ಬೆಳಗಾವಿ: ಕೊನೆಗೂ ಬೆಳಗಾವಿ ಜಿಲ್ಲಾಡಳಿತ ರಾಜ್ಯೋತ್ಸವಕ್ಕೆ ದಿನ ನಿಗದಿ ಮಾಡಿದೆ. ಪ್ರತಿವರ್ಷದಂತೆ ಈ ವರ್ಷವೂ ಕರ್ನಾಟಕ ರಾಜ್ಯೋತ್ಸವ ನವೆಂಬರ್ ಒಂದರಂದೇ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ತಿಳಿಸಿದರು. ಅಂದೇ ರಾಜ್ಯೋತ್ಸವ ಆಚರಣೆ ಮತ್ತು ಮೆರವಣಿಗೆ ನಡೆಸಲಾಗುವುದು. ಆದರೆ, ಜಿಲ್ಲಾಡಳಿತ ಎಂಇಎಸ್ ನಡೆಸುವ ಕರಾಳ ದಿನಕ್ಕೆ ಅನುಮತಿ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕನ್ನಡ ಸಂಘಟನೆಗಳ ಪೂರ್ವಭಾವಿ ಸಭೆಯಲ್ಲಿ ರಾಜ್ಯೋತ್ಸವ ಆಚರಣೆಯ ಈ ಮಹತ್ವದ ಘೋಷಣೆ ಮಾಡಲಾಗಿದೆ.

ಈ ಸಲ ಕರ್ನಾಟಕ ರಾಜ್ಯೋತ್ಸವದ ದಿನವೇ ದೀಪಾವಳಿ ಹಬ್ಬ ಬಂದಿದೆ. ಈ ಹಿನ್ನಲೆಯಲ್ಲಿ ರಾಜ್ಯೋತ್ಸವ ಮೆರವಣಿಗೆ ನಡೆಸುವ ದಿನಾಂಕದ ಬಗ್ಗೆ ಗೊಂದಲವಿತ್ತು. ಕೊನೆಗೂ ಜಿಲ್ಲಾಡಳಿತ ಈ ಕುರಿತ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದೆ.