ರಾಮದುರ್ಗ (ಬೆಳಗಾವಿ): ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಹಣ ಕಳೆದ 10 ತಿಂಗಳಿಂದ ರಾಜ್ಯದ ಬಡ ಮಹಿಳೆಯರ ಪಾಲಿಗೆ ಸಂಜೀವಿನಿಯಾಗುತ್ತಿದೆ.

ಗೃಹಲಕ್ಷ್ಮಿ ಹಣದಿಂದ ಬಡ ಮಹಿಳೆಯೊಬ್ಬರು ಮೊನ್ನೆಯಷ್ಟೆ ತಮ್ಮ ಮನೆಗೆ ಫ್ರೀಜ್ ಖರೀದಿಸಿದ್ದರೆ, ಮತ್ತೋರ್ವ ಮಹಿಳೆ ತನಗಿಷ್ಟದ ಮೊಬೈಲ್ ಖರೀದಿಸಿದ್ದರು. ಬಡ ವಿದ್ಯಾರ್ಥಿಗಳ ಪಾಲಿಗೆ ಈ ಯೋಜನೆ ಹಲವು ರೀತಿಯಲ್ಲಿ ವರದಾನವಾಗಿದೆ.

ಇದೀಗ ಬೆಳಗಾವಿಯ ರಾಮದುರ್ಗದ ಸುರೇಬಾನ – ಮನಿಹಾಳ ಗ್ರಾಮದ ಮಹಿಳೆಯೊಬ್ಬರು ಕಳೆದ 10 ತಿಂಗಳ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು, ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.

ರಾಮದುರ್ಗದ ಮನಿಹಾಳ ಗ್ರಾಮದ ಸಕ್ಕುಬಾಯಿ ಈರಣ್ಣ ಕರದಿನ, ಹಲವು‌ ತಿಂಗಳಿಂದ ಕಣ್ಣಿನ ಸಮಸ್ಯೆ ಎದುರಿಸುತ್ತಿದ್ದರು. ಬಲಗಣ್ಣಿನಲ್ಲಿ ಪೊರೆ ಬಂದಿದ್ದ ಕಾರಣ ಶಸ್ತ್ರಚಿಕಿತ್ಸೆ ಅನಿವಾರ್ಯ ಆಗಿತ್ತು. ಹಣಕಾಸಿನ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೆ ಸುಮ್ಮನಿದ್ದ ಸಕ್ಕುಬಾಯಿ, ಕಳೆದ 10 ತಿಂಗಳಿಂದ ರಾಜ್ಯ ಸರ್ಕಾರದಿಂದ ಬರುತ್ತಿರುವ ಗೃಹಲಕ್ಷ್ಮಿ ಯೋಜನೆಯ ಮೊತ್ತವನ್ನು ಕೂಡಿಟ್ಡು, ಕಳೆದ ವಾರ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ರಾಮದುರ್ಗದ ಡಾ.ವಿಜಯ್ ಸುಲ್ತಾನ್ ಪುರ ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.

ಪತಿ ಈರಣ್ಣ ಕರದಿನ, ನೇಕಾರರಾಗಿ ಕೆಲಸ ಮಾಡುತ್ತಿದ್ದು, ಮೂರು‌ ಮಕ್ಕಳ ಕೂಡು ಕುಟುಂಬ ಇವರದ್ದಾಗಿದೆ. ಗೃಹಲಕ್ಷ್ಮಿ ಯೋಜನೆ ನಮ್ಮ ಕುಟುಂಬವನ್ನು ಕೈಹಿಡಿತು. ಹಿಂದಿನ ಮಂಗಳವಾರ ನನ್ನ ಪತ್ನಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದರು. ಒಟ್ಟು 26 ಸಾವಿರ ಬಿಲ್ ಆಗಿದ್ದು, ಗೃಹಲಕ್ಷ್ಮಿ ಯೋಜನೆಯಿಂದ 20 ಸಾವಿರ ರೂಪಾಯಿ ಕೂಡಿಟ್ಟಿದ್ದೇವು. ಹೀಗಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಅನುಕೂಲವಾಯಿತು ಎಂದು ಈರಣ್ಣ ಕರದಿನ ಸಂತಸ ವ್ಯಕ್ತಪಡಿಸಿದರು.

*ಸಿಎಂ, ಡಿಸಿಎಂ, ಸಚಿವೆಗೆ ಧನ್ಯವಾದ*
ಗೃಹಲಕ್ಷ್ಮಿ ಯೋಜನೆಯ ರೂವಾರಿಗಳಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಧನ್ಯವಾದ ಹೇಳಬೇಕು. ಅವರು ನೀಡುವ ಎರಡು ಸಾವಿರ ರೂಪಾಯಿಯಿಂದ ನನ್ನ ಕಣ್ಣಿನ ಸಮಸ್ಯೆಗೆ ಪರಿಹಾರ ಸಿಕ್ಕಿತು ಎಂದು ಸಕ್ಕುಬಾಯಿ ಕರದಿನ ಹೇಳಿದರು.
ಒಟ್ಟಾರೆ, ಗೃಹಲಕ್ಷ್ಮೀ ಯೋಜನೆ ರಾಜ್ಯದ ಮಹಿಳೆಯರ ಪಾಲಿಗೆ ಭಾಗ್ಯ ಲಕ್ಷ್ಮೀಯೇ ಆಗಿದೆ.