ನವದೆಹಲಿ: ಕರ್ನಾಟಕದಲ್ಲಿ ಪ್ರಾಕೃತಿಕ ವಿಕೋಪದಿಂದ ಒಂಬತ್ತು ಮಂದಿ ಸಾವಿಗೀಡಾಗಿದ್ದರೂ, ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ನಿರ್ಲಕ್ಷಿಸಿದೆ ಎಂದು ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಎಚ್‌ಡಿ ದೇವೇಗೌಡ ಬುಧವಾರ ರಾಜ್ಯಸಭೆಯಲ್ಲಿ ಕಿಡಿಕಾರಿದರು.

ರಾಜ್ಯ ಸರ್ಕಾರ ನಿರಾಸಕ್ತಿ ತೋರುತ್ತಿದೆ ಎಂದು ಆರೋಪಿಸಿದ ಮಾಜಿ ಪ್ರಧಾನಿ, ಗೌಡರ ಪುತ್ರ ಕೇಂದ್ರ ಉಕ್ಕು ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ ನಂತರವೇ ಕೇಂದ್ರ ಸಚಿವ ಕುಮಾರಸ್ವಾಮಿ ಭೇಟಿ ನೀಡಿದ ಬಳಿಕವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ದುರ್ಘಟನೆ ಸಂಭವಿಸಿ ಜನರು ಸತ್ತರೂ ಆರು ದಿನಗಳ ಕಾಲ ರಾಜ್ಯ ಸರ್ಕಾರದ ಸಚಿವರು ಸ್ಥಳಕ್ಕೆ ಭೇಟಿ ನೀಡಲಿಲ್ಲ. ಇಡೀ ಬೆಟ್ಟವೇ ಜಾರಿತ್ತು. ನಾನು ರಾಜಕೀಯ ವಿಷಯಗಳ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಆದರೆ ಕೇಂದ್ರ ಉಕ್ಕು ಸಚಿವರು ಸ್ಥಳಕ್ಕೆ ಭೇಟಿ ನೀಡಿದ ನಂತರವೇ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ದಳ ಮತ್ತು ಮಿಲಿಟರಿ ಇತ್ಯಾದಿಗಳನ್ನು ಕಳುಹಿಸಲಾಗಿದೆ ಎಂದು ದೇವೇಗೌಡ ಹೇಳಿದರು.

ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷದ ಸದಸ್ಯರು ಗೌಡರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದವು. ದೇವೇಗೌಡರು ರಾಜಕೀಯ ಭಾಷಣ ಮಾಡಿದ್ದಾರೆ, ಅವರು ವಿಶೇಷ ಉಲ್ಲೇಖ ಮಾಡಿದ್ದರಿಂದ ಭಾಷಣ ಮಾಡುವಂತಿಲ್ಲ ಎಂದು ಹೇಳಿದರು.ಇದಕ್ಕೆ ಆಕ್ಷೇಪಿಸಿದ ಡಿಎಂಕೆಯ ತಿರುಚಿ ಶಿವ, ವಿಶೇಷ ಉಲ್ಲೇಖವನ್ನು ಮಾಡುವಾಗ, ಲಿಖಿತವಾಗಿದ್ದುದ್ದನ್ನು ಮಾತ್ರ ಹೇಳಲು ಅನುಮತಿಸಲಾಗಿದೆ, ಸದಸ್ಯರು “ಸ್ಕ್ರಿಪ್ಟ್‌ಗೆ ಬದ್ಧವಾಗಿರಬೇಕು” ಮತ್ತು ಯಾದೃಚ್ಛಿಕ ಭಾಷಣ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಅವರು ನಿಯಮ 180 ಅನ್ನು ಉಲ್ಲೇಖಿಸಿದರು ಮತ್ತು ಕೇವಲ 250 ಪದಗಳನ್ನು ಓದಲು ಮಾತ್ರ ಅನುಮತಿಸಲಾಗಿದೆ ಎಂದು ಹೇಳಿದರು.
ಜುಲೈ 16 ರಂದು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರೂರು ಗ್ರಾಮದಲ್ಲಿ ಭಾರೀ ಭೂಕುಸಿತ ಸಂಭವಿಸಿದೆ. ಇದುವರೆಗೆ ಎಂಟು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಕೆಲವರು ನಾಪತ್ತೆಯಾಗಿದ್ದಾರೆ. ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ.