ಗೋಕಾಕ:
ಅಂಕಲಗಿ ಪಿಎಸ್ಐ ನಡೆ ಖಂಡಿಸಿ ಗೋಕಾಕ ನ್ಯಾಯವಾದಿಗಳು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ಬೃಹತ್‌ ಪ್ರತಿಭಟನೆ ನಡೆಸಿದರು.
ಇದಕ್ಕೂ ಮೊದಲು ಗೋಕಾಕಿನ ನ್ಯಾಯವಾದಿಗಳು ಬಸವೇಶ್ವರ ವೃತ್ತದಲ್ಲಿ ಜಮಾಯಿಸಿಕೊಂಡು ರಸ್ತೆ ತಡೆ ನಡೆಸಿ ಅಂಕಲಗಿ ಪಿಎಸ್‌ ಐ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ವೇಳೆ ನ್ಯಾಯವಾಡಿ ಎಸ್.‌ ವಿ. ದೇಮಶೆಟ್ಟಿ ಮಾತನಾಡಿ, ವಯಕ್ತಿಕ ಕಾರಣಕ್ಕೆ ಹಲ್ಲೆಗೊಳಗಾದ ನ್ಯಾಯವಾದಿ ದೇಸಾಯಿ ಎಂಬುವರು ಅಂಕಲಗಿ ಪೊಲೀಸ್‌ ಠಾಣೆಗೆ ಹೋಗಿ ಹಲ್ಲೆ ಮಾಡಿರುವರ ವಿರುದ್ಧ ದೂರು ನೀಡಿಲು ಹೋದಾಗ ಅಂಕಲಗಿ ಪೊಲೀಸ್‌ ಠಾಣೆ ಪೊಲೀಸರು ಯಾವುದೇ ದೂರನ್ನು ತೆಗೆದುಕೊಂಡಿಲ್ಲ. ಅಲ್ಲದೇ ಪಿಎಸ್‌ ಐ ಕೂಡಾ ದೂರು ನೀಡಲು ಬಂದ ದೇಸಾಯಿ ಎಂಬ ವಕೀಲರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನ್ಯಾಯ ಒದಗಿಸಬೇಕಾದ ಅಂಕಲಗಿ ಪಿಎಸ್‌ ಐ ಅವರು ಹಲ್ಲೆಗೊಳೆಗಾದ ವಕೀಲನಿಗೆ ಈ ನಿಂದನೆ ಮಾಡಿರುವ ಕ್ರಮ ಖಂಡನೀಯವಾಗಿದೆ. ವಕೀಲರು ಸಮಾಜದ ಅಭಿರಕ್ಷಕರು, ಇವರನ್ನೇ ಪೊಲೀಸ್ ಇಲಾಖೆಯವರು ಹೀಗೆ ನಡೆಸಿಕೊಂಡರೆ, ಇನ್ನು ಸಾಮಾನ್ಯ ಜನರ ಗತಿ ಏನು ಎಂದು ಪ್ರಶ್ನಿಸಿದರು.

ನ್ಯಾಯವಾದಿಗಳು ಇರುವುದು ಜನರಿಗೋಸ್ಕರ, ಎಲ್ಲ ಕಡೆ ನ್ಯಾಯವಾದಿಗಳು ಜನರಿಗೆ ನ್ಯಾಯ ನೀಡಲೇಂದೆ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಸಮಾಜದಲ್ಲಿ ನ್ಯಾಯವಾದಿಗಳಿಗೆ ಒಂದು ವಿಶೇಷವಾದ ಗೌರವಿದಿದೆ. ಇಂತಹ ಗೌರವವಿರುವ ನ್ಯಾಯವಾದಿಗಳಿಗೆ ಅಂಕಲಗಿ ಪಿಎಸ್‌ ಐ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ವಕೀಲ ವೃತ್ತಿಗೆ ಅನ್ಯಾಯ ಮಾಡಿದ್ದಾರೆ. ಕೂಡಲೇ ಇಂತಹ ದುರ್ನಡತೆ ತೋರಿದ ಅಂಕಲಗಿ ಪಿಎಸ್‌ ಐ ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ಗೋಕಾಕ ನ್ಯಾಯವಾದಿಗಳು ಭಾಗವಹಿಸಿದ್ದರು.