್ರತಿಭಾ ಪಾಟೀಲ್ ಅವರು ಸಂಸತ್ತಿನ ಆವರಣದಲ್ಲಿ ರಾಣಿ ಚೆನ್ನಮ್ಮನ ಪ್ರತಿಮೆಯನ್ನು ಅನಾವರಣಗೊಳಿಸುವ ಮೂಲಕ ಕಿತ್ತೂರು ರಾಣಿ ಚೆನ್ನಮ್ಮನಿಗೆ ಗೌರವ ಸಲ್ಲಿಸಿದ್ದಾರೆ. ಆ ಮೂಲಕ ದೇಶದ ಸ್ವಾತಂತ್ರ ಹೋರಾಟಕ್ಕಾಗಿ ತ್ಯಾಗ, ಬಲಿದಾನಗೈದ ಮಹನೀಯರಿಗೆ ಗೌರವ ನೀಡಿದಂತಾಗುತ್ತದೆ. ಈ ಕುರಿತು ಅಗತ್ಯಕ್ರಮ ಜಾರಿಗೊಳಿಸಬೇಕಾಗಿ ಕರ್ನಾಟಕದ ಜನತೆಯ ಪರವಾಗಿ ಅತ್ಯಂತ ವಿನಮ್ರವಾಗಿ ಸರ್ಕಾರವನ್ನು ಒತ್ತಾಯಿಸಿದರು.