ಮಂಗಳೂರು :
ನಾಪತ್ತೆಯಾಗಿದ್ದ ನಾಲ್ವರು ವಿದ್ಯಾರ್ಥಿಗಳು ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆ ಹಳೆಯಂಗಡಿ ಡ್ಯಾಮ್ ಬಳಿ ನಡೆದಿದೆ. ಮಂಗಳವಾರ ರಾತ್ರಿ ಇವರ ಶವ ಪತ್ತೆಯಾಗಿದೆ.

ಹತ್ತನೇ ತರಗತಿ ವಿದ್ಯಾರ್ಥಿಗಳಾದ ಯಶ್ಚಿತ್‌ ಚಂದ್ರಕಾಂತ್, ನಿರುಪ್,ಅನ್ವಿತ್ ಹಾಗೂ ರಾಘವೇಂದ್ರ ಅವರು ಪ್ರಿಪರೇಟರಿ ಪರೀಕ್ಷೆ ಮುಗಿಸಿ ತೆರಳಿದ್ದವರು ನಾಪತ್ತೆಯಾಗಿದ್ದರು. ಈಜಲು ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹತ್ತನೇ ತರಗತಿಗೆ ಪೂರ್ವಸಿದ್ಧತಾ ಪರೀಕ್ಷೆ ನಡೆಯುತ್ತಿದ್ದು, ಮಂಗಳವಾರ ಮಧ್ಯಾಹ್ನ ಸುಮಾರು 1.30ಕ್ಕೆ ಪರೀಕ್ಷೆ ಮುಗಿಸಿ ಶಾಲೆಯಿಂದ ಹೊರಗೆ ತೆರಳಿದ್ದ ಇವರು ಬಳಿಕ ನಾಪತ್ತೆಯಾಗಿದ್ದರು. ಈ ಕುರಿತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಸಂಜೆ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪೊಲೀಸರು ಶಾಲೆಯ ಪರಿಸರದ ಸಿಸಿ ಟಿವಿ ಕ್ಯಾಮರಾ ಪರಿಶೀಲನೆ ನಡೆಸಿ, ಬಳಿಕ ಶೋಧ ಕಾರ್ಯ ಆರಂಭಿಸಿದ್ದರು. ಪರೀಕ್ಷೆ ಮುಗಿಸಿದ ಬಳಿಕ ಸಹಪಾಠಿಗಳೊಂದಿಗೆ ಈ ವಿದ್ಯಾರ್ಥಿಗಳು ಅಣೆಕಟ್ಟಿಗೆ ಈಜಲೆಂದು ತೆರಳಿ ಆಳದ ಅರಿವಿಲ್ಲದೆ ನೀರಿಗೆ ಇಳಿದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

ಎಸ್‌ಎಸ್‌ಎಲ್‌ಸಿ ಪ್ರಿಪರೇಟರಿಯ ‌3 ಪರೀಕ್ಷೆಗಳು ಮಾತ್ರ ಮುಗಿದಿದ್ದವು. ಇನ್ನು ‌3 ಪರೀಕ್ಷೆಗಳು ಬಾಕಿ ಇತ್ತು. ಒಟ್ಟು 7 ಮಂದಿ ಸುರತ್ಕಲ್ ಪೇಟೆವರೆಗೆ ಜತೆಗಿದ್ದು ಬಳಿಕ ಮೂವರು ಮನೆಗೆ ತೆರಳಿದ್ದರು. ಇವರು ಸುರತ್ಕಲ್ ಮಾರುಕಟ್ಟೆ ಬಳಿ ತಿಂಡಿ ತಿಂದು, ಬಳಿಕ ರಿಕ್ಷಾ ಪಾರ್ಕ್ ಬಳಿ ಬಂದಿದ್ದಾರೆ. ಬಳಿಕ ಹಳೆಯಂಗಡಿ ಕಡೆ ಹೋಗುವ ಬಸ್ ಹಿಡಿದ್ದಾರೆ ಎಂಬ ಮಾಹಿತಿ ಪೊಲೀಸ್ ತನಿಖೆ ವೇಳೆ ಗೊತ್ತಾಗಿತ್ತು. ಪೋಷಕರು ಹಾಗೂ ಪೊಲೀಸರು ಎಲ್ಲಾ ಕಡೆ ಹುಡುಕಾಡಿದ್ದರು. ಆದರೆ ರಾತ್ರಿ ಮೂಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯ ಹಳೆಯಂಗಡಿಯ ಸಮೀಪದಲ್ಲಿನ ರೈಲ್ವೆ ಸೇತುವೆಯ ಕೆಳಭಾಗದ ನದಿಯ ಬಳಿಯಲ್ಲಿ ಮಕ್ಕಳ ಶಾಲೆಯ ಬ್ಯಾಗ್‌, ಯೂನಿಫಾರ್ಮ್‌ ಪತ್ತೆಯಾಗಿತ್ತು ನಂತರ ನದಿಯಲ್ಲಿ ಶೋಧ ಕಾರ್ಯ ನಡೆಸಿದ ಬಳಿಕ ನಾಲ್ವರು ವಿದ್ಯಾರ್ಥಿಗಳ ಶವ ಪತ್ತೆಯಾಗಿದೆ.