ಬೆಂಗಳೂರು: ನಾಡಿನ ಖ್ಯಾತ ಜ್ಯೋತಿಷಿ ಪ್ರಕಾಶ ಅಮ್ಮಣ್ಣಾಯ ಮತ್ತೆ ಲೋಕಸಭಾ ಚುನಾವಣೆ ಕುರಿತು ಭವಿಷ್ಯ ನಡೆದಿದ್ದಾರೆ. ಈ ಹಿಂದೆ ಅವರು ನುಡಿದಿದ್ದ ಹಲವಾರು ಭವಿಷ್ಯಗಳು ನಿಜವಾಗಿದ್ದವು. ಇದೀಗ ಲೋಕಸಭಾ ಚುನಾವಣೆ ಎದುರಲ್ಲೇ ಮತ್ತೆ ಅವರು ಭವಿಷ್ಯ ನುಡಿದಿದ್ದು ಭಾರೀ ಕುತೂಹಲ ಕೆರಳಿಸುವಂತೆ ಮಾಡಿದೆ.

ದೇಶಾದ್ಯಂತ ಲೋಕಸಭಾ ಚುನಾವಣೆಯ ಬಿಸಿ ಏರುತ್ತಿರುವಾಗಲೇ, ನಾಡಿನ ಖ್ಯಾತ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಜ್ಯೋತಿರ್ವಿಜ್ಞಾನಂ ಅವರು, ಒಂದು ವಿಶೇಷವಾದ ಭವಿಷ್ಯವನ್ನು ನೀಡಿದ್ದಾರೆ. ಚುನಾವಣಾ ಫಲಿತಾಂಶ ಏನಾಗಬಹುದು, ಯಾವ ಪಕ್ಷಕ್ಕೆ ಕೇಂದ್ರದಲ್ಲಿ ಸರ್ಕಾರ ರಚಿಸಲು ಬಹುಮತ ಒಲಿಯುತ್ತದೆ ಎಂಬುದನ್ನು ತಮ್ಮ ಜ್ಯೋತಿಷ್ಯ ಜ್ಞಾನದ ಮೂಲಕ ಅವರು ಹೇಳುವ ಪ್ರಯತ್ನ ಮಾಡಿದ್ದಾರೆ.

ತಮ್ಮ ತರ್ಕವನ್ನು ಫೇಸ್ ಬುಕ್ ನಲ್ಲಿ ಹೇಳಿದ್ದಾರೆ ಅವರು. ಅದು ಹೀಗಿದೆ… “ಈ ದಿನವನ್ನು ಹೇಗೆ ಬೇಕಾದರೂ ನೋಡಿ.ಸೂರ್ಯದಯಕ್ಕೆ ವೃಷಭ ಲಗ್ನ.ಲಗ್ನದಲ್ಲೇ ಲಾಭಾಧಿಪತಿ ಗುರು. ಮಾಳವ್ಯ ಮಹಾಪುರುಷ ಮತ್ತು ಶಶಕ ಮಹಾಯೋಗ.ನಿಪುಣ ಯೋಗ.ಬುಧ ಶುಕ್ರ ಯೋಗ.ಲಾಭದಲ್ಲಿ ರಾಹು. ಇನ್ನು ಸೂರ್ಯಾಸ್ತ ಕಾಲಕ್ಕೆ ವೃಶ್ಚಿಕ ಲಗ್ನ.ದ್ವಿತೀಯ ಪಂಚಮಾಧಿಪತಿ ಗುರು ಸಪ್ತಮದಲ್ಲಿ. ಶಶಕ ಮತ್ತು ಮಾಲವ್ಯ ಮಹಾಪುರುಷ ಯೋಗ.ನಿಪುಣ ಯೋಗ’’ ಎಂದು ಅವರು ಹೇಳಿದ್ದಾರೆ. ತಮ್ಮ ಅನಿಸಿಕೆಯನ್ನು ಮುಂದುವರಿಸಿ, “ಇದು ಚುನಾವಣಾ ಫಲಿತಾಂಶದ ಕಾಲ. ಹಾಗಾದರೆ ಯಾವ ಪಕ್ಷ ಬರಬಹುದು? ಮಾಲವ್ಯ ಯೋಗವು ಲಕ್ಷ್ಮಿ ಯೋಗ.ಲಕ್ಷ್ಮಿಯ ಪೀಠ ಸಾನ್ನಿಧ್ಯ ಯಾರಲ್ಲಿದೆಯೋ ಅವರು ನಾಲ್ಕು ಶತಕ ಬಾರಿಸಬಹುದು.

ಇದು ಯಾವ ಪಕ್ಷದ ಪರವೂ ಅಲ್ಲ ಮಹರಾಯರೇ. ಗೆಲುವಿನ ಸ್ಥಿತಿಯಷ್ಟೆ. ಕೇವಲ ವಿಶ್ಲೇಷಣೆ. ಅವರವರ ತೃಪ್ತಿಗೆ ತಕ್ಕಂತೆ ಯಾವ ಪಕ್ಷವನ್ನಾದರೂ ಇದಕ್ಕೆ ಹೊಂದಿಸಿಕೊಳ್ಳಿ. ಊಹೆ ತಪ್ಪಾಗದಂತೆ ವಿಮರ್ಷಿಸಿಕೊಳ್ಳಿ’’ ಎಂದು ಹೇಳುವ ಮೂಲಕ ಅವರು ಅವರವರ ಭಾವಕ್ಕೆ, ಅವರವರ ಭಕುತಿಗೆ ಎಂಬಂತೆ ಸಾರ್ವಜನಿಕರಿಗೇ ಯೋಚಿಸಲು ಬಿಟ್ಟಿದ್ದಾರೆ.

ಒಟ್ಟಾರೆ ಇದೀಗ ಅವರು ನುಡಿದಿರುವ ಭವಿಷ್ಯ ಎಷ್ಟರಮಟ್ಟಿಗೆ ನಿಜವಾಗಲಿದೆ ಎಂಬ ಕುತೂಹಲ ಕೆರಳಿಸಿದೆ. ಈ ಹಿಂದೆಯೂ ಅವರು ನುಡಿದಿರುವ ಹಲವಾರು ಭವಿಷ್ಯಗಳು ನಿಜವಾಗಿರುವ ಕಾರಣ ಈಗಿನ ಭವಿಷ್ಯ ಸಹಾ ಕೌತುಕಕ್ಕೆ ಕಾರಣವಾಗಿದೆ.