ಪುಣೆ: ಎನ್‌ಸಿಪಿ ಶರದ್‌ಚಂದ್ರ ಪವಾರ್ ಪಕ್ಷದ ಮುಖ್ಯಸ್ಥ ಶರದ್‌ ಪವಾರ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಅವರನ್ನು ಊಟಕ್ಕೆ ಆಹ್ವಾನಿಸಿದ್ದು, ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಮಾ.2 ರಂದು ನಡೆಯಲಿರುವ ‘ನಮೋ ಮಹಾರೋಜ್ ಗಾರ್ ಮೇಳಾವ್’ನಲ್ಲಿ ಭಾಗಿಯಾಗಲು ಪುಣೆಯ ಬಾರಾಮತಿಗೆ ಭೇಟಿ ನೀಡುತ್ತಿರುವ ಈ ನಾಯಕರನ್ನು ಶರದ್ ಪವಾರ್ ಆಹ್ವಾನಿಸಿದ್ದಾರೆ.

ರಾಜಕೀಯ ವಿರೋಧಿಗಳಾದ ಇವರನ್ನು ಊಟಕ್ಕೆ ಆಹ್ವಾನಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಅಜಿತ್, ಶರದ್ ಸಂಬಂಧ ಈಗಾಗಲೇ ಹಳಸಿದೆ.

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಶರದ್‌ಚಂದ್ರ ಪವಾರ್) ಅಧ್ಯಕ್ಷ ಶರದ್ ಪವಾರ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ, ಉಪಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಹಾಗೂ ಅಜಿತ್ ಪವಾರ್ ಅವರನ್ನು ಊಟಕ್ಕೆ ಆಹ್ವಾನಿಸಿದ್ದು, ಇದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ಮಾರ್ಚ್ 2ರಂದು ಬಾರಾಮತಿಗೆ ಬರುತ್ತಿರುವ ಗಣ್ಯರಿಗೆ ತಮ್ಮ ಮನೆಯಲ್ಲಿ ಊಟ ಆಯೋಜಿಸಿರುವುದಾಗಿ ಶರದ್ ಹೇಳಿದ್ದಾರೆ. ಪಕ್ಷದ ವಿಭಜನೆ ಸೇರಿದಂತೆ ತಮ್ಮ ಹಲವು ಹಿನ್ನಡೆಗೆ ಕಾರಣರಾದವರನ್ನು ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದ್ದರ ಹಿಂದಿನ ಮರ್ಮವೇನು ಎಂಬುದರ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಬಾರಾಮತಿಯ ವಿದ್ಯಾ ಪ್ರತಿಷ್ಠಾನ ಕಾಲೇಜು ಆವರಣದಲ್ಲಿ ‘ನಮೋ ಮಹಾರೋಜ್‌ಗಾರ್‌ ಮೇಳಾವ್’ ಆಯೋಜನೆಗೊಂಡಿದೆ. ಇದರಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಪಾಲ್ಗೊಳ್ಳುತ್ತಿದ್ದಾರೆ. 1999ರಲ್ಲಿ ತಾವೇ ಸ್ಥಾಪಿಸಿದ ಎನ್‌ಸಿಪಿ ಇಬ್ಭಾಗವಾದ ನಂತರ ಅದಕ್ಕೆ ಕಾರಣರಾದ ಅಜಿತ್ ಪವಾರ್ ಸಹಿತ ಹಲವರು ಶರದ್ ವಿರೋಧಿಗಳಾದರು. ಎನ್‌ಸಿಪಿ ಇಬ್ಭಾಗವಾದ ನಂತರ ಪಕ್ಷದ ಚಿಹ್ನೆಯೂ ಶರದ್ ಅವರಿಗೆ ಒಲಿಯಲಿಲ್ಲ. ತಮ್ಮ ವಿರೋಧಿ ಶಿವಸೇನಾ–ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಅಜಿತ್ ಪವಾರ್ ವಿರುದ್ಧ ಶರದ್ ಗುಡುಗಿದ್ದರು. ಆದರೆ ಇದೀಗ ಆಯೋಜನೆಗೊಂಡಿರುವ ಈ ಮೇಳದಲ್ಲಿ ಪಾಲ್ಗೊಳ್ಳಲು ಬರುತ್ತಿರುವ ಈ ವಿರೋಧಿ ಬಣವನ್ನೇ ಊಟಕ್ಕೆ ಆಹ್ವಾನಿಸಿರುವುದು ಹಲವು ಕುತೂಹಲಕ್ಕೆ ಕಾರಣವಾಗಿದೆ.